ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ 461 ಮಿ.ಮೀ ಅಧಿಕ ಮಳೆ!
ಮಡಿಕೇರಿ, ಜುಲೈ 15: ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 461 ಮಿ.ಮೀ ಮಳೆ ಜಾಸ್ತಿ ಸುರಿದಿದೆ.
ಕೊಡಗು ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಧಾರಾಕಾರ ಮಳೆಗೆ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ.
ಜಿಲ್ಲೆಯಲ್ಲಿ ಒಂದಷ್ಟು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಕೆಲವು ದಿನಗಳಿಂದ ಲಯ ಪಡೆಯುವುದರೊಂದಿಗೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶ, ಗದ್ದೆ ಬಯಲುಗಳು ಜಲಾವೃತವಾಗಿವೆ. ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಮತ್ತು ಮಳೆಯ ಅಬ್ಬರ ಹೆಚ್ಚಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಹೊರ ಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮುರಿದು ಬಿದ್ದ ವಿದ್ಯುತ್ ಕಂಬಗಳು
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ಅತಿ ಹೆಚ್ಚು 167 ಮಿ.ಮೀ, ವೀರಾಜಪೇಟೆ ತಾಲೂಕಿನ ಶ್ರೀಮಂಗಲದಲ್ಲಿ 163 ಮಿ.ಮೀ ಮತ್ತು ಭಾಗಮಂಡಲದಲ್ಲಿ 112 ಮಿ.ಮೀ ಮಳೆಯಾಗಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ಮತ್ತು ಕಾವೇರಿ ನದಿಗಳು ತುಂಬಿ ಹರಿಯುತ್ತಿದ್ದು, ಭತ್ತದ ಗದ್ದೆ ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ವಾಹಕಗಳಿಗೆ ಬೃಹತ್ ಮರಗಳು ಬಿದ್ದು ಹಾನಿ ಉಂಟಾಗಿದೆ. ಹಲವು ಗ್ರಾಮಗಳು ಕತ್ತಲೆಗೀಡಾಗಿವೆ. ಚೆಸ್ಕಾಂ ಸಿಬ್ಬಂದಿ ಸರಿಪಡಿಸುವ ಕಾರ್ಯ ಮಾಡುತ್ತಿದ್ದರೂ ಮಳೆ ಅಡಚಣೆ ನೀಡುತ್ತಿದೆ.
ಜನವರಿಯಿಂದ 1184.24 ಮಿ.ಮೀ ಮಳೆ
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 73.81 ಮಿ.ಮೀ. ಮಳೆ ಸುರಿದಿದ್ದು, ಕಳೆದ ವರ್ಷ ಇದೇ ದಿನ 5.24 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಈ ಬಾರಿ 1184.24 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 723.98 ಮಿ.ಮೀ ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ 55.20 ಮಿ.ಮೀ. ಮಳೆ
ಮಡಿಕೇರಿ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಸರಾಸರಿ 84.53 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.23 ಮಿ.ಮೀ ಮಾತ್ರ ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ 55.20 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 3.98 ಮಿ.ಮೀ ಮಳೆ ಸುರಿದಿತ್ತು. ಇನ್ನು ಸೋಮವಾರಪೇಟೆ ತಾಲೂಕಿನಲ್ಲಿಯೂ ವರುಣನ ಅಬ್ಬರ ಜಾಸ್ತಿಯಾಗಿದ್ದು, ಸರಾಸರಿ 81.70 ಮಿ.ಮೀ. ಸುರಿದಿದೆ. ಕಳೆದ ವರ್ಷ ಇದೇ ದಿನ 2.50 ಮಿ.ಮೀ. ಮಾತ್ರ ಸುರಿದಿತ್ತು.
ಹಾರಂಗಿಯಿಂದ 3,400 ಕ್ಯುಸೆಕ್ ನೀರು ಬಿಡುಗಡೆ
ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸದ್ಯ 14,091 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಸದ್ಯ 2,859 ಅಡಿಗಳ ಜಲಾಶಯದಲ್ಲಿ ಇದೀಗ 2853.69 ಅಡಿಯಷ್ಟು ನೀರಿದ್ದು, ಮುಂಜಾಗ್ರತಾ ಕ್ರಮವಾಗಿ 3,400 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಕಾರಣ ಬೆಟ್ಟಗುಡ್ಡ, ಕಾಡುಮೇಡು, ಕಾಫಿ ತೋಟಗಳ ನಡುವೆ ಹುದುಗಿರುವ ಜಲಾಶಯಗಳಿಗೆ ಜೀವ ಕಳೆ ಬಂದಿದ್ದು, ಭೋರ್ಗರೆದು ಧುಮುಕುತ್ತಿವೆ.
Recommended Video