ಕೊಡಗಿನಲ್ಲಿ ಕಾಣಿಸಿಕೊಂಡ ಆ ಅಪರಿಚಿತರು ಯಾರಾಗಿರಬಹುದು?
ಮಡಿಕೇರಿ, ಏಪ್ರಿಲ್ 26:ಕೊಡಗಿನ ಗಡಿಭಾಗಗಳ ಕಾಡಂಚಿನ ಗ್ರಾಮಗಳ ಮನೆಗೆ ಅಪರಿಚಿತರು ಭೇಟಿ ನೀಡುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ವ್ಯಕ್ತಿಗಳು ನಕ್ಸಲಿರಬಹುದೆಂಬ ಶಂಕೆ ಹಿನ್ನಲೆಯಲ್ಲಿ ಇದೀಗ ಆತಂಕ ವ್ಯಕ್ತವಾಗಿದೆ.
ಪೊಲೀಸರು ಹಾಗೂ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆ ಕೈಗೊಂಡಿದ್ದು ಬಂದವರು ನಕ್ಸಲರೇ ಎಂಬುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಈಗಾಗಲೇ ನಕ್ಸಲೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಭಾವಚಿತ್ರಗಳನ್ನು ತೋರಿಸಿದ ಮೇಲೂ ತಮ್ಮ ಗ್ರಾಮಕ್ಕೆ ಭೇಟಿ ನೀಡಿದವರು ಯಾರೂ ಆ ಹೋಲಿಕೆಯನ್ನು ಹೊಂದಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿರುವುದರಿಂದ ಹಾಗಾದರೆ ಬಂದ ಅಪರಿಚಿತರು ಯಾರಾಗಿರಬಹುದು? ನಕ್ಸಲರ ಗುಂಪಿಗೆ ಹೊಸ ಮುಖಗಳೇನಾದರೂ ಸೇರ್ಪಡೆಯಾಗಿವೆಯಾ? ಒಂದು ವೇಳೆ ಬಂದವರು ಕೇರಳದತ್ತ ಮುಖ ಮಾಡಿರಬಹುದೇ ಹೀಗೆ ಹತ್ತಾರು ಪ್ರಶ್ನೆಗಳು ಇಲ್ಲಿನ ಜನರನ್ನು ಕಾಡತೊಡಗಿದೆ.
ಈ ವ್ಯಾಪ್ತಿಯಲ್ಲಿ ಹಿಂದಿನಿಂದಲೂ ಆಗಾಗ್ಗೆ ನಕ್ಸಲರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಕಳೆದ ವರ್ಷವೂ ಕೊಡಗಿನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಕಾರ್ಯಾಚರಣೆ ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದೀಗ ಮಹಿಳೆ ಮತ್ತು ಪುರುಷ ಈ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು, ಇವರು ಬ್ರಹ್ಮಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಕಕ್ಕಬೆ ಯವಕಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಅಕ್ಕಿ ಕೊಂಡೊಯ್ದಿದ್ದು, ಮತ್ತೊಂದು ಮನೆಯಲ್ಲಿ ಮನೆಯಾಕೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದರು ಎಂಬ ಸುದ್ದಿ ಹರಡಿತ್ತು.
ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷ : ಅಕ್ಕಿ ಮೂಟೆ, ಮೊಬೈಲ್ ಕಳವು
ವಿಷಯ ತಿಳಿಯುತ್ತಿದ್ದಂತೆಯೇ ತನಿಖೆ ಕೈಗೊಂಡ ಪೊಲೀಸರು ಸ್ಥಳದಲ್ಲಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದರು. ಜತೆಗೆ ಹಾಗೂ ನಿಗ್ರಹ ದಳದ ಕಾರ್ಯಾಚರಣೆಯನ್ನು ಕೂಡ ನಡೆಸಿತ್ತು. ಆದರೆ ಸದ್ಯದ ಮಟ್ಟಿಗೆ ಬಂದವರು ನಕ್ಸಲರೇ ಎಂಬುದಕ್ಕೆ ಯಾವುದೇ ರೀತಿಯ ಸ್ಪಷ್ಟ ಸುಳಿವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಇದುವರೆಗೂ ನಕ್ಸಲರ ಸುಳಿವು ಸಿಕ್ಕಿಲ್ಲ
ಈ ಕುರಿತಂತೆ ಕೊಡಗು ಎಸ್ಪಿ ಡಾ. ಸುಮನ್ ಅವರು ಮಾಹಿತಿ ನೀಡಿದ್ದು, ಅದರ ಪ್ರಕಾರ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕಾಣಿಸಿಕೊಂಡು ಪರಾರಿಯಾದ ಸುಮಾರು 40 ವರ್ಷ ಪ್ರಾಯದ ಪುರುಷ ಹಾಗೂ ಮಹಿಳೆ ನಕ್ಸಲರಾಗಿರಬಹುದೆಂದು ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲ್ ನಿಗ್ರಹ ದಳದವರೊಂದಿಗೆ ಗ್ರಾಮದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದ್ದು, ನಕ್ಸಲರ ಸುಳಿವು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಈ ಇಬ್ಬರು ನಕ್ಸಲರ ತಲೆಗೆ 2 ಲಕ್ಷ ರೂ.ಇನಾಮು ಘೋಷಿಸಿದ ಎನ್.ಐ.ಎ.
ನಕ್ಸಲರ ಭಾವ ಚಿತ್ರಗಳಿಗೆ ಹೋಲಿಕೆಯಾಗುತ್ತಿಲ್ಲ
ದೂರು ನೀಡಿದ ಮಹಿಳೆಯ ಬಳಿ ನಕ್ಸಲರ ಭಾವ ಚಿತ್ರಗಳನ್ನು ತೋರಿಸಲಾಗಿದ್ದು, ಆಕೆಯ ಮನೆಗೆ ಬಂದು ವ್ಯಕ್ತಿಗಳಿಗೂ, ನಕ್ಸಲರ ಭಾವ ಚಿತ್ರಗಳಿಗೂ ಹೋಲಿಕೆಯಾಗುತ್ತಿಲ್ಲ. ಆ ವ್ಯಕ್ತಿಗಳು ನಕ್ಸಲರು ಧರಿಸುವ ಸಮವಸ್ತ್ರದಲ್ಲಿಲ್ಲದೆ ಪ್ಯಾಂಟ್, ಶರ್ಟ್ ಹಾಗೂ ಚೂಡಿದಾರ್ ಧರಿಸಿದ್ದುದಾಗಿ ತಿಳಿದು ಬಂದಿದೆ. ಅಷ್ಟೇ ಅಲ್ಲ ಅವರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಕುರುಹುಗಳು ಕಂಡು ಬಂದಿಲ್ಲ
ವಿಶೇಷವೆಂದರೆ ಈ ಘಟನೆ ನಡೆದ ಬಳಿಕ ಅಕ್ಕಪಕ್ಕದ ಮನೆಗಳಲ್ಲಿ ವಿಚಾರಿಸಿಕೊಂಡು ಅವರುಗಳು ಹೋದ ದಾರಿಯಲ್ಲಿ ಹೋದಾಗ ಸುಮಾರು 40 ಮೀಟರ್ ದೂರದಲ್ಲಿ ಕಸಿದುಕೊಂಡು ಹೋಗಿದ್ದರು ಎನ್ನಲಾದ ಮೊಬೈಲ್ ಬಿದ್ದು ಸಿಕ್ಕಿದೆ. ಮುಂದುವರೆದು ಅದೇ ದಾರಿಯಲ್ಲಿ ಸುಮಾರು 400 ಮೀಟರ್ ದೂರಕ್ಕೆ ಆ ದಾರಿಯು ಅಂತ್ಯಗೊಂಡಿದ್ದು, ಮುಂದೆ ಯಾವುದೇ ದಾರಿ ಇರಲಿಲ್ಲ.ಮತ್ತೊಬ್ಬ ಗ್ರಾಮಸ್ಥ ತನ್ನ ಮನೆಯಿಂದ 15 ಕೆ.ಜಿ. ಅಕ್ಕಿಯನ್ನು ತೆಗೆದುಕೊಂಡು ಹೋಗಿರುವದಾಗಿ ತಿಳಿಸಿದ್ದು, ಆತನ ಮನೆಯನ್ನು ಪರಿಶೀಲಿಸಲಾಗಿ ಅಕ್ಕಿಯನ್ನು ತೆಗೆದುಕೊಂಡು ಹೋದ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಯಾರೂ ಕೂಡ ಅಕ್ಕಿ ತೆಗೆದುಕೊಂಡು ಹೋಗಿರುವುದನ್ನು ನೋಡಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದ ಕೂಂಬಿಂಗ್ ಕಾರ್ಯಾಚರಣೆ
ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳದಲ್ಲಿ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲ್ ನಿಗ್ರಹ ದಳದವರೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದು, ಈ ಸಂಬಂಧ ಪರಿಶೀಲಿಸುತ್ತಿರುವುದಾಗಿಯೂ ಹೇಳಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವುದರ ಮೂಲ ನೈಜಾಂಶವನ್ನು ಬಯಲಿಗೆಳೆಯಬೇಕಿದೆ.