ಗಣಪತಿ ಆತ್ಮಹತ್ಯೆ: ಸಿಐಡಿ ತನಿಖೆ ಬಣ್ಣ ಬಯಲು, ಸಿಬಿಐಗೆ ಸಿಕ್ತು ಗುಂಡು
ಮಡಿಕೇರಿ, ನವೆಂಬರ್ 14 : ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಕಾಟಾಚಾರಕ್ಕೆ ನಡೆಸಿದೆ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ಮಂಗಳವಾರ ಸಿಬಿಐ ನಡೆಸಿದ ತಪಾಸಣೆ ವೇಳೆ ಲಾಡ್ಜ್ ನಲ್ಲಿ ಗುಂಡು ಪತ್ತೆಯಾಗಿದೆ.
ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?
ಒಟ್ಟು 10 ಮಂದಿ ಸಿಬಿಐ ಅಧಿಕಾರಿಗಳ ಸಿಬಿಐ ತಂಡ ಚೆನ್ನೈನಿಂದ ಮಡಿಕೇರಿಗೆ ಆಗಮಿಸಿದ್ದು, ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ವಿನಾಯಕ ಲಾಡ್ಜ್ ನ 315ನೇ ಸಂಖ್ಯೆಯ ಕೊಠಡಿಯನ್ನು ತಪಾಸಣೆ ನಡೆಸಿದೆ. ಈ ವೇಳೆ ಒಂದು ಗುಂಡು ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ವೇಳೆ ಬುಲೆಟ್ ಪತ್ತೆಯಾಗಿದೆ. ಹೀಗಾಗಿ ಕೊಠಡಿಯನ್ನು ಸೀಲ್ ಮಾಡಿ ಸಿಬಿಐ ತನ್ನ ವಶಕ್ಕೆ ಪಡೆದಿದೆ. ಆರಂಭದಲ್ಲೇ ಬುಲೆಟ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಿಐಡಿ ತಂಡ ಈ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಿದೆ ಎನ್ನುವ ಬಗ್ಗೆ ಗಂಭೀರವಾದ ಪ್ರಶ್ನೆ ಈಗ ಎದ್ದಿದೆ.
ತನಿಖಾಧಿಕಾರಿ ಕಲೈಮಣಿ ನೇತೃತ್ವದಲ್ಲಿ ತಂಡ, ಗಣಪತಿ ಸಹೋದರ ಎಂ.ಕೆ ಮಾಚಯ್ಯ ಸೇರಿದಂತೆ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಬೆಳ್ಯಪ್ಪ, ಉದಯ್, ಜಗನ್ ಅವರನ್ನು ಲಾಡ್ಜ್ ಗೆ ಕರೆಸಿಕೊಂಡು ವಿಚಾರಣೆ ನಡೆಸಿದರು.