ಕೊಡಗಿನಲ್ಲಿ ಚುನಾವಣೆಗೂ ಮುನ್ನವೇ ಬೀಗುತ್ತಿರುವ ಬಿಜೆಪಿ!
ಮಡಿಕೇರಿ, ಡಿಸೆಂಬರ್ 4: ವಿಧಾನ ಪರಿಷತ್ ಚುನಾವಣೆಗೆ ದಿನಗಳು ಹತ್ತಿರವಾಗಿದ್ದು, ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದರೂ, ಬಿಜೆಪಿ ಮಾತ್ರ ಅದಾಗಲೇ ಗೆಲುವಿನ ಸಂಭ್ರಮದಲ್ಲಿ ಬೀಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸುವುದು ಕಾಂಗ್ರೆಸ್ಗೆ ಕಷ್ಟದ ಕೆಲಸವಾಗಿದೆ. ಕಳೆದ ಕೆಲವು ದಶಕಗಳಿಂದ ಬಿಜೆಪಿ ಕೊಡಗಿನಲ್ಲಿ ಪ್ರಾಬಲ್ಯ ಸಾಧಿಸಿಕೊಂಡೇ ಬಂದಿದೆ. ಇದಕ್ಕೆ ಕಾರಣವಾಗಿರುವುದು ಜಿಲ್ಲಾ ಕಾಂಗ್ರೆಸ್ನಲ್ಲಿರುವ ಭಿನ್ನಾಭಿಪ್ರಾಯಗಳೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇಲ್ನೋಟಕ್ಕೆ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳುತ್ತಾರೆಯಾದರೂ, ಇವತ್ತು ಕೊಡಗಿನಲ್ಲಿ ಕಾಂಗ್ರೆಸ್ ಹಿಡಿತ ಕಳೆದುಕೊಳ್ಳಲು ಅದು ಕೂಡ ಕಾರಣ ಎಂದರೆ ತಪ್ಪಾಗಲಾರದು.
ಬಿಜೆಪಿಗೆ ಪ್ಲಸ್ ಪಾಯಿಂಟ್ ಯಾವುದು?
ಕೊಡಗಿನಲ್ಲಿ ಕಾಂಗ್ರೆಸ್ ಅನ್ನು ತಳಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದು, ಅಲ್ಲಿ ಕಾಂಗ್ರೆಸ್ ನೆಲೆಯೂರಬೇಕಾದರೆ ಕಠಿಣ ಪರಿಶ್ರಮವಂತು ಬೇಕೇ ಬೇಕಾಗಿದೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಜಿಲ್ಲೆಯ ಕಾಂಗ್ರೆಸ್ನ ನಾಯಕರಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಒಗ್ಗಟ್ಟಾಗಿ ಕೊಂಡೊಯ್ಯುವ ಪ್ರಯತ್ನ ಮಾಡಬಹುದೆಂದು ನಂಬಿದ್ದರು. ಆದರೆ ಅದು ಇಲ್ಲಿ ತನಕ ಸಾಧ್ಯವಾಗಿಲ್ಲ. ಈ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾಡಿದ ಪ್ರಯತ್ನವೂ ಕೈಗೂಡಲಿಲ್ಲ.
ಇದೆಲ್ಲದರ ನಡುವೆ ಹೊರ ಜಿಲ್ಲೆ ಹಾಸನದ ಅರಕಲಗೂಡಿನ ಮಂಥರ್ಗೌಡರನ್ನು ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದು ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅದನ್ನು ಬಹಿರಂಗವಾಗಿ ಹೊರಹಾಕದಿದ್ದರೂ ಅದು ಆಪ್ತ ವಲಯದಲ್ಲಿ ಆಕ್ರೋಶವಾಗಿ ಹೊರಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನು ಕೈ ಅಭ್ಯರ್ಥಿ ಮಂಥರ್ಗೌಡ ಅವರು ಜಿಲ್ಲೆಯವನಲ್ಲದಿದ್ದರೂ, ನಾನು ಕೊಡಗಿನ ಅಳಿಯ ಎಂದು ಹೇಳುತ್ತಾರೆ. ಆದರೆ ಅವರ ಒಡನಾಟ ಸ್ಥಳೀಯ ಮತದಾರರಿಗೆ ಇಲ್ಲದಿರುವುದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳಿವೆ.
ಬಿಜೆಪಿಯ ಲೆಕ್ಕಾಚಾರಗಳೇನು ಗೊತ್ತಾ?
ಇನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಇಸಾಕ್ ಖಾನ್ ನಾಮಪತ್ರ ವಾಪಸ್ ಪಡೆದಿದ್ದು ಕಾಂಗ್ರೆಸ್ಗಿಂತ ಬಿಜೆಪಿಗೆ ಲಾಭ ಮಾಡಿಕೊಟ್ಟರೂ ಅಚ್ಚರಿ ಪಡಬೇಕಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಲೆಕ್ಕಾಚಾರಗಳನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಖಚಿತ ಎಂಬಂತೆ ಬೀಗುತ್ತಿರುವುದು ಕಂಡು ಬರುತ್ತಿದೆ. ಏಕೆಂದರೆ ಜಿಲ್ಲೆಯಲ್ಲಿ ಗ್ರಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಪೈಕಿ ಹೆಚ್ಚಿನವರು ಬಿಜೆಪಿ ಬೆಂಬಲಿತರಾಗಿದ್ದಾರೆ. ಅವರು ಮತ ಚಲಾಯಿಸಿದರೆ ತಮ್ಮದೇ ಗೆಲುವು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಇದಕ್ಕೆ ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ನೀಡುತ್ತಿರುವ ಅಂದಾಜಿನ ಲೆಕ್ಕಾಚಾರಗಳು ಸಾಕ್ಷಿಯಾಗಿದ್ದು, ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸುವ ಹಕ್ಕನ್ನು 1334 ಮಂದಿ ಪಡೆದಿದ್ದು, ಈ ಪೈಕಿ ಬಿಜೆಪಿ ಬೆಂಬಲಿತರು 848 ಮಂದಿ ಇರುವುದು ಬಿಜೆಪಿ ಅಭ್ಯರ್ಥಿಯಲ್ಲಿ ಹುಮ್ಮಸ್ಸು ತುಂಬಿದೆ.
ಜಿಲ್ಲೆಯಲ್ಲಿರುವ ಮತದಾರರ ವಿವರಗಳು
ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಒಟ್ಟು ಮತಗಳು ಮತ್ತು ಯಾವ್ಯಾವ ಪಕ್ಷಗಳ ಬೆಂಬಲಿತರು ಎಷ್ಟೆಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬುದನ್ನು ನೋಡಿದ್ದೇ ಆದರೆ, ಒಟ್ಟು 1334 ಮತಗಳಿದ್ದು, ಇದರಲ್ಲಿ ಬಿಜೆಪಿ ಬೆಂಬಲಿತರು 848, ಕಾಂಗ್ರೆಸ್ ಬೆಂಬಲಿತರು 301, ಜೆಡಿಎಸ್ 120 ಮತ್ತು ಪಕ್ಷೇತರರು 65 ಮಂದಿ ಇದ್ದಾರೆ. ಇದೆಲ್ಲವನ್ನು ಗಮನಿಸಿ ಲೆಕ್ಕಾಚಾರ ಹಾಕುತ್ತಿರುವ ಬಿಜೆಪಿ ತಮ್ಮ ಅಭ್ಯರ್ಥಿ ಕನಿಷ್ಠ 985 ಮತಗಳನ್ನು ಪಡೆದೇ ಪಡೆಯುತ್ತಾರೆ. ಹೀಗಾಗಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದಾರೆ.
Recommended Video
ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆಯಿಡುತ್ತಾ?
ಅಭ್ಯರ್ಥಿಗಳ ಹಣೆಬರಹ ಬರೆಯುವ ಮತದಾರರು ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಇಲ್ಲಿ ಬಹುಮುಖ್ಯವಾಗಲಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರಗಳು ಅಭ್ಯರ್ಥಿಗಳ ಭವಿಷ್ಯ ಹೇಳಲಿದೆ. ವಿಧಾನ ಪರಿಷತ್ ಸ್ಥಾನವನ್ನು ಉಳಿಸಿಕೊಂಡು ಬಿಜೆಪಿ ತನ್ನ ಕೋಟೆಯನ್ನು ಇನ್ನಷ್ಟು ಭದ್ರಗೊಳಿಸಲಿದೆಯಾ? ಕೊಡಗಿನ ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆಯಿಡುತ್ತಾ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಡಿಸೆಂಬರ್ 10ರಂದು ಚುನಾವಣೆ ನಡೆದು ಡಿ.14ರಂದು ಪ್ರಕಟವಾಗಲಿರುವ ಫಲಿತಾಂಶದ ತನಕ ಕಾಯಲೇಬೇಕಾಗಿದೆ.