ಹುಡುಗಿ ನಿಂದಿಸಿದಳೆಂದು ಆತ್ಮಹತ್ಯೆ ಮಾಡಿಕೊಂಡ ವಿರಾಜಪೇಟೆ ಯುವಕ
ಮಡಕೇರಿ, ಫೆಬ್ರವರಿ 19: ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನನ್ನು ನಿಂದಿಸಿದಳು ಎಂಬ ಕಾರಣಕ್ಕೆ ನೊಂದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.
ಕೊಡಗಿನ ವೀರಾಜಪೇಟೆ ತಾಲ್ಲೂಕಿನ ಹುದಿಕೇರಿ ನಿವಾಸಿ ಸಂಜು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಕುಶಾಲನಗರ ಸಮೀಪದ ಕೂಡುಮಂಗಳೂರಿನ ಬರ್ಡ್ ಆಫ್ ಪ್ಯಾರಡೈಸ್ ಹೋಂ ಸ್ಟೇಯಲ್ಲಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಸಂಜು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಯುವ ಸಂದರ್ಭ "ನೀನು ಮದ್ಯ ಕುಡಿದಿದ್ದೀಯ" ಎಂದು ಆಕೆ ಸಂಜು ಜೊತೆ ವಾಗ್ವಾದ ನಡೆಸಿದ್ದಳು ಎನ್ನಲಾಗಿದೆ.
ಗಾಯಕಿ ಸುಶ್ಮಿತಾ ಆತ್ಮಹತ್ಯೆ; ಪತಿ, ಕುಟುಂಬದವರು ನಾಪತ್ತೆ
ಇದರಿಂದ ಸಂಜು ಹೋಂ ಸ್ಟೇಯಲ್ಲಿನ ಕಾಫಿ ತೋಟದ ಮರಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಸಂಜು ಮೃತದೇಹವನ್ನು ಕಂಡ ಹೋಂಸ್ಟೇ ವ್ಯವಸ್ಥಾಪಕರು ಆತನ ಮನೆಯವರಿಗೆ ಮತ್ತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಂಜು ಮೃತದೇಹವನ್ನು ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.