ಕೊಡಗಿನಲ್ಲಾಗುತ್ತಿರುವ ಪ್ರಕೃತಿ ವೈಚಿತ್ರ್ಯಕ್ಕೆ ಬೆಚ್ಚಿದ್ದಾರೆ ಜನ !
Recommended Video
ಮಡಿಕೇರಿ, ಸೆಪ್ಟೆಂಬರ್.27: ಕೊಡಗಿನ ವಾತಾವರಣ ಮತ್ತು ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗಳು ಜನರನ್ನು ಆತಂಕಕ್ಕೀಡು ಮಾಡಿದೆ. ಆಗಸ್ಟ್ ನಲ್ಲಿ ಸುರಿದ ಮಹಾಮಳೆ ಇಡೀ ಜಿಲ್ಲೆಯನ್ನೇ ತಲ್ಲಣಿಸಿತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ಭೂಕುಸಿತ ಮತ್ತು ಪ್ರವಾಹಕ್ಕೊಳಗಾಗಿ ತನ್ನ ಇರುವನ್ನೇ ಕಳೆದುಕೊಂಡು ನಾಶವಾಗಿವೆ.
ಎಲ್ಲಿ ನೋಡಿದರೂ ಬರೀ ನೀರೇ ಕಂಡು ಬರುತ್ತಿತ್ತು. ತೊರೆ, ಹೊಳೆ, ನದಿಗಳು ತುಂಬಿ ಹರಿದಿದ್ದಲ್ಲದೆ, ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಲಕ್ಷಾಂತರ ಕ್ಯೂಸೆಕ್ ನೀರು ಜಿಲ್ಲೆಯ ನದಿಗಳ ಮೂಲಕ ಹರಿದು ಹೋಗಿತ್ತು.
ಆದರೆ ಮಳೆ ನಿಂತ ಕೆಲವೇ ದಿನಗಳಲ್ಲಿ ನೆತ್ತಿ ಸುಡುವ ಬಿಸಿಲಿಗೆ ನೀರು ತನ್ನಿಂದ ತಾನೆ ಬತ್ತಿಹೋಗತೊಡಗಿದ್ದು, ನೆಲ ಒಣಗಿ ಯಾವಾಗ ಮತ್ತೆ ಮಳೆ ಬರುತ್ತೋ ಎಂದು ಕಾಯುವ ಸ್ಥಿತಿಗೆ ತಲುಪುವಂತಾಗಿತ್ತು. ತೊರೆ, ಗುಡ್ಡಗಳಲ್ಲಿ ಹರಿದ ನೀರು ಈಗ ಬತ್ತಿ ಹೋಗಿದೆ.
ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ
ಕಾವೇರಿ ನದಿಯಲ್ಲಿಯೂ ನೀರು ಗಣನೀಯ ಇಳಿಮುಖವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಉತ್ತಮವಾಗಿದ್ದರೆ ನವೆಂಬರ್ ತನಕವೂ ತೊರೆಗಳಲ್ಲಿ ನೀರು ಹರಿಯುತ್ತಿತ್ತು. ಆದರೆ ಈ ಬಾರಿ ಹಾಗೆ ಆಗಲೇ ಇಲ್ಲ. ಜಲಪ್ರಳಯವಾಗಿ ಇಡೀ ನೀರೇ ಬಸಿದು ಹೋಯಿತೇ ಎಂಬ ಭಯ ಸೃಷ್ಟಿಯಾಗಿದೆ.
ಮಹಾಮಳೆಯ ನಂತರ ಕೆಲವು ದಿನಗಳ ಕಾಲ ಮಳೆ ಬಿಡುವುಕೊಟ್ಟಿತ್ತು. ಜತೆಗೆ ರಣಬಿಸಿಲಿಗೆ ಭೂಮಿ ಒಣಗಿ ಹೋದ ಅನುಭವವಾಗಿತ್ತು. ಕೃಷಿಕರು ಈಗ ಮಳೆ ಬಂದಿದ್ದರೆ ಚೆನ್ನಾಗಿರೋದು ಎಂದು ಮಾತನಾಡಿಕೊಂಡಿದ್ದರು.
