ಕೊಡಗಿನ ಮಳೆ ಹಾನಿ ವೀಕ್ಷಣೆಗೆ ಕೇಂದ್ರ ತಂಡ ಆಗಮನ
ಮಡಿಕೇರಿ, ಸೆಪ್ಟೆಂಬರ್ 8: ಕಳೆದ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಹಾನಿ ವೀಕ್ಷಿಸಲು ಇಂದು ಕೇಂದ್ರ ತಂಡವು ಕುಶಾಲನಗರದ ಕೂಡಿಗೆ ಸೈನಿಕ ಶಾಲೆಯ ಹೆಲಿಪ್ಯಾಡ್ ಆಗಮಿಸಿತು.
ಕೇಂದ್ರ ಅಧ್ಯಯನ ತಂಡವು ರಾಜ್ಯಕ್ಕೆ ಭೇಟಿ ನೀಡಿದ್ದು, ಪ್ರವಾಹದಿಂದಾದ ಜನ-ಜಾನುವಾರು, ಮನೆ ಹಾನಿ, ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟದ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ಮೂರು ದಿನಗಳ ಕಾಲ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಿದೆ.
Recommended Video
ಕೊಡಗಿನ ವಿವಿಧ ತಾಲೂಕುಗಳಲ್ಲಿ ಸುರಿದ ಮಳೆ ಲೆಕ್ಕಾಚಾರ!
ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ ಪ್ರತಾಪ್, ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾರ್ತೇಂದು ಕುಮಾರ್ ಸಿಂಗ್ ಹಾಗೂ ಭಾರತ ಸರ್ಕಾರದ ಕೆ.ಎಸ್.ಡಿ.ಎಂ.ಎ ಆಯುಕ್ತರಾದ ಮನೋಜ್ ರಂಜನ್ ಅವರು ಕೇಂದ್ರ ತಂಡದಲ್ಲಿದ್ದು, ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಂದ ಮಳೆ ಹಾನಿಯ ಮಾಹಿತಿ ಪಡೆದರು.
ಕೂಡಿಗೆಯ ಸೈನಿಕ ಶಾಲೆಯ ಸಭಾಂಗಣದಲ್ಲಿ ಕೇಂದ್ರ ತಂಡದ ಮುಖ್ಯಸ್ಥರು, ಮಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜನ-ಜಾನುವಾರು, ಬೆಳೆ, ಮನೆ ಹಾನಿ ಹಾಗೂ ಭೂಕುಸಿತ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು.