ಸಿಡ್ನಿಯ ಲಿವರ್ ಪೂಲ್ ಕೌನ್ಸಿಲರ್ ಆಗಿ ಕೊಡಗಿನ ಚರಿಷ್ಮ
ಮಡಿಕೇರಿ, ಫೆಬ್ರವರಿ 17 : ಆಸ್ಟ್ರೇಲಿಯಾದ ಸಿಡ್ನಿಯ ಲಿವರ್ ಪೂಲ್ ಸಿಟಿಯ ಕೌನ್ಸಿಲರ್ ಆಗಿ ಕೊಡಗಿನ ಪ್ರತಿಭಾನ್ವಿತ ಯುವತಿ ಡಾ. ಕಲಿಯಂಡ ಚರಿಷ್ಮ ಅವರನ್ನು ಅಲ್ಲಿಯ ಆಡಳಿತ ಮಂಡಳಿ ಸರ್ವಾನುಮತದಿಂದ ಆಯ್ಕೆಮಾಡಿದೆ.
ಡಾ. ಚರಿಷ್ಮ ಅವರು ಮೂಲತಃ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕಲಿಯಂಡ ಮೊಣ್ಣಪ್ಪನವರ ಪುತ್ರ ಮಾದಪ್ಪ (ಜಯ) ಮತ್ತು ಭಾನುಮತಿ (ಚೊಟ್ಟೇರ ಕಾವೇರಪ್ಪನವರ ಪುತ್ರಿ) ಈ ದಂಪತಿಯ ಪುತ್ರಿಯಾಗಿದ್ದು, ಈ ಕುಟುಂಬ ವರ್ಗದವರೆಲ್ಲರೂ ಪ್ರಸ್ತುತ ಸಿಡ್ನಿಯ ಲಿವರ್ ಪೂಲ್ ಸಿಟಿಯಲ್ಲಿ ನೆಲೆಸಿದ್ದಾರೆ.
ಕಲಿಯಂಡ ಮಾದಪ್ಪ ಮತ್ತು ಭಾನುಮತಿ ಕುಟುಂಬ ಈ ಹಿಂದೆ ಬೆಂಗಳೂರಿನಲ್ಲಿ ನೆಲೆಸಿದ್ದ ಸಂದರ್ಭ 1987ರ ಡಿಸೆಂಬರ್ 2ರಂದು ಚರಿಷ್ಮ ಜನಿಸಿದ್ದರು. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದರೂ, ಆ ನಂತರದ ವರ್ಷಗಳ ಬಳಿಕ ಮಾದಪ್ಪ ಕುಟುಂಬ ವರ್ಗದವರೆಲ್ಲರೂ ಸಿಡ್ನಿಯ ಲಿವರ್ ಪೂಲ್ ಸಿಟಿಗೆ ತೆರಳಿ ಅಲ್ಲಿ ನೆಲೆಸಿದ್ದಾರಲ್ಲದೆ, ಲಿವರ್ ಪೂಲ್ ಸಿಟಿಯ ಪೌರತ್ವವನ್ನು ಪಡೆದರು.
ಇದರ ಮಧ್ಯೆ ಸಿಡ್ನಿಯಲ್ಲಿ 2 ವರ್ಷಗಳ ಹಿಂದೆ ಲಿವರ್ ಪೂಲ್ ಸಿಟಿಯ ಚುನಾವಣೆಗೆ ಚರಿಷ್ಮ ಅವರು ಲೇಬರ್ ಪಾರ್ಟಿಯಿಂದ ಸ್ಪರ್ಧಿಸಿ ಕೆಲವೇ ಕೆಲವು ಮತಗಳ ಅಂತರದಿಂದ ಸೋಲನ್ನು ಅನುಭವಿಸಬೇಕಾಯಿತು.
ಆ ನಂತರದ ದಿನಗಳಲ್ಲಿ ಚರಿಷ್ಮ ಅವರನ್ನು ಲೇಬರ್ ಪಾರ್ಟಿಯ ಉನ್ನತ ಮಟ್ಟದ ಮುಖಂಡರುಗಳು ಸರ್ವಾನುಮತದಿಂದ ಕೌನ್ಸಿಲರ್ ಆಗಿ ಆಯ್ಕೆ ಮಾಡಿದ್ದಾರೆ. ಲೋಕಾಸಭಾ ಚುನಾವಣೆಗೆ ಸ್ಪರ್ಧಿಸಲು ಚರಿಷ್ಮ ಅವರನ್ನು ಇಳಿಸಲು ಪಕ್ಷದ ಮುಖಂಡರು ಯೋಜನೆ ಹಾಕಿಕೊಂಡಿದ್ದಾರೆ.
ಡಾ. ಚರಿಷ್ಮ ಅವರು ಲಿವರ್ ಪೂಲ್ ಸಿಟಿಯಲ್ಲಿ ಸೈಕಿಯಾಟ್ರಿಸ್ಟ್ ವೈದ್ಯೆ ಮತ್ತು ಥೆರಪಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿಗೆ ತಿಲಾಂಜಲಿಯಿತ್ತು ಮುಂದಿನ ದಿನಗಳಲ್ಲಿ ಸಿಟಿಯ ಮೇಯರ್ ಆಗುವ ಸಂಭವವಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಡಾ. ಚರಿಷ್ಮ ಅವರ ಸಹೋದರ ತರುಣ್ ತಿಮ್ಮಯ್ಯ ಕೂಡ ಸಿಡ್ನಿಯಲ್ಲೇ ತಮ್ಮ ಕುಟುಂಬ ವರ್ಗದವರೊಂದಿಗೆ ನೆಲೆಸಿದ್ದಾರೆ.