ಧನುರ್ ಲಗ್ನ 12.33ಕ್ಕೆ ತೀರ್ಥರೂಪಿಯಾಗಿ ಹರಿದ ಕಾವೇರಿ
ಮಡಿಕೇರಿ, ಅಕ್ಟೋಬರ್ 17: ಕರ್ನಾಟಕದ ಸ್ವರ್ಣ ನದಿ ಎಂದೇ ಕರೆಯಲ್ಪಡುವ ಕಾವೇರಿಯ ಉದ್ಭವ ಕ್ಷೇತ್ರವಾದ ತಲಕಾವೇರಿಯಲ್ಲಿ ಇಂದು ಮಧ್ಯಾಹ್ನ 12.33ಕ್ಕೆ ಧನುರ್ ಲಗ್ನದಲ್ಲಿ ತೀರ್ಥೋದ್ಭವವಾಗಿದೆ.
ಕೆಲವೇ ಕ್ಷಣಗಳಲ್ಲಿ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ
ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಹಿನ್ನೆಲೆಯಲ್ಲಿ ಪವಿತ್ರ ಬ್ರಹ್ಮ ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಹರಿದು ಬಂದ ಕಾವೇರಿಯ ದರ್ಶನಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬ್ರಹ್ಮಕುಂಡಿಕೆಯಿಂದ ಚಿಮ್ಮಿದ ಪುಣ್ಯ ಜಲವನ್ನು ಕೊಡ, ಕ್ಯಾನ್, ಡಬ್ಬಿಗಳಲ್ಲಿ ಸಂಗ್ರಹಿಸಲು ಭಕ್ತಾದಿಗಳು ಮುಗಿಬಿದ್ದರು.
ಇದರ ಬೆನ್ನಲ್ಲೇ ಸಾಂಪ್ರದಾಯಿಕ ವಿಧಿ ವಿಧಾನಗಳು, ಪೂಜೆಗಳು ಆರಂಭಗೊಂಡಿದೆ. ಶ್ರೀ ಕಾವೇರಿ ಮಾತೆಗೆ ಪೂಜಾದಿ ಕೈಂಕರ್ಯವನ್ನು ಕ್ಷೇತ್ರದ ಅರ್ಚಕ ಕುಟುಂಬದ ರಾಮಕೃಷ್ಣಾಚಾರ್ ನೇತೃತ್ವದಲ್ಲಿ ನಡೆಯುತ್ತಿವೆ.
ಪುಣ್ಯ ಸ್ನಾನ
ಇದೇ ವೇಳೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳ ಪುಣ್ಯ ಸ್ನಾನ ಮಾಡಿದರು.
ಉತ್ಸವದ ಸಂದರ್ಭ ಭಕ್ತರ ಕೇಶ ಮುಂಡನಕ್ಕೆ ನೂತನವಾಗಿ ನಿರ್ಮಿಸಲಾದ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾವೇರಿ-ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ಸಂಗಮ ಸ್ಥಳವಾದ ಭಾಗಮಂಡಲ, ತಲಕಾವೇರಿಯಲ್ಲಿ ಪಿಂಡ ಪ್ರದಾನಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ತುಲಾಮಾಸದಲ್ಲಿ ಒಂದು ತಿಂಗಳ ಕಾಲ ಕಾವೇರಿ ಮಾತೆಗೆ ಚಿನ್ನದ ಆಭರಣಗಳನ್ನು ತೊಡಿಸಲಾಗುತ್ತದೆ. 1 ತಿಂಗಳು ಕಳೆದ ತರುವಾಯ ಅಂದರೆ ನವೆಂಬರ್ 17ರಂದು ಮರಳಿ ಚಿನ್ನಾಭರಣಗಳನ್ನು ದೇವಳದ ಆಡಳಿತಾಧಿಕಾರಿಗೆ ಹಿಂತಿರುಗಿಸಲಾಗುತ್ತದೆ.
ತೀರ್ಥೋದ್ಭವಕ್ಕೂ ಮುನ್ನ ಕೊಡಗಿನಲ್ಲಿ ಗದ್ದೆಗೆ ಬೊತ್ತು ನೆಡುವ ಆಚರಣೆ
ಕಾವೇರಿ ತುಲಾ ಸಂಕ್ರಮಣ ಜಾತ್ರೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿರುವುದರಿಂದ ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸಿದ್ಧತೆಯನ್ನು ಮಾಡಿಕೊಂಡಿದೆ.
ತಲಕಾವೇರಿಯಲ್ಲಿ ಸುಸಜ್ಜಿತ ಶಾಮಿಯಾನದ ನಿರ್ಮಾಣ, ಭಕ್ತರ ನೂಕುನುಗ್ಗಲು ತಪ್ಪಿಸಲು ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ಗಳ ಅಳವಡಿಕೆ, ಕೊಡಗು ಏಕೀಕರಣದಿಂದ ಅನ್ನದಾನಕ್ಕೆ ಸಿದ್ಧತೆ, ಅನ್ನಛತ್ರ, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ಕಾವೇರಿ ತುಲಾ ಸಂಕ್ರಮಣದ ಪ್ರಯುಕ್ತ ಕೊಡಗು ಏಕೀಕರಣ ರಂಗದ ಆಶ್ರಯದಲ್ಲಿ ಅ. 16ರ ಮಧ್ಯಾಹ್ನದಿಂದ ಆರಂಭಗೊಂಡು ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ.