ನೇಪಥ್ಯದತ್ತ ಸಾಗುತ್ತಿದೆ ಕೊಡಗಿನ ನೇಯ್ಗೆ ಕೇಂದ್ರ...
ಮಡಿಕೇರಿ, ಜೂನ್ 12: ಕೊಡಗಿನಲ್ಲಿ ಕೃಷಿ ಹೊರತುಪಡಿಸಿದರೆ ಕೈಗಾರಿಕೆಗಳೇ ಇಲ್ಲದ ಕಾಲದಲ್ಲಿ ನೂರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದ್ದ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಇಂದು ಆಧುನಿಕ ಬಟ್ಟೆ ಗಿರಣಿಗಳ ಹೊಡೆತಕ್ಕೆ ಸಿಲುಕಿ ಇವತ್ತೋ ನಾಳೆಯೋ ಮುಚ್ಚುವ ಸ್ಥಿತಿಗೆ ಬಂದಿರುವುದು ಬೇಸರದ ಸಂಗತಿ.
Recommended Video
ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಭಾಗದ ಶಿರಂಗಾಲ ಗ್ರಾಮದಲ್ಲಿ ನೆಲೆ ನಿಂತಿರುವ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಜಿಲ್ಲೆಯ ಏಕೈಕ ನೇಯ್ಗೆ ಕೇಂದ್ರವಾಗಿದೆ. 1981ರಲ್ಲಿ ಅವತ್ತಿನ ಪರಿಸ್ಥಿತಿಯಲ್ಲಿ ಒಂದು ನೇಯ್ಗೆ ಕೇಂದ್ರ ಹೇಗಿರಬೇಕಿತ್ತೋ ಹಾಗೆಯೇ ಇತ್ತು. ಜತೆಗೆ ಆಗಿನ ಕಾಲದಲ್ಲಿ ಈಗಿನಷ್ಟು ಆಧುನಿಕತೆ ಹೊಂದಿರಲಿಲ್ಲ. ಜತೆಗೆ ಕೈಮಗ್ಗದ ಬಟ್ಟೆಗಳನ್ನು ಜನ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಹೀಗಾಗಿ ಬೇಡಿಕೆ ಹೆಚ್ಚಾಗಿತ್ತು. ಹೀಗಾಗಿ ಈ ನೇಯ್ಗೆ ಕೇಂದ್ರದಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದರು. ಆದರೆ ಈ ನೇಯ್ಗೆ ಕೇಂದ್ರದ ಚಿತ್ರಣ ಇದೀಗ ಸಂಪೂರ್ಣ ಬದಲಾಗಿದೆ.
ಸಮಾಜಮುಖಿ ಗುದ್ಲೆಪ್ಪ ಹಳ್ಳಿಕೇರಿ, ವನಿತಾರಿಗೆ ಸನ್ಮಾನ
ಉಚ್ಛ್ರಾಯ ಸ್ಥಿತಿಯಲ್ಲಿದ್ದ ನೇಯ್ಗೆ ಕೇಂದ್ರ
ಈ ನೇಯ್ಗೆ ಕೇಂದ್ರ ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೆ ವರ್ಷಗಳು ಕಳೆದಂತೆ ಆಧುನಿಕತೆಯನ್ನು ಒಗ್ಗೂಡಿಸಿಕೊಂಡಿದ್ದರೆ ಬಹುಶಃ ನೂರಾರು ಸಂಖ್ಯೆಯಲ್ಲಿದ್ದ ಕಾರ್ಮಿಕರು ಹದಿನೈದಕ್ಕೆ ಇಳಿಯುತ್ತಿರಲಿಲ್ಲ. ಇವತ್ತು ಈ ನೇಯ್ಗೆ ಕೇಂದ್ರದಿಂದ ಬೆಡ್ಶೀಟ್ ಮತ್ತು ಟವೆಲ್ ಉತ್ಪಾದಿಸಲಾಗುತ್ತಿದ್ದರೂ ಬೇಡಿಕೆ ಕೊರತೆಯಿಂದಾಗಿ ನಷ್ಟ ಅನುಭವಿಸುತ್ತಿದೆ.
ಆಧುನಿಕ ಬಟ್ಟೆಗಿರಣಿಗಳಿಂದ ಪೈಪೋಟಿ
ಇವತ್ತು ನೇಯ್ಗೆ ಕೇಂದ್ರಗಳು ಅವನತಿಯ ಹಾದಿಯಲ್ಲಿವೆ. ಇವುಗಳಿಗೆ ಆಧುನಿಕ ಬಟ್ಟೆಗಿರಣಿಗಳು ಪೈಪೋಟಿ ನೀಡುತ್ತಿವೆ. ಹೀಗಿರುವಾಗ ಎಲ್ಲವನ್ನು ಎದುರಿಸಿ ಮುನ್ನಡೆಯುವುದು ಸುಲಭದ ಕೆಲಸವಾಗಿಯೂ ಉಳಿದಿಲ್ಲ. ಕೈಮಗ್ಗದಲ್ಲಿ ನೇಯ್ಗೆ ಮಾಡುವ ನೇಕಾರರಿಗೆ ಕೆಲಸಕ್ಕೆ ತಕ್ಕಂತೆ ಹಣವೂ ದೊರಕುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಜೊತೆಗೆ ಆಧುನಿಕವಾದ ಹೊಸ ತಂತ್ರಜ್ಞಾನದ ವಿದ್ಯುತ್ ನೇಯ್ಗೆ ಮಗ್ಗಗಳನ್ನು ಅಳವಡಿಸದೆ ಇರುವುದು ಕೂಡ ನೇಯ್ಗೆ ಕೇಂದ್ರ ಅವನತಿಗೆ ಸಾಗಲು ಕಾರಣವಾಗಿದೆ. ಈಗ ಇಲ್ಲಿನ ಕಾರ್ಮಿಕರು ಕಷ್ಟಪಟ್ಟು ಬೆಡ್ಶೀಟ್ ಮತ್ತು ಟವಲ್ ಗಳನ್ನು ಸಿದ್ಧಪಡಿಸಿದರೂ ಅದನ್ನು ಮಾರುಕಟ್ಟೆ ಮೂಲಕ ಇಲಾಖೆ ಸಾಗಾಟ ಮಾಡಿದರೂ ಮಾರಾಟವಾಗದೆ ಸಂಕಷ್ಟಪಡುವಂತಾಗಿದೆ. ಇಲ್ಲಿ ಮಹಿಳೆಯರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ.
ಕೆಲಸಕ್ಕೆ ತಕ್ಕಂತೆ ಹಣ ಸಿಗುತ್ತಿಲ್ಲ
ಒಂದು ಕಾಲದಲ್ಲಿ ನೂರಾರು ಮಂದಿಗೆ ಆಶ್ರಯ ನೀಡಿದ್ದ ನೇಯ್ಗೆ ಕೇಂದ್ರ ಉಪ ಶಾಖೆಗಳನ್ನು ಹೊಂದಿತ್ತು. ಅಲ್ಲದೆ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಖಾದಿ ವಸ್ತು ಮಾರಾಟ ಕೇಂದ್ರವೂ ಇತ್ತು. ಆದರೆ ಆರ್ಥಿಕ ಸಂಕಷ್ಟದಿಂದಾಗಿ ಇದೀಗ ಎರಡೂ ಕೇಂದ್ರಗಳು ಮುಚ್ಚಿವೆ. ಈಗಿರುವ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಕುಂಟುತ್ತಾ ಸಾಗಿದ್ದು, ಕಟ್ಟಡ ಹಳೆಯದಾಗಿದೆ. ಸಂಪೂರ್ಣ ಶಿಥಿಲಾವಸ್ಥೆಗೊಳಗಾಗಿದೆ. ಈ ಕೇಂದ್ರವನ್ನು ಅಭಿವೃದ್ಧಿಗೊಳಿಸುವುದು ಕೂಡ ಕನಸಾಗಿದೆ. ಒಂದು ವೇಳೆ ನೇಯ್ಗೆ ಕೇಂದ್ರವನ್ನು ಅಭಿವೃದ್ಧಿಗೊಳಿಸಲು ಮುಂದಾದರೂ ಸುಸಜ್ಜಿತ ಕಟ್ಟಡ ಮತ್ತು ಮಗ್ಗವನ್ನು ಯಾಂತ್ರೀಕರಣಗೊಳಿಸಿದರೆ ಮಾತ್ರ ಮುಂದುವರೆಸಲು ಸಾಧ್ಯವಾಗಬಹುದೇನೋ?
ಸರ್ಕಾರಕ್ಕೆ ಅಭಿವೃದ್ಧಿಯ ಪ್ರಸ್ತಾವನೆ
ಈ ನಡುವೆ ಇದರ ಅಭಿವೃದ್ಧಿಗೆ 20 ಲಕ್ಷ ರೂ. ಗಳ ವೆಚ್ಚದ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ಅನುಮೋದನೆ ನೀಡಿದರೆ ಬಹುಶಃ ಕೊಡಗಿನ ಏಕೈಕ ನೇಯ್ಗೆ ಕೇಂದ್ರ ಉಳಿದುಕೊಳ್ಳಬಹುದೇನೋ? ಇಲ್ಲದೆ ಹೋದರೆ ಬಾಗಿಲು ಹಾಕುವಂತಹ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಕಟ್ಟಡದಲ್ಲಿ ಗಿಡಗಳು ಬೆಳೆದು ನಿಂತಿದ್ದು ಅವುಗಳನ್ನು ತೆಗೆದು ಸುಣ್ಣ ಬಣ್ಣ ಬಳಿಯದೆ ಅದೆಷ್ಟೋ ವರ್ಷ ಕಳೆದು ಹೋಗಿದೆ. ಹೀಗಾಗಿ ಮಳೆಗಾಳಿಗೆ ಶಿಥಿಲಗೊಂಡ ಈ ಕಟ್ಟಡದಲ್ಲಿ ಕೆಲಸ ಮಾಡುವುದು ಕೂಡ ನೇಕಾರರಿಗೆ ಭಯವನ್ನುಂಟು ಮಾಡುತ್ತಿದೆ. ಒಂದು ಕಾಲದಲ್ಲಿ ಉದ್ಯಮವಾಗಿ ಮಿಂಚಿದ್ದ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಇವತ್ತು ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಇದರ ಮೇಲಿನ ನಿರ್ಲಕ್ಷ್ಯ ಮುಂದುವರೆದರೆ ಇತಿಹಾಸದ ಪುಟಗಳನ್ನು ಸೇರುವುದಂತು ಖಚಿತ.