ವಿರಾಜಪೇಟೆ, ಕುಶಾಲನಗರ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
ಮಡಿಕೇರಿ, ನವೆಂಬರ್ 3: ಮೂವರು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಕ್ಷದ ಪಾಲಾಗಿದೆ.
ಜೆಡಿಎಸ್ ಪಕ್ಷದ ಮೂವರು ಸದಸ್ಯರ ಬೇಷರತ್ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೇರಿದ್ದು, ಬಿಜೆಪಿಯ ಜಯವರ್ಧನ್ (ಕೇಶವ್) ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊಡಗಿನಲ್ಲೊಂದು ಪ್ರಸಂಗ; ರಸ್ತೆ ಬದಿ ಕಸ ಎಸೆದ ಪ್ರವಾಸಿಗರಿಗೆ ತಕ್ಕ ಪಾಠ
ಜೆಡಿಎಸ್ ಪಕ್ಷದ ಸುರಯ್ಯ ಭಾನು ಅವರು ಕುಶಾಲನಗರ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರಿಂದ ಮತ ಚಲಾವಣೆಯಾಯಿತು.
ಬಿಜೆಪಿಯ 6 ಸದಸ್ಯರು, ಸಂಸದ, ಶಾಸಕ ಸೇರಿ ಬಿಜೆಪಿಯ 9 ಮತಗಳಾದರೆ, ಜೆಡಿಎಸ್ ಬೆಂಬಲದ 3 ಮತಗಳೂ ಸೇರಿ ಒಟ್ಟು 12 ಮತಗಳಿಂದ ಕುಶಾಲನಗರ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು.
ಜೆಡಿಎಸ್ ಪಕ್ಷದ ಓರ್ವ ಸದಸ್ಯ ತಟಸ್ಥ ನೀತಿ ಅನುಸರಿಸಿದ್ದು, ಕಾಂಗ್ರೆಸ್ ಪಾಲಿಗೆ 6 ಸದಸ್ಯರ ಮತಗಳು ಮಾತ್ರ ದೊರಕಿದವು. ಕುಶಾಲನಗರ ಪಟ್ಟಣ ಪಂಚಾಯತಿಯಲ್ಲಿ ಕಳೆದ 2 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಾಗಿರಲಿಲ್ಲ.
ವಿರಾಜಪೇಟೆ ಪಟ್ಟಣ ಪಂಚಾಯತ
ಇದೇ ವೇಳೆ ವಿರಾಜಪೇಟೆ ಪಟ್ಟಣ