ಮಳೆಗಾಲ ಬರುತ್ತಿದೆ, ಭಾಗಮಂಡಲದಲ್ಲಿ ಇನ್ನೂ ನಿರ್ಮಾಣವಾಗಿಲ್ಲ ಈ ಸೇತುವೆ
ಮಡಿಕೇರಿ, ಮೇ 22: ಕೊಡಗಿನ ತಲಕಾವೇರಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆ ಸುರಿದಾಗಲೆಲ್ಲ ಭಾಗಮಂಡಲ ಜಲಾವೃತವಾಗುತ್ತದೆ. ಈ ವೇಳೆ ಇಲ್ಲಿನ ಕೆಲವು ಭಾಗ ಮತ್ತು ತಲಕಾವೇರಿಯ ಸುತ್ತಮುತ್ತಲಿನ ಗ್ರಾಮಗಳು ಜಿಲ್ಲೆಯೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತವೆ. ಇದು ಇಂದು ನಿನ್ನೆಯದಲ್ಲ, ಹಿಂದಿನಿಂದಲೂ ಜನ ಅನುಭವಿಸಿಕೊಂಡು ಬಂದ ಸಮಸ್ಯೆ.
Recommended Video
ಮಳೆ ಸುರಿದಾಗ ಕಾವೇರಿ, ಸುಜ್ಯೋತಿ ಮತ್ತು ಕನ್ನಿಕಾ ನದಿ ನೀರು ಹರಿದು ಬಂದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸೇರುವುದರಿಂದ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ. ಈ ವೇಳೆ ಭಾಗಮಂಡಲದ ಬಹುತೇಕ ಪ್ರದೇಶ ಜಲಾವೃತವಾಗುತ್ತದೆ. ಇದರಿಂದ ಇಲ್ಲಿನ ಜನ ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ವಾಸವಿರುವ ಜನ ಭಯಭೀತರಾಗುತ್ತಾರೆ.
ಸೇತುವೆ ಕಾಮಗಾರಿ ಆರಂಭಿಸಿ ಎರಡು ವರ್ಷವಾಯ್ತು
ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಓಬಿರಾಯನ ಸೇತುವೆಗಳು. ಹಿಂದಿನ ಕಾಲದಲ್ಲಿ ನಿರ್ಮಿಸಿದ ಸೇತುವೆ ಕಿರಿದಾಗಿದ್ದು, ನೀರು ಹರಿದು ಬಂದಾಗಲೆಲ್ಲ ಸೇತುವೆ ಮುಳುಗಿಬಿಡುತ್ತದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಡಿತವಾಗುತ್ತದೆ. ಈ ಸಂದರ್ಭ ತಲಕಾವೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ವಾಸಿಸುವ ಜನ ಸಂಪರ್ಕ ಕಳೆದುಕೊಂಡು ಪರದಾಡುತ್ತಾರೆ. ಇವರ ಸಮಸ್ಯೆಯನ್ನು ಪರಿಹರಿಸಬೇಕಾದರೆ ಇಲ್ಲಿ ನೂತನ ಅತ್ಯಾಧುನಿಕ ಸೇತುವೆಯ ಅಗತ್ಯವಿದ್ದು, ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಎರಡು ವರ್ಷವಾದರೂ ಹಲವಾರು ತೊಡಕುಗಳಿಂದಾಗಿ ನಿರ್ಮಾಣ ಕಾಮಗಾರಿ ಅಂದುಕೊಂಡಂತೆ ನಡೆಯಲೇ ಇಲ್ಲ.
ಕೊಡಗಿನಲ್ಲಿ ಭೂಮಿಯೊಳಗಿಂದ ಪದೇ ಪದೇ ವಿಚಿತ್ರ ಶಬ್ದ! ಕಾರಣ ಬಿಚ್ಚಿಟ್ಟ ತಜ್ಞರು
ಸೇತುವೆ ನಿರ್ಮಾಣಕ್ಕೆ ಇನ್ನೆಷ್ಟು ಮಳೆಗಾಲ ಕಳೆಯಬೇಕೋ?
ಸುಮಾರು 29 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಕಾವೇರಿ ನೀರಾವರಿ ನಿಗಮ ಮೇಲ್ಸೇತುವೆ ಕಾಮಗಾರಿಯನ್ನು ನಡೆಸುತ್ತಿದೆಯಾದರೂ ಅದು ಇನ್ನೂ ಸೇತುವೆ ಕಂಬಗಳ ಅಡಿಪಾಯದ ಹಂತದಲ್ಲಿಯೇ ಇರುವುದನ್ನು ಗಮನಿಸಿದರೆ ಸೇತುವೆ ನಿರ್ಮಾಣವಾಗಲು ಇನ್ನೆಷ್ಟು ಮಳೆಗಾಲಗಳನ್ನು ಕಾಯಬೇಕೋ ಎಂಬ ಸಂಶಯ ಮೂಡುವುದು ಸಹಜವಾಗಿದೆ. ಈ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಖಾಸಗಿ ಉದ್ದಿಮೆಯಾದ ಎ.ವಿ.ಆರ್. ತೇಜಸ್ ಇನ್ಫ್ರ ಪ್ರೈವೇಟ್ ಲಿಮಿಟೆಡ್ ಪಡೆದಿದ್ದು, ಇದುವರೆಗೆ ಸುಮಾರು ಮೂರು ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿ ಒಂದಷ್ಟು ಕಾಮಗಾರಿಯನ್ನು ನಡೆಸಿದ್ದರೂ, ಅನುದಾನ ಬಿಡುಗಡೆಯಾಗಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಸಮಸ್ಯೆಯಿಂದ ಮುಕ್ತರಾಗದ ಜನ
ಕಳೆದ ಎರಡು ವರ್ಷಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾದ ಕಾರಣದಿಂದ ಸೇತುವೆ ನಿರ್ಮಾಣ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಮೆಗತಿಯಲ್ಲಿ ನಡೆಯುತ್ತಾ ಸಾಗುತ್ತಿದ್ದು, ಇದರಿಂದ ಸೇತುವೆ ನಿರ್ಮಾಣವಾದರೆ ಮಳೆಗಾಲದಲ್ಲಿ ಅನುಭವಿಸುತ್ತಾ ಬಂದಿರುವ ತೊಂದರೆಯಿಂದ ಈ ಬಾರಿಯಾದರೂ ಮುಕ್ತರಾಗಬಹುದೆಂದು ಕನಸು ಕಾಣುತ್ತಿದ್ದ ಸ್ಥಳೀಯ ಜನ ನಿರಾಶರಾಗಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಕೊರೊನಾದಿಂದಾಗಿ ಕಾರ್ಮಿಕರು ಊರು ಬಿಟ್ಟಿದ್ದರಿಂದ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಕಾಮಗಾರಿಗೆ ಬೇಕಾದ ಸಾಮಗ್ರಿಗಳು ದೊರೆಯುತ್ತಿಲ್ಲ. ಇದೆಲ್ಲದರ ಸಮಸ್ಯೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.
ಸದ್ಯಕ್ಕೆ ನನಸಾಗುವ ಲಕ್ಷಣಗಳಿಲ್ಲ
ಕೊಡಗಿನ ಪ್ರಮುಖ ಯಾತ್ರಾ ಸ್ಥಳವಾಗಿರುವ ತಲಕಾವೇರಿ ಮತ್ತು ಭಾಗಮಂಡಲವನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಎದ್ದು ಕಾಣುತ್ತಿದೆ. ಅದರಲ್ಲೂ ವರ್ಷದ ಹೆಚ್ಚು ಸಮಯವನ್ನು ಮಳೆಯಲ್ಲಿಯೇ ಕಳೆಯುವ ಭಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತ ವಾಸಿಸುವ ಜನ ಮೇಲ್ಸೇತುವೆಯ ಕನಸು ಕಾಣುತ್ತಿದ್ದಾರೆ. ಆದರೆ ಆ ಕನಸು ನನಸಾಗುವ ಲಕ್ಷಣಗಳು ಸದ್ಯಕ್ಕಂತು ಇಲ್ಲವಾಗಿದೆ.