ಇದೀಗ ಮತ್ತೆ ಭಾರೀ ಅಲ್ಲದಿದ್ದರೂ ಒಂದಷ್ಟು ಮಳೆ ಸುರಿದಿದೆ. ಮಳೆ ಸುರಿದಾಗಲೆಲ್ಲ ಅದರ ಜೊತೆ ಜನರಿಗೆ ಭಯವೂ ಎದುರಾಗಿದೆ. ಯಾಕೆ ಗೊತ್ತಾ? ಈ ಲೇಖನ ಓದಿ ನಿಮಗೆ ತಿಳಿಯುತ್ತದೆ.
ಹಿಂಗಾರು ಮಳೆ ಚುರುಕಾದರೆ ತೊಂದರೆ ತಪ್ಪಿದ್ದಲ್ಲ
ಹಿಂಗಾರು ಮಳೆಯಿಂದ ಈಗಾಗಲೇ ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿರುವ ಮಂದಿ ಮಳೆ ಸುರಿದು ಮತ್ತೆ ಎಲ್ಲಿ ಅನಾಹುತವಾಗುತ್ತದೆಯೋ ಎಂಬ ಭಯದಲ್ಲಿ ದಿನಕಳೆಯುವಂತಾಗಿದೆ. ಇಲ್ಲಿಗೆ ಹಿಂಗಾರು ಮಳೆಯ ಅಗತ್ಯವೂ ಇದೆ. ಆದರೆ ಮತ್ತೆ ರಣಮಳೆ ಬಂದರೆ ಅಥವಾ ಹಿಂಗಾರು ಮಳೆ ಚುರುಕಾದರೆ ಮತ್ತೆ ತೊಂದರೆ ತಪ್ಪಿದಲ್ಲ.
ಇನ್ನು ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯನ್ನು ನೋಡುವುದಾದರೆ ಸೆ.26ಕ್ಕೆ ಕೊನೆಗೊಂಡಂತೆ ಸುಮಾರು ಜಿಲ್ಲೆಯಲ್ಲಿ ಸರಾಸರಿ 3838.23 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ವೇಳೆಗೆ 2060.92 ಮಿ.ಮೀ. ಮಳೆ ಸುರಿದಿದ್ದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 1777.31 ಮಿ.ಮೀ. ಹೆಚ್ಚು ಮಳೆ ಸುರಿದಿದೆ.
ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!
ಮಡಿಕೇರಿಯಲ್ಲಿ ಈ ಬಾರಿ ಹೆಚ್ಚು ಮಳೆ
ಮಡಿಕೇರಿಯಲ್ಲಿ ಸುರಿದಿದ್ದು ಮಹಾಮಳೆ. ಇನ್ನು ತಾಲೂಕುವಾರು ನೋಡಿದರೆ ಮಡಿಕೇರಿಯಲ್ಲಿ ಭಾರೀ ಮಳೆಯಾಗಿರುವುದು ಕಂಡು ಬಂದಿದೆ. ಇಲ್ಲಿ ಸುಮಾರು 5514.49 ಮಿ.ಮೀ. ಮಳೆ ಸುರಿದಿದೆ. ಹೀಗೆ ಮಳೆ ಸುರಿದರೆ ಜಲಪ್ರಳಯವಾಗದೆ ಇನ್ನೇನಾಗುತ್ತೆ ?
ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ 2903.20 ಮಿ.ಮೀ. ಮಾತ್ರ ಮಳೆಯಾಗಿತ್ತು. ಆದರೆ ಈ ಬಾರಿ 2611.29 ಮಿ.ಮೀ. ಹೆಚ್ಚು ಮಳೆಯಾಗಿದೆ. ಅದರಲ್ಲೂ ತಿಂಗಳಾನುಗಟ್ಟಲೆ ಎಡೆಬಿಡದೆ ಮಳೆ ಸುರಿದಿದ್ದು ಅನಾಹುತಕ್ಕೆ ಕಾರಣವಾಗಿದೆ.
ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ
ಹಾರಂಗಿಯಲ್ಲಿ ಒಳ ಹರಿವು 1,227 ಕ್ಯುಸೆಕ್
ಜಿಲ್ಲೆಯ ಉಳಿದ ತಾಲೂಕುಗಳಾದ ಸೋಮವಾರಪೇಟೆಯಲ್ಲಿ 3,081.79 ಮಿ.ಮೀ., ವೀರಾಜಪೇಟೆಯಲ್ಲಿ 2,918.44 ಮಿ.ಮೀ ಮಳೆ ಸುರಿದಿದೆ. ಈ ನಡುವೆ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಭಾರೀ ಕಡಿಮೆಯಾಗಿದೆ.
ಸದ್ಯ ಗರಿಷ್ಠ 2,859 ಅಡಿಯ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2,853.50 ಅಡಿಯಷ್ಟಿದ್ದು ಒಳ ಹರಿವು ಕೇವಲ 1,227 ಕ್ಯುಸೆಕ್ ಮಾತ್ರ ಇದೆ.
ಕೊಡಗಿನ ಜ್ಯೋತಿಷಿ ಭವಿಷ್ಯ
ಕೊಡಗಿನ ಜ್ಯೋತಿಷಿ ವೀರಾಜಪೇಟೆಯ ಕರೋಟಿರ ಶಶಿ ಸುಬ್ರಮಣಿ ಎನ್ನುವವರು ಭವಿಷ್ಯ ನುಡಿದಿದ್ದು ಅವರು ಹೇಳುವ ಪ್ರಕಾರ ಸೆ.26 ರಂದು ಕೇತು ವಿನೊಡನೆ ಕುಜನು 27-28 / 7/2018ರಲ್ಲಿ ಸಂಭವಿಸಿದ ಚಂದ್ರಗ್ರಹಣದ ಕೋನವನ್ನು ತಲಪುವುದರಿಂದ ಇನ್ನು ಒಂದು ತಿಂಗಳ ಅವಧಿಯಲ್ಲಿ ದೇಶದ ವಾಯುವ್ಯ ದಿಕ್ಕಿನಲ್ಲಿ ಭೂಮಿ ಕಂಪಿಸಬಹುದು.
ಪ್ರವಾಹ ಉಕ್ಕಬಹುದು. ಮೇಘ ಸ್ಫೋಟವಾಗಬಹುದು. ಭೂಮಿ ಕುಸಿಯಬಹುದಂತೆ. ಗುರು ಗ್ರಹವು ವೃಶ್ಚಿಕ ರಾಶಿಗೆ 11-10-2018ರಲ್ಲಿ ಪ್ರವೇಶಿಸುತ್ತದೆ. 9-10-2018 ಗುರು-ಶುಕ್ರ-ಬುಧರು ತುಲಾ ರಾಶಿಯಲ್ಲಿ ಸೂರ್ಯನು ಹತ್ತಿರದಲ್ಲೇ ಇರುವನು. ಇದು ಅಕಾಲ ಮಳೆಗೆ ಪುಷ್ಟಿಕೊಡುವ ಲಕ್ಷಣವಾಗಿದೆ.
ಇದೇ ಸಮಯದಲ್ಲಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿಯಬಹುದು. ಕೊಡಗಿನಲ್ಲೂ ಮಳೆಯಾಗುವ ಎಲ್ಲ್ಲ ಸಾಧ್ಯತೆಗಳಿದೆ. ಅಕ್ಟೋಬರ್ ಕೊನೆಯವಾರ, ನವೆಂಬರ್ ತಿಂಗಳಿನಲ್ಲಿ ಭಾರೀ ಗಾಳಿಯೊಂದಿಗೆ ಕೇರಳದಲ್ಲಿ ಮಾತ್ರವಲ್ಲ ಇಡೀ ಸಹ್ಯ ಬೆಟ್ಟದ ಸಾಲುಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲೆಲ್ಲ ಮಳೆಯಾಗಬಹುದು.
ಆ ಸಮಯದಲ್ಲಿ ಚೆನ್ನೈನಲ್ಲಿ ಪ್ರವಾಹ ಬರಬಹುದು. ಡಿಸೆಂಬರ್ ತಿಂಗಳಲ್ಲೂ ಕೊಡಗಿನಲ್ಲಿ ಮಳೆ ಬರಬಹುದು ಎಂದು ಹೇಳಿದ್ದಾರೆ.