ಕೊಡಗು ವಿಶೇಷ; ಬಿಜೆಪಿ ಭದ್ರಕೋಟೆಯಲ್ಲಿ ಅಸಮಾಧಾನದ ಬೆಂಕಿ!
ಮಡಿಕೇರಿ, ಆಗಸ್ಟ್ 10; ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲೀಗ ಅಸಮಾಧಾನ ಹೊಗೆಯಾಡಲು ಆರಂಭಿಸಿದೆ. ಸಂಪುಟ ವಿಸ್ತರಣೆ ಮಾಡುವಾಗ ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ಕಡೆಗಣಿಸಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್, ಜನತಾದಳ ಸರ್ಕಾರವಿದ್ದಾಗಲೆಲ್ಲ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಬಿಜೆಪಿಯನ್ನು ಕೈಹಿಡಿಯುತ್ತಾ ಬಂದಿರುವ ಜನರಿಗೆ ಭ್ರಮನಿರಸನವಾಗಿದೆ.
ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಯಡಿಯೂರಪ್ಪ!
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸದಾ ಗೆಲುವಿನ ರೂವಾರಿಯಾಗಿರುವ ಅಪ್ಪಚ್ಚು ರಂಜನ್ ಮತ್ತು ಕೆ. ಜಿ. ಬೋಪಯ್ಯ ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬಹುದೆಂಬ ನಿರೀಕ್ಷೆಯಿತ್ತಾದರೂ ಅದೀಗ ಸುಳ್ಳಾಗಿದ್ದು, ಜನರು ಬಿಜೆಪಿ ವಿರುದ್ಧ ರೊಚ್ಚಿಗೇಳುವಂತೆ ಮಾಡಿದೆ.
ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್; ಎಸ್. ಎ. ರಾಮದಾಸ್
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಕೊಡಗು, ಮೈಸೂರು ಭಾಗದ ಯಾವುದೇ ಶಾಸಕರಿಗೆ ಸಚಿವ ಸ್ಥಾನ ಕೊಟ್ಟಿಲ್ಲ.
ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ
ಕೊಡಗಿನಲ್ಲೀಗ ಬಿಜೆಪಿ ವಿರುದ್ಧವೇ ಆಕ್ರೋಶಗಳು ಆರಂಭವಾಗಿದ್ದು ಅದನ್ನು ನಿಭಾಯಿಸದೆ ಹೋದರೆ ಜಿಲ್ಲೆಯಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ.
ರಂಜನ್ ಬೆಂಬಲಿಗರಿಂದ ಬೆಂಗಳೂರು ಚಲೋ
ಈಗಾಗಲೇ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅವರ ಅಭಿಮಾನಿಗಳು, ಬೆಂಬಲಿಗರು ಅಪ್ಪಚ್ಚು ರಂಜನ್ಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಆಗ್ರಹಿಸಿ ಬೆಂಗಳೂರು ಚಲೋ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿರುವ ಎರಡು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಅಪ್ಪಚ್ಚು ರಂಜನ್ ಕೊಡವ ಸಮುದಾಯದ ನಾಯಕರಾದರೆ, ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ಅರೆಗೌಡ ಸಮುದಾಯದ ನಾಯಕರಾಗಿದ್ದಾರೆ. ಇವರಿಬ್ಬರನ್ನು ಇತರೆ ಸಮುದಾಯದವರು ಬೆಂಬಲಿಸುತ್ತಲೇ ಬಂದಿದ್ದಾರೆ.
ಬಿಜೆಪಿ ಮೇಲೆ ನೇರ ಪರಿಣಾಮ
ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಅವಕಾಶ ನೀಡದೆ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಈ ಇಬ್ಬರೂ ಶಾಸಕರ ಶ್ರಮವಿದೆ. ಇವತ್ತು ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಸದಸ್ಯರ ತನಕ ಬಿಜೆಪಿ ಹಿಡಿತ ಸಾಧಿಸಿದೆ. ಆದರೆ ಇದ್ಯಾವುದನ್ನು ಪರಿಗಣಿಸದೆ ಜಿಲ್ಲೆಯನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಕೊಡಗಿನಲ್ಲಿ ಎರಡು ಸಮುದಾಯದ ಹೆಚ್ಚಿನ ಜನರು ಕಟ್ಟಾ ಬಿಜೆಪಿಗರು. ಹೀಗಾಗಿಯೇ ಇಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಈಗ ಎರಡು ಸಮುದಾಯದ ನಾಯಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಗಣಿಸದೆ ಇರುವುದು ಮುಂದಿನ ಚುನಾವಣೆ ವೇಳೆಗೆ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತೋರಿಸುತ್ತಿದೆ.
ಬೋಪಯ್ಯ ಪರ ಗೌಡ ಸಮಾಜ ಬ್ಯಾಟಿಂಗ್
ಈ ನಡುವೆ ಮಾಜಿ ಸ್ಪೀಕರ್ ಬೋಪಯ್ಯ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಬ್ಯಾಟ್ ಬೀಸಿದ್ದು, ಈ ಸಂಬಂಧ ಸಭೆ ನಡೆಸಿ ಆಕ್ರೋಶವನ್ನು ಹೊರ ಹಾಕಿದೆ. ಸಭೆಯಲ್ಲಿ ಅಧ್ಯಕ್ಷ ಸೋಮಣ್ಣ ಸೂರ್ತಲೆ ಮಾತನಾಡಿ, "ನೂತನ ಸಚಿವ ಸಂಪುಟ ಆಯ್ಕೆಯಲ್ಲಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಆರ್ಥಿಕವಾಗಿ, ರಾಷ್ಟ್ರಭದ್ರತೆಯಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡಿದ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ನಿರ್ಲಕ್ಷಿಸುತ್ತಿರುವುದು ಜಿಲ್ಲೆಗೆ ಮಾಡಿದ ಅಪಮಾನ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವಾರು ವರ್ಷಗಳ ಹಿಂದೆ ಮೂರು ಮಂತ್ರಿಗಳನ್ನು ಕೊಡಗಿಗೆ ನೀಡಿ ಬೆಳವಣಿಗೆಗೆ ಸಹಕಾರ ನೀಡಿದ ಕಾಂಗ್ರೆಸ್ ಅನ್ನು ನಿರ್ಲಕ್ಷಿಸಿ ಭಾರತೀಯ ಜನತಾ ಪಕ್ಷದ ಒಬ್ಬರು ಶಾಸಕರನ್ನು ಕೊಡಗಿನಿಂದ ಆರಿಸಿ ಭಾರತೀಯ ಪಕ್ಷವನ್ನು ಕಟ್ಟಿ ಬೆಳಸಲಾಯಿತು. ಆದರೂ ಮಂತ್ರಿ ಮಂಡಲದಲ್ಲಿ ಕೊಡಗಿಗೆ ಪ್ರಾತಿನಿಧ್ಯ ನೀಡದೆ ಇರುವ ಕ್ರಮದಿಂದ ಆಡಳಿತ ಪಕ್ಷ ಹೊರಬರಬೇಕು ಎಂದು ಆಗ್ರಹಿಸಲಾಗಿದೆ.
ಕೆ. ಜಿ. ಬೋಪಯ್ಯ ಮೌನಿಯಾಗಿರುವುದೇಕೆ?
ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ್ಲವಾಗಿ ಮುಖ್ಯಮಂತ್ರಿಗಳನ್ನೊಳಗೊಂಡಂತೆ ಹಲವು ಮಂತ್ರಿಗಳ ಚಾರಿತ್ರ್ಯ ಹರಣವಾಗಿ ಸರ್ಕಾರ ಅಪಾಯದಲ್ಲಿದಾಗ ಸರ್ಕಾರವನ್ನು ಅಪಾಯದ ಅಂಚಿನಿಂದ ಪಾರು ಮಾಡಿದ ಅಂದಿನ ವಿಧಾನಸಭಾಧ್ಯಕ್ಷ ಕೆ. ಜಿ. ಬೋಪಯ್ಯ. ಇಂದಿನ ಹಿರಿಯ ರಾಜಕರಣಿ ಹಾಗೂ ಹಾಲಿ ಶಾಸಕರಾಗಿರುವ ಕೆ. ಜಿ. ಬೋಪಯ್ಯ ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲದೆ ಅವಮಾನಿತರಾಗಿ ಮೌನಿಯಾಗಿರುವುದು ಕೊಡಗಿನ ಪಾಲಿಗೆ ದುರಾದೃಷ್ಟಕರ.
Recommended Video
ಕೊಡಗಿನಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ!
ತಕ್ಷಣವೇ ಆಡಳಿತ ಪಕ್ಷದ ಹೈಕಮಾಂಡ್ ಹಾಗೂ ನೂತನ ಮುಖ್ಯಮಂತ್ರಿಗಳು ಶಾಸಕ ಕೆ. ಜಿ. ಬೋಪಯ್ಯರನ್ನು ಈಗಿನ ಮಂತ್ರಿಮಂಡಲದಲ್ಲಿ ಸೇರ್ಪಡೆಗೊಳಿಸಿ ಒಂದು ಪ್ರಮುಖ ಖಾತೆಯನ್ನು ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನಲ್ಲೀಗ ಬಿಜೆಪಿ ವಿರುದ್ಧವೇ ಆಕ್ರೋಶಗಳು ಆರಂಭವಾಗಿದ್ದು ಅದನ್ನು ನಿಭಾಯಿಸದೆ ಹೋದರೆ ಜಿಲ್ಲೆಯಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವುದಂತು ಸತ್ಯ.