ಮಡಿಕೇರಿ: ಏರುತ್ತಿರುವ ಬಿಸಿಲ ಧಗೆಗೆ ಬರಿದಾಗುತ್ತಿದೆ ಕಾವೇರಿ ನದಿ
ಮಡಿಕೇರಿ, ಏಪ್ರಿಲ್ 3: ದಿನೇ ದಿನೇ ಏರುತ್ತಲೇ ಇರುವ ತಾಪಮಾನ ಭೂಮಿಯ ಕಾವನ್ನು ವಿಪರೀತ ಹೆಚ್ಚಿಸುತ್ತಿದೆ. ಇದರಿಂದಾಗಿ ಕಾವೇರಿ ನದಿ ದಂಡೆಯ ಇಕ್ಕೆಲಗಳಲ್ಲಿ ಇರುವ ಕಾಫಿ ತೋಟ, ಶುಂಠಿಯ ಹೊಲ-ಗದ್ದೆಗಳು, ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ಕೃಷಿಕರು ಕಾವೇರಿ ನದಿಯ ನೀರನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಗಣನೀಯವಾಗಿ ಕ್ಷೀಣಿಸಿದೆ.
ಅರ್ಥಾತ್ ನದಿಯ ಒಡಲು ಬರಿದಾಗುತ್ತಿದ್ದು, ವಾರದೊಳಗೆ ವರುಣ ದೇವ ಕೃಪೆ ಮಾಡಿ ಮಳೆ ಸುರಿಸದಿದ್ದಲ್ಲಿ ಕುಶಾಲನಗರ ಭಾಗದಲ್ಲಿ ಹರಿಯುತ್ತಿರುವ ಕಾವೇರಿ ನಿಶ್ಚಲವಾಗುವ ಸಾಧ್ಯತೆ ಇದೆ.
ಅಂದರೆ ಕಾವೇರಿ ತವರಿನ ಪ್ರಮುಖ ಪಟ್ಟಣವಾದ ಕುಶಾಲನಗರ ಪಟ್ಟಣದ 20 ಸಾವಿರ ಜನಸಂಖ್ಯೆ ಹಾಗೂ ಕುಶಾಲನಗರದ ನಿಶ್ಚಲವಾಗುವ ಸಾಧ್ಯತೆ ಇದೆ. ಕುಶಾಲನಗರದ ಸೆರಗಿನಲ್ಲಿರುವ ಮುಳ್ಳುಸೋಗೆ ಗುಮ್ಮನಕೊಲ್ಲಿ ಅವಳಿ ಗ್ರಾಮಗಳ 9 ಸಾವಿರ ಸೇರಿ ಬಹುತೇಕ 30 ಸಾವಿರ ಜನರಿಗೆ ಕುಡಿಯುವ ನೀರು ಕೊರತೆಯಾಗುವ ಭೀತಿ ಎದುರಾಗಿದೆ.
ನಷ್ಟ-ಸಂಕಷ್ಟಗಳ ಅಂದಾಜು ಊಹಿಸಲಾಗದು
ಹಿಂದೆಂದೂ ಕಾಣದಿದ್ದ ಭೀಕರ ರಣ ಬಿಸಿಲು ಧರೆಯನ್ನು ಸುಡುತ್ತಿದೆ. ಕಾವೇರಿ ನದಿ ಒಂದು ವೇಳೆ ಬಿಸಿಲ ಬೇಗೆಗೆ ಬೆಂದು ಹರಿವನ್ನು ನಿಲ್ಲಿಸಿದಲ್ಲಿ ಮುಂದೆ ಸಂಭವಿಸಬಹುದಾದ ನಷ್ಟ-ಸಂಕಷ್ಟಗಳ ಅಂದಾಜು ಊಹಿಸಲಾಗದು. ಏಕೆಂದರೆ ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಮುಳ್ಳುಸೋಗೆ ಗ್ರಾಮ ಪಂಚಾಯಿತಿಗಳು ನಾಗರಿಕರಿಗೆ ಕುಡಿಯುವ ನೀರನ್ನು ಪೂರೈಸಬಹುದಾದ ಬದಲಿ ಮಾರ್ಗಗಳ ಬಗ್ಗೆ ಈಗಲೇ ಯೋಚನೆ ಹಾಗೂ ಯೋಜನೆ ಹಾಕಿಕೊಳ್ಳಬೇಕಿದೆ.
ಮರಳು ಚೀಲ ಬಳಸಿ ನದಿ ನೀರು ಸಂಗ್ರಹ
ಕುಶಾಲನಗರ, ಮುಳ್ಳುಸೋಗೆ ಹಾಗೂ ಗುಮ್ಮನಕೊಲ್ಲಿ ಈ ವ್ಯಾಪ್ತಿಯ 29 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಕುಶಾಲನಗರ ಜಲಮಂಡಳಿ ಈಗಾಗಲೇ ಅಗತ್ಯ ಕ್ರಮಗಳ ಬಗ್ಗೆ ಮುಂದಾಗಿದೆ. ಕುಡಿಯುವ ನೀರೆತ್ತುವ ಕಾವೇರಿ ನದಿ ದಂಡೆಯ ಯಂತ್ರಾಗಾರದ ಬಳಿ ಮರಳು ಚೀಲಗಳನ್ನು ಬಳಸಿ ನದಿಯ ನೀರನ್ನು ಸಂಗ್ರಹಿಸಿ ನೀರಿನ ಕೊಳವೆಗೆ ಸರಾಗವಾಗಿ ಹರಿಸುವ ಯೋಜನೆ ರೂಪಿಸಿದ್ದು ಈಗಾಗಲೇ ಅದು ಕಾರ್ಯಗತವಾಗುತ್ತಿದೆ.
ಪಿರಿಯಾಪಟ್ಟಣದ ಜನರಿಗೆ ಪೂರೈಸುತ್ತಿರುವ ಕಾವೇರಿ
ನೆರೆಯ ಪಿರಿಯಾಪಟ್ಟಣದ ಜನರಿಗೆ ಪೂರೈಸುತ್ತಿರುವ ಕಾವೇರಿ ಕುಡಿಯುವ ನೀರಿನ ಯೋಜನೆಯೂ ಕೂಡ ಕುಶಾಲನಗರದ ಬೈಚನಹಳ್ಳಿಯ ಕಾವೇರಿ ನದಿಯ ಇನ್ನೊಂದು ದಂಡೆಯಲ್ಲಿದ್ದು, ಈಗಾಗಲೇ ಅಲ್ಲಿನ ಸಿಬ್ಬಂದಿಗಳು ಕಾವೇರಿ ನದಿಗೆ ಅಡ್ಡಲಾಗಿ ಬಂಡನ್ನು ನಿರ್ಮಿಸಿ ನೀರನ್ನು ಸಂಗ್ರಹಿಸಿ ಯಂತ್ರಾಗಾರದಲ್ಲಿ ಮೇಲೆತ್ತುತ್ತಿದ್ದಾರೆ. ಪಿರಿಯಾಪಟ್ಟಣದವರು ಮರಳು ಚೀಲದಲ್ಲಿ ತಾತ್ಕಾಲಿಕವಾಗಿ 3 ಅಡಿಗಳಷ್ಟು ತಡೆ ಗೋಡೆಯನ್ನು ನಿರ್ಮಿಸಿರುವ ಕಾರಣ ಕುಶಾಲನಗರದ ಜಲಮಂಡಳಿಯವರು ಕೂಡ ತಮ್ಮ ಯಂತ್ರಾಗಾರದ ಕೊಳವೆ ಬಳಿ ಬಂಡು ನಿರ್ಮಿಸುತ್ತಿದ್ದಾರೆ.
80 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ
ಕುಶಾಲನಗರ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನಿರಂತರವಾಗಿ ಕುಡಿಯುವ ನೀರು ಪೂರೈಸುವ ಶಾಶ್ವತವಾದ ಯೋಜನೆಯನ್ನು ರೂಪಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ 80 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯನ್ನು ಜಲಮಂಡಳಿಯಿಂದ ಸಿದ್ದಪಡಿಸಿ ವರ್ಷಗಳೇ ಕಳೆದರೂ ಕೂಡ ಹಿಂದಿನ ಸರ್ಕಾರವಾಗಲೀ, ಈಗಿನ ಸರ್ಕಾರವಾಗಲೀ ಈ ಯೋಜನೆಯ ಬಗ್ಗೆ ನಿರಾಸಕ್ತಿ ಹೊಂದಿರುವುದು ಮಾತ್ರ ವಿಪರ್ಯಾಸ.
Recommended Video
ಬೇಸಿಗೆಯ ನರ್ತನ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿದೆ
ಕುಶಾಲನಗರ ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪೂರ್ವಭಾವಿಯಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅವರು ಜಲಮಂಡಳಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ಪ್ರತ್ಯೇಕ ಸಭೆ ಕರೆಯಲಾಗುವುದು ಎಂದು ಜಯವರ್ಧನ ತಿಳಿಸಿದ್ದಾರೆ.
ಏನೇ ಇರಲಿ, ಈ ಬಾರಿ ಬೇಸಿಗೆಯ ರುದ್ರ ನರ್ತನ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿಯೇ ಇರುವುದರಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಪಂಚಾಯಿತಿ ಹಾಗೂ ಜಲಮಂಡಳಿ ಜಂಟಿ ಪ್ರಯತ್ನ ಮಾಡಬೇಕಿದೆ. ಶಾಸಕ ಅಪ್ಪಚ್ಚು ರಂಜನ್ ಕೂಡ ಕುಶಾಲನಗರದ ಜಲಮಂಡಳಿಯನ್ನು ಮೇಲ್ದರ್ಜೆಗೇರಿಸಲು ಮುಂದಾಗಬೇಕೆಂದು ಜನತೆಯ ಒತ್ತಾಯವಾಗಿದೆ.