ಕೊಡಗಿಗೆ ರೈಲು ಬರಲು ಇನ್ನು ಎಷ್ಟು ದಿನ ಕಾಯಬೇಕು?
ಮಡಿಕೇರಿ, ಜನವರಿ 24: ಪ್ರತಿ ಬಾರಿ ಬಜೆಟ್ ಮಂಡನೆಯ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜ್ಯದ ಜನರು ತಮ್ಮ ಜಿಲ್ಲೆಗೆ ಏನಾದರೂ ಕೊಡುಗೆ ಸಿಗುತ್ತಾ? ಎಂದು ಆಸೆ ಕಣ್ಣಿನಿಂದ ಕಾಯುವುದು ಹೊಸದೇನಲ್ಲ. ಅದರಲ್ಲೂ ಕೊಡಗಿನ ಜನ ಕಳೆದೊಂದು ದಶಕದಿಂದ ನಮ್ಮ ಜಿಲ್ಲೆಗೆ ರೈಲು ಬರುತ್ತಾ? ಎಂದು ಕಾಯುವುದು ಮಾಮೂಲಿಯಾಗಿದೆ.
ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವಿಲ್ಲದ ಏಕೈಕ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕೊಡಗು ಕಟ್ಟಿಕೊಂಡಿದೆ. ಇತ್ತೀಚೆಗಿನ ವರದಿಗಳ ಪ್ರಕಾರ ಮೈಸೂರು-ಕುಶಾಲನಗರ ನಡುವಿನ 1854.62 ಕೋಟಿ ರುಪಾಯಿ ವೆಚ್ಚದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಮೈಸೂರು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ರೈಲ್ವೆ ಸಂಪರ್ಕವಿಲ್ಲದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿಕೊಳ್ಳಲಿರುವ ಕೊಡಗು
ಕೇಂದ್ರ ಹಣಕಾಸು ಸಚಿವೆ ನಿರ್ಮಮಾ ಸೀತಾರಾಮನ್ ಫೆಬ್ರವರಿ 1ರಂದು 2021ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಬಜೆಟ್ ಸಹ ಅದರ ಜೊತೆಗೆ ಮಂಡನೆಯಾಗಲಿದೆ. ಆದ್ದರಿಂದ ಬಜೆಟ್ನಲ್ಲಿ ಈ ಸಂಬಂಧ ಏನಾದರೂ ಕೊಡುಗೆ ಕೊಡಗಿಗೆ ಸಿಗುತ್ತಾ? ಎಂಬ ಕಾತರವಂತು ಇದ್ದೇ ಇದೆ.
ಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರ
ಡಿ. ವಿ. ಸದಾನಂದಗೌಡರು ದೇಶದ ರೈಲ್ವೆ ಸಚಿವರಾದರು. ಆಗ ಕೊಡಗಿನ ಜನರಲ್ಲಿ ನಿರೀಕ್ಷೆಗಳು ಹುಟ್ಟಿಕೊಂಡವು. ಏಕೆಂದರೆ ಅವರು ಕೊಡಗಿನ ಅಳಿಯನೂ ಆಗಿದ್ದರು. ಆದರೆ ಅವರ ಕಾಲಾವಧಿಯಲ್ಲಿಯೂ ಯಾವುದೇ ರೈಲು ಕೊಡಗಿಗೆ ಬರಲಿಲ್ಲ.
ಉತ್ತರ ಕರ್ನಾಟಕಕ್ಕೆ ಸಿಹಿಸುದ್ದಿ ಕೊಟ್ಟ ಭಾರತೀಯ ರೈಲ್ವೆ
ಕೊಡಗಿಗೆ ರೈಲು ಹಲವು ದಶಕಗಳ ಕನಸು
ಕರ್ನಾಟಕದಲ್ಲಿ ರೈಲ್ವೆ ಸಂಪರ್ಕವಿಲ್ಲದ ಏಕೈಕ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕೊಡಗು ಕಟ್ಟಿಕೊಂಡಿದೆ. ಹೀಗಿದ್ದರೂ ಕೊಡಗಿನವರಿಗೆ ರೈಲು ನಮ್ಮ ಜಿಲ್ಲೆಗೆ ಬರಬೇಕೆಂಬ ಬಯಕೆಯೂ ಇರಲಿಲ್ಲ. ಆದರೆ, ನಿಮ್ಮ ಜಿಲ್ಲೆಗೆ ರೈಲು ತರುತ್ತೇವೆ ಎಂಬ ಬಯಕೆಯನ್ನು ಹುಟ್ಟು ಹಾಕಿದ್ದು ರಾಜಕಾರಣಿಗಳೇ. ಬಜೆಟ್ನಲ್ಲಿ ರೈಲು ಸಂಪರ್ಕದ ಬಗ್ಗೆ ಪ್ರಸ್ತಾಪಿಸಿ ಆಸೆ ಹುಟ್ಟಿಸಿದರು. ಹೀಗಾಗಿ ಕಳೆದೊಂದು ದಶಕದಿಂದ ಪ್ರತಿ ಬಾರಿ ಕೇಂದ್ರದ ಬಜೆಟ್ ಮಂಡನೆಯಾದಾಗಲೂ ಇಲ್ಲಿನ ಜನಕ್ಕೆ ಸಣ್ಣದಾದ ಆಸೆ ಚಿಗುರುತ್ತದೆ. ಈ ಬಾರಿಯಾದರೂ ರೈಲಿನ ಕನಸು ನನಸಾಗಬಹುದೇನೋ ಎಂಬ ಆಸೆಗಣ್ಣಿನಲ್ಲಿಯೇ ಅವರು ಕಾಯುತ್ತಿರುತ್ತಾರೆ. ಆದರೆ ಆಡಳಿತರೂಢರ ನಿರಾಸಕ್ತಿಗಳನ್ನು ಗಮನಿಸಿದರೆ ಕೊಡಗಿನವ ಪಾಲಿಗೆ ರೈಲು ಸಂಪರ್ಕ ಗಗನಕುಸುಮವಾಗಿ ಉಳಿದರೆ ಅಚ್ಚರಿಪಡಬೇಕಾಗಿಲ್ಲ.
ಮೈಸೂರು-ಕುಶಾಲನಗರ ರೈಲು ಸಂಪರ್ಕ
ಮೈಸೂರಿನಿಂದ ಕುಶಾಲನಗರದವರೆಗೆ ರೈಲು ಸಂಪರ್ಕವನ್ನು ವಿಸ್ತರಿಸಿದರೆ ಇದರಿಂದ ಪರಿಸರ ನಾಶವಾಗಲೀ ಇನ್ನಿತರ ಯಾವುದೇ ಅನಾನುಕೂಲಗಳಾಗುವುದಿಲ್ಲ. ಆದರೆ ಇದಕ್ಕೆ ಹೆಚ್ಚು ಆಸಕ್ತಿ ವಹಿಸದೆ ಎರಡು ವರ್ಷಗಳ ಹಿಂದೆ ಕೇರಳ ರಾಜ್ಯದ ಹಿತಾಸಕ್ತಿಯಿಂದ ಮಾನಂದವಾಡಿ, ಕುಟ್ಟ, ಕಾನೂರು, ಬಾಳೆಲೆ, ತಿತಿಮತಿ ಮತ್ತು ಆನೆಚೌಕೂರು ಮಾರ್ಗವಾಗಿ ತಲಚೇರಿ ಮತ್ತು ಮೈಸೂರು ರೈಲ್ವೆ ಹಳಿ ಮಾರ್ಗ 181 ಕಿ.ಮೀ. ಯೋಜನೆಗೆ ಮುಂದಾಗಿದ್ದರು. ಇದಕ್ಕೆ ಕೊಡಗು ಸೇರಿದಂತೆ ಮೈಸೂರು ವ್ಯಾಪ್ತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಒಂದು ವೇಳೆ ಇದು ಕಾರ್ಯಗತವಾದರೆ ಕೊಡಗು ಸಂಪೂರ್ಣ ನಾಶವಾಗುವುದು ಖಚಿತ. ಇಲ್ಲಿನವರು ಜೀವನ ಮಾಡುತ್ತಿರುವುದು ಕೃಷಿಯನ್ನು ನಂಬಿ. ಹಾಗಾಗಿ ಜಿಲ್ಲೆಯೊಳಗೆ ರೈಲು ಮಾರ್ಗ ಹಾದು ಹೋದರೆ ಅದರಿಂದ ಆಗಬಹುದಾದ ನಷ್ಟವನ್ನು ಊಹಿಸಲಾಗದು.
ರೈಲು ಬಂದರೆ ಪ್ರವಾಸೋದ್ಯಮ ಅಭಿವೃದ್ಧಿ
ಮೈಸೂರು ಮತ್ತು ಕೊಡಗಿನ ಕುಶಾಲನಗರದವರೆಗಿನ ಸಂಪರ್ಕದಿಂದ ಪರಿಸರ ನಾಶವಾಗಲಾರದು ಜತೆಗೆ ಕೊಡಗು ಜಿಲ್ಲೆಯ ಕಾಫಿ ಉದ್ಯಮ, ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಬೆಳೆಗಳಾದ ತಂಬಾಕು, ಮುಸುಕಿನ ಜೋಳ, ಶುಂಠಿ ಇತ್ಯಾದಿ ವಾಣಿಜ್ಯ ಬೆಳೆಗಳ ಸಾಗಾಟಕ್ಕೂ ಅನುಕೂಲವಾಗಲಿದೆ. ಮೈಸೂರಿನ ಸಂಪರ್ಕ ಸುಲಭವಾಗುವುದಲ್ಲದೆ, ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿದೆ. ದಶಕಗಳ ಹಿಂದೆಯೇ ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಕುರಿತಂತೆ ಪ್ರಸ್ತಾಪವಾಗಿತ್ತು. ಆರುನೂರು ಕೋಟಿ ವೆಚ್ಚದಲ್ಲಿ ಯೋಜನೆಗೆ ಸರ್ವೆ ಕಾರ್ಯವೂ ನಡೆಯಿತು. ಆದರೆ ಇದಕ್ಕೆ ಒಂದಷ್ಟು ಅಡ್ಡಿ ಆತಂಕಗಳು ಎದುರಾಯಿತು ಅದೆಲ್ಲವನ್ನೂ ನಿಭಾಯಿಸಿ ಮುನ್ನಡೆಯುವುದು ಸಾಧ್ಯವಾಗಲಿಲ್ಲ.
ರೈಲು ಯೋಜನೆಗೆ ಸಿಗದ ಸ್ಪಂದನೆ
ಹಿಂದಿನ ಸರ್ವೆಯಲ್ಲಿ ಮೈಸೂರು- ಕುಶಾಲನಗರ ನಡುವಿನ 86.50 ಕಿ.ಮೀ. ಅಂತರದ ಮಾರ್ಗದ ನಡುವೆ ಸೇತುವೆಗಳು, ಕನ್ವರ್ಟರ್ ನಿರ್ಮಾಣ ಸೇರಿದಂತೆ ರೈಲು ಮಾರ್ಗ ನಿರ್ಮಾಣಕ್ಕೆ 600 ಕೋಟಿ ರುಪಾಯಿ ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಮತ್ತೊಂದೆಡೆ ಮೈಸೂರಿನಿಂದ ಮಡಿಕೇರಿ ತನಕ ಒಟ್ಟು 2607.53 ಕೋಟಿ ವೆಚ್ಚದ ರೈಲು ಹಳಿ ಮಾರ್ಗ ಯೋಜನೆಯಲ್ಲಿ ಕುಶಾಲನಗರ ತನಕದ ಮಾರ್ಗಕ್ಕೆ ಕೇಂದ್ರ ಸರ್ಕಾರ 1858 ಕೋಟಿ ರುಗಳನ್ನು ಬಿಡುಗಡೆಗೊಳಿಸಿದೆ ಎಂಬ ವರದಿಗಳು ಬಂದಿತಾದರೂ ಅವತ್ತಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ ಹೀಗಾಗಿ ಅದು ನೆನೆಗುದಿಗೆ ಬಿದ್ದಿತು. ಜನ ಕೂಡ ಅದನ್ನು ಮರೆತು ಬಿಟ್ಟಿದ್ದರು.
ಮಡಿಕೇರಿಗೆ ರೈಲು ಸಂಪರ್ಕ ಬೇಡ
ಮಡಿಕೇರಿ ತನಕ ರೈಲು ಸಂಪರ್ಕ ಕಲ್ಪಿಸುವುದರಿಂದ ಪರಿಸರದ ಮೇಲೆ ಭಾರೀ ಹಾನಿಯಾಗುವುದರಿಂದ ಕಾಫಿ ತೋಟಗಳು ನಾಶವಾಗುತ್ತವೆ. ಜತೆಗೆ ಕಾಡು ಪ್ರಾಣಿಗಳ ಜೀವಕ್ಕೂ ಕುತ್ತುವುಂಟಾಗುತ್ತದೆ ಎಂಬ ಅಸಮಾಧಾನಗಳು ಕೇಳಿ ಬಂದವು. ಹೀಗಾಗಿ ಜನ ಕುಶಾಲನಗರ ತನಕ ಸಂಪರ್ಕ ಕಲ್ಪಿಸಿ ಸಾಕೆಂದು ಮಾತನಾಡಿ ಕೊಳ್ಳತೊಡಗಿದರು. 2012ರಲ್ಲಿ ಅಂದಿನ ರೈಲ್ವೆ ಸಚಿವರಾಗಿದ್ದ ಕೆ. ಎಚ್. ಮುನಿಯಪ್ಪ ಅವರು ಮೈಸೂರು- ಕುಶಾಲನಗರ ನೂತನ ರೈಲ್ವೆ ಮಾರ್ಗ ಸರ್ವೆ ಕಾರ್ಯಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಿದರಾದರೂ ನಂತರದ ದಿನಗಳಲ್ಲಿ ವಿರೋಧಗಳು ಹೆಚ್ಚಾಗಿ ನಿಂತು ಹೋಯಿತು. ಮಡಿಕೇರಿಗಿದ್ದ ಸಂಪರ್ಕವನ್ನು ತಡೆಹಿಡಿದು ಕುಶಾಲನಗರಕ್ಕೆ ಸಂಪರ್ಕವನ್ನು ಸೀಮಿತಗೊಳಿಸಲಾಯಿತು.
ಕೊಡಗಿನತ್ತ ನಿರಾಸಕ್ತಿ ತೋರಿದ ಸಚಿವರು
ಡಿ. ವಿ. ಸದಾನಂದಗೌಡ ದೇಶದ ರೈಲ್ವೆ ಸಚಿವರಾದರು. ಆಗ ಮತ್ತೆ ಇಲ್ಲಿನ ಜನರಲ್ಲಿ ನಿರೀಕ್ಷೆಗಳು ಹುಟ್ಟಿಕೊಂಡವು. ಏಕೆಂದರೆ ಅವರು ಕೊಡಗಿನ ಅಳಿಯನೂ ಆಗಿದ್ದರು. ಆದರೆ ಅವರ ಕಾಲಾವಧಿಯಲ್ಲಿಯೂ ಯಾವುದೇ ರೈಲು ಬರಲಿಲ್ಲ. ಅದರ ಬಗ್ಗೆ ಅವರು ಆಸಕ್ತಿಯನ್ನು ಕೂಡ ವಹಿಸಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದರು. ನಂತರ ಸದಾನಂದಗೌಡರು ಬಂದರು ಆದರೆ ಯಾರಿದಂಲೂ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿಲ್ಲ.
Recommended Video
ರೈಲಿಲ್ಲವೆಂಬ ಹಣೆಪಟ್ಟಿ ಅಳಿಯುತ್ತಾ?
ಎಚ್. ವಿಶ್ವನಾಥ್ ಮೈಸೂರು ಕೊಡಗು ಸಂಸದರಾಗಿದ್ದಾಗಲೂ ರೈಲು ಸಂಪರ್ಕದ ಬಗ್ಗೆ ಮಾತನಾಡುತ್ತಲೇ ಬಂದಿದ್ದರು. ಈಗ ಸಂಸದರಾಗಿರುವ ಪ್ರತಾಪ್ ಸಿಂಹ ಕೂಡ ಕೊಡಗಿಗೆ ರೈಲು ತರುವ ಮಾತುಗಳನ್ನಾಡುತ್ತಿದ್ದಾರೆ. ಈ ಸಂಬಂಧ ಶ್ರಮವಹಿಸುತ್ತಿದ್ದಾರೆ. ಪರಿಣಾಮ ದೆಹಲಿಯ ಭಾರತೀಯ ರೈಲ್ವೆಯು ಮೈಸೂರು-ಕುಶಾಲನಗರ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ ಇಲ್ಲಿನ ಜನ ಸಂಸದರ ಕಾರ್ಯವನ್ನು ಮರೆಯುವುದಿಲ್ಲ. ಜತೆಗೆ ಈ ಬಾರಿ ಬಜೆಟ್ನಲ್ಲಿ ಕೊಡಗಿಗೆ ರೈಲು ಸಂಪರ್ಕದ ಪ್ರಕ್ರಿಯೆಗಳಿಗೆ ಹಸಿರು ನಿಶಾನೆ ತೋರಿದರೆ ರೈಲು ಸಂಪರ್ಕವಿಲ್ಲದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ಸಾಧ್ಯವಿದೆ. ಎಲ್ಲದಕ್ಕೂ ಕಾದು ನೋಡುವುದು ಅನಿವಾರ್ಯವಾಗಿದೆ.