ಸಂಶಯ ಮೂಡಿಸುತ್ತಿದೆ ಆನೆಗಳ ಸಾವು:ಕಾರಣಕರ್ತರು ಇವರೇನಾ?
ಮಡಿಕೇರಿ, ಮೇ 8:ಮಡಿಕೇರಿ ಎಂದರೆ ಸೊಬಗು, ಮಡಿಕೇರಿ ಎಂದರೆ ಸೌಂದರ್ಯ. ಹೌದು, ಪ್ರಾಕೃತಿಕ ಕಾನನದ ಬೀಡಾಗಿರುವ ಮಡಿಕೇರಿ ಹೆಚ್ಚು ಹೆಸರು ಮಾಡಿರುವುದು ಕಾಫಿ, ಜೇನುತುಪ್ಪ ಹಾಗೂ ಆನೆಗಳ ಬಿಡಾರದಿಂದ.
ಆದರೆ, ಇಲ್ಲಿನ ಅನೇಕ ಆನೆ ಶಿಬಿರಗಳಲ್ಲಿ ಆನೆಗಳಿಗೆ ಉಳಿಗಾಲವಿಲ್ಲದ ಸ್ಥಿತಿ ಏರ್ಪಟ್ಟಿದೆ. ಅದು ಸಾಕಾನೆ ಇರಲಿ ಅಥವಾ ಕಾಡಾನೆ ಇರಲಿ, ಒಂದಿಲ್ಲೊಂದು ರೀತಿಯಲ್ಲಿ ಸಾವಿಗೀಡಾಗುತ್ತಿವೆ. ಅವುಗಳ ದುರಂತ ಅಂತ್ಯ ಒಂದಿಲ್ಲೊಂದು ಸಂಶಯವನ್ನು ಹುಟ್ಟು ಹಾಕುತ್ತಿವೆ.
ದ್ರೋಣ, ಕಾರ್ತಿಕ್, ರೌಡಿ ರಂಗ ಹಾಗೂ ಕಳೆದ ವಾರದ ಹಿಂದಷ್ಟೇ ಮೃತಪಟ್ಟಿರುವ ಕಾಡಾನೆಯ ಸಾವೇ ಇದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ತನ್ನದಾಗಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳಿಗೆ ಬದುಕಲು ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ.
ದಸರಾ ಆನೆ ದ್ರೋಣ ಹಠಾತ್ ಸಾವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಮಾವುತರು
ವಿದ್ಯುತ್ ಶಾಕ್ ಗೆ ಇತ್ತೀಚೆಗಷ್ಟೇ ಜೀವ ಕಳೆದುಕೊಂಡಿರುವ 4 ಕಾಡಾನೆಗಳು, ಅಲ್ಲದೇ ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಹೆಣ್ಣಾನೆ, ಗಾಯಗೊಂಡು ಚಿಕಿತ್ಸೆ ದೊರೆಯದೆ ನರಳಿ- ನರಳಿ ಪ್ರಾಣವನ್ನು ಬಿಟ್ಟ ಕಾಡಾನೆ, ಆಹಾರ ಅರಸಿ ಬಂದು ಗುಂಡೇಟಿಗೆ ಬಲಿಯಾದ ಒಂಟಿ ಸಲಗ, ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟ ಹೆಣ್ಣಾನೆ ಇದು ದುರಂತ ಆನೆಗಳ ಪಟ್ಟಿ. ಇದರಲ್ಲಿ ಕಾರ್ತಿಕ್ ಹಾಗೂ ದ್ರೋಣ ಕೂಡ ಸೇರಿದ್ದಾನೆ.
ಸಾವನ್ನಪ್ಪಿದ ಆನೆಗಳ ಪಟ್ಟಿ
ಕಳೆದ ಒಂದು ವರ್ಷದಿಂದೀಚೆಗೆ ಕೊಡಗಿನಲ್ಲಿ ಸಾವನ್ನಪ್ಪಿದ ಆನೆಗಳ ಪಟ್ಟಿ ನೋಡುವುದಾದರೆ 10ಕ್ಕೂ ಅಧಿಕ ಕಾಡಾನೆಗಳು ಹಾಗೂ 3 ಕ್ಕೂ ಅಧಿಕ ಸಾಕಾನೆಗಳು ನಿತ್ರಾಣಗೊಂಡು ಸಾವಿಗೀಡಾಗಿವೆ.
ದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತ
ಒಂದೊಂದು ಕಾರಣ ನೀಡುತ್ತಾರೆ
ಇನ್ನು ದುಬಾರೆ ಹಾಗೂ ಮತ್ತಿಗೋಡು ಶಿಬಿರದಲ್ಲಿರುವ ಆನೆಗಳನ್ನು ಅರಣ್ಯ ಇಲಾಖೆ ನಿರ್ಲಕ್ಷಿಸುತ್ತಿದೆ.ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಮತ್ತಿಗೋಡಿನ ಶಿಬಿರದಲ್ಲಿದ್ದ ರೌಡಿ ರಂಗ ಬಸ್ ಅಪಘಾತದಲ್ಲಿ ಸಾವಿಗೀಡಾಗಿತ್ತು. ರಾತ್ರಿ ವೇಳೆ ಅದನ್ನು ಹೊರಗೆ ಬಿಟ್ಟು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇನ್ನು ಮಾವುತರ ಜೊತೆ ಪುಂಡಾಟ ಮೆರೆಯುತ್ತಿದ್ದ ದುಬಾರೆಯ ಕಾರ್ತಿಕ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ. ಅವನ ಸಾವಿಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ನೀಡುತ್ತಿದ್ದಾರೆ.
ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು
ಕುಖ್ಯಾತಿಗೆ ಪಾತ್ರವಾಗುತ್ತಿದೆ ಕೊಡಗು
ಇದರೊಟ್ಟಿಗೆ ದಸರಾ ಆನೆ ದ್ರೋಣನಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಹಿಂದೇಟು ಹಾಕಿದ್ದ ಹಿನ್ನೆಲೆಯಲ್ಲಿ ಪ್ರಾಣ ಬಿಟ್ಟಿದ್ದಾನೆ.ಹೆಣ್ಣಾನೆಯೊಂದು ಸಹ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಈ ಮೂಲಕ ಅತಿ ಹೆಚ್ಚು ಆನೆಗಳು ಸಾವನ್ನಪ್ಪುತ್ತಿರುವ ಜಿಲ್ಲೆ ಎಂಬ ಕುಖ್ಯಾತಿಗೆ ಕೊಡಗು ಪಾತ್ರವಾಗುತ್ತಿರುವುದು ಮಾತ್ರ ಬೇಸರದ ಸಂಗತಿಯೇ ಸರಿ.
ಆನೆಗಳ ಉಳಿವಿಗೆ ಮುಂದಾಗಲಿ
ಆನೆಗಳ ಸಾವಿಗೆ ಒಂದೊಂದು ಕಾರಣವನ್ನು ಅರಣ್ಯ ಇಲಾಖೆ ನೀಡುತ್ತಿದೆ. ಪೂರ್ವನಿಯೋಜಿತವಾಗಿ ಗಮನಹರಿಸಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ ಎನ್ನುತ್ತಾರೆ ಇಲ್ಲಿನ ಮಾವುತರ ವರ್ಗ. ಇನ್ನಾದರೂ ಗಜ ಸಂತಾನ ಕುಸಿಯಲು ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದನ್ನು ನಿಲ್ಲಿಸಿ ಆನೆಗಳ ಸಂತತಿ ಉಳಿವಿಗೆ ಮುಂದಾಗಬೇಕಾದ ಅನಿವಾರ್ಯತೆ ಇದೆ.