ಮೈಕೊಡವಿ ಮೇಲೆದ್ದ ಮಡಿಕೇರಿ ನಗರ ಕಾಂಗ್ರೆಸ್ ಮಾಡಿದ್ದೇನು?
ಮಡಿಕೇರಿ, ಜೂನ್ 19: ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ, ಅದರಲ್ಲೂ ಮಡಿಕೇರಿ ತಾಲ್ಲೂಕಿನಲ್ಲಿ ನಿದ್ರಾವಸ್ಥೆಯಲ್ಲಿದ್ದ ನಗರ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ. ಹೀಗಾಗಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚಿಸಿ, ಜನರ ಬಳಿಗೆ ತೆರಳುವ ತೀರ್ಮಾನ ಕೈಗೊಂಡಿದೆ.
ವಿಧಾನಸಭೆ, ಲೋಕಸಭೆಯಲ್ಲಿ ಮೇಲಿಂದ ಮೇಲೆ ಸೋಲು ಕಂಡ ಬಳಿಕವೂ ಕ್ರಿಯಾಶೀಲವಾಗದೆ ಹೋದರೆ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂಬುದು ಮನವರಿಕೆಯಾದ ಮೇಲೆ ಮೈಕೊಡವಿಕೊಂಡು ಎದ್ದಿರುವ ಜಿಲ್ಲಾ ನಾಯಕರು ನೇರವಾಗಿ ಜನರ ಬಳಿಗೆ ತೆರಳುವ ಚಿಂತನೆ ಮಾಡಿದ್ದಾರೆ.
ಕೊಡಗಿನಲ್ಲೂ ಆಸ್ಪತ್ರೆಗೆ ಅಭಿಯಾನ - ಸ್ಯಾಂಡಲ್ ವುಡ್ ಬೆಂಬಲ
ಕೇವಲ ಚುನಾವಣೆ ಬಂದಾಗಷ್ಟೆ ಪಕ್ಷ, ಪ್ರಚಾರ ಎನ್ನುತ್ತಾ ಮನೆ ಬಾಗಿಲಿಗೆ ಹೋಗುವ ಬದಲಿಗೆ ಇತರೆ ದಿನಗಳಲ್ಲಿಯೂ ಒಂದಲ್ಲ ಒಂದು ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಜನರ ನಡುವೆಯಿದ್ದರೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆಯಬಹುದು ಎಂಬ ತೀರ್ಮಾನಕ್ಕೆ ಕೈ ನಾಯಕರು ಬಂದಂತೆ ಕಾಣುತ್ತಿದೆ.
ಸಾಮಾನ್ಯವಾಗಿ ದೇಶದ ಯಾವುದೇ ಭಾಗದಲ್ಲಿ ಪ್ರಕೃತಿ ವಿಕೋಪ, ಅವಘಡಗಳು, ಯಾವುದೇ ದುರಂತಗಳು ಸಂಭವಿಸಲಿ, ತಕ್ಷಣ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡಲು ಸಿದ್ಧರಿರುತ್ತಾರೆ. ಇದು ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆಯಲು ಪ್ರಮುಖ ಕಾರಣ.
ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಿದ್ರಾವಸ್ಥೆಗೆ ಜಾರಿದೆ. ಮೇಲ್ಮಟ್ಟದ ನಾಯಕರಲ್ಲಿನ ಶೀತಲ ಸಮರ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಬೇಸರ ತರಿಸಿದೆ. ಅಷ್ಟೇ ಅಲ್ಲ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲು ಪಕ್ಷದ ಕಾರ್ಯಕರ್ತರಲ್ಲಿದ್ದ ಉತ್ಸಾಹಕ್ಕೆ ತಣ್ಣೀರೆರಚಿದೆ. ಹೀಗಿರುವಾಗ ಮಡಿಕೇರಿಯಲ್ಲಿ ನಗರ ಕಾಂಗ್ರೆಸ್ ಕ್ರಿಯಾಶೀಲವಾಗುತ್ತಿರುವುದು ಅಚ್ಚರಿ ಮೂಡಿಸಿದೆ.
ಜ್ಯೋತಿಷಿಗಳ ಪ್ರಕಾರ, ಕೊಡಗಿನಲ್ಲಿ ಈ ಬಾರಿಯೂ ಮಳೆ ಅಬ್ಬರಿಸಲಿದೆ!
ಕಳೆದ ವರ್ಷ ನಡೆದ ಪ್ರಾಕೃತಿಕ ವಿಕೋಪದಿಂದ ಒಂದಷ್ಟು ಸಾವು, ನೋವು ಮತ್ತು ಆಸ್ತಿ ನಷ್ಟವಾಗಿದೆ. ಇದರಿಂದ ಹಲವರಿಗೆ ತೊಂದರೆಯಾಗಿದ್ದು, ಬಹಳಷ್ಟು ಜನರ ಬದುಕು ಇನ್ನೂ ಸುಧಾರಿಸಿಲ್ಲ. ಹೀಗಿರುವಾಗ ಕಷ್ಟದಲ್ಲಿರುವವರಿಗೆ ಹೆಗಲು ಕೊಟ್ಟು ನಿಲ್ಲುವ ಸಲುವಾಗಿ ಇದೀಗ ನಗರ ಕಾಂಗ್ರೆಸ್ ಸಮಿತಿ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿಯನ್ನು ರಚಿಸಿದೆ. ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಅವರ ನೇತೃತ್ವದಲ್ಲಿ ಸಮಿತಿ ಕೆಲಸ ಮಾಡಲಿದ್ದು, ಪ್ರತಿ ಮುಂಚೂಣಿ ಘಟಕಗಳ ಅಧ್ಯಕ್ಷರು ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಸ್ವಯಂ ಸೇವಕರ ತಂಡ ಸರ್ವ ಸನ್ನದ್ಧವಾಗಿದೆ. ಸ್ವಯಂ ಸೇವಕರ ತಂಡವು ಮಡಿಕೇರಿ ನಗರದ ಪ್ರತಿ ವಾರ್ಡ್ ಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿ ಸರ್ಕಾರದಿಂದ ನೆರವನ್ನು ದೊರಕಿಸಿ ಕೊಡಲು ಸಹಾಯ ಮಾಡುವುದು, ಮೂಲ ಸೌಲಭ್ಯಗಳ ಅಗತ್ಯತೆ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಲಿದೆಯಂತೆ.
ಕಳೆದ ವರ್ಷ ಮಡಿಕೇರಿ ನಗರದಲ್ಲಿ ಹೆಚ್ಚು ಹಾನಿಗೀಡದ ಪ್ರದೇಶಗಳಾದ ಚಾಮುಂಡೇಶ್ವರಿ ನಗರ ಹಾಗೂ ಇಂದಿರಾನಗರ, ಅಜಾದ್ ನಗರ, ರಾಜೇಶ್ವರಿ ನಗರ, ತ್ಯಾಗರಾಜ ಕಾಲೋನಿ, ಸುಬ್ರಮಣ್ಯ ನಗರ, ಮಂಗಳಾದೇವಿ ನಗರಗಳನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಇಲ್ಲಿನ ಜವಾಬ್ದಾರಿಯನ್ನು ನೂತನ ಸಮಿತಿಯ ಸ್ವಯಂ ಸೇವಕರಿಗೆ ವಹಿಸಲಾಗಿದೆ. ಇಲ್ಲಿ ಸ್ವಯಂ ಸೇವಕರು ಸಂಕಷ್ಟದಲ್ಲಿರುವ ಜನರಿಗೆ ಆಸರೆಯಾಗಲಿದ್ದಾರೆಯಂತೆ. ಆ ಮೂಲಕ ಸಮಾಜಸೇವೆ ಜತೆಗೆ ಪಕ್ಷ ಸಂಘಟನೆಗೂ ಇದು ಸಹಕಾರಿಯಾಗಲಿದೆ ಎಂಬುದು ನಾಯಕರ ಆಲೋಚನೆ.
ಮುಂಗಾರು ಮಳೆ ಅನಾಹುತ ಎದುರಿಸಲು ಕೊಡಗು ಜಿಲ್ಲಾಡಳಿತ ಸನ್ನದ್ಧ
ಮಡಿಕೇರಿ ನಗರ ಕಾಂಗ್ರೆಸ್ನ ಈ ಕಾರ್ಯ ಮೇಲ್ನೋಟಕ್ಕೆ ಸಮಾಜಸೇವೆ ಎಂಬಂತೆ ಕಂಡುಬಂದರೂ ಒಳ ಮರ್ಮ, ನೆಲಕಚ್ಚಿದ ಕಾಂಗ್ರೆಸ್ಗೆ ಚೈತನ್ಯ ನೀಡುವುದು ಎಂಬುದನ್ನು ತಳ್ಳಿಹಾಕುವಂತಿಲ್ಲ. ಒಂದು ವೇಳೆ ಇದು ಕಾರ್ಯಗತವಾಗಿದ್ದೇ ಆದರೆ ಕೊಡಗಿನಲ್ಲಿ ಮತ್ತೆ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಾಧ್ಯವಾಗಲೂಬಹುದು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ನಗರಸಭೆ ಮಾಜಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಪ್ರಕಾಶ್ ಆಚಾರ್ಯ, ತಜಸ್ಸುಂ, ಗಿಲ್ಬರ್ಟ್ ಲೋಬೋ, ಮಹಿಳಾ ನಗರಾಧ್ಯಕ್ಷರಾದ ಫ್ಯಾನ್ಸಿ ಪಾರ್ವತಿ, ನಗರ ಕಾಂಗ್ರೆಸ್ನ ಉಪಾಧ್ಯಕ್ಷರಾದ ಜಪ್ರುಲ್ಲ, ಸುದಯ್ ನಾಣಯ್ಯ, ಮಾಜಿ ಬ್ಲಾಕ್ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಪ್ರೇಮಾಕೃಷ್ಣಪ್ಪ ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ಒಂದೆಡೆ ಸೇರಿ ಹೊಸ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಕೊಡಗಿನ ಕಾಂಗ್ರೆಸ್ಗೆ ಒಳಿತಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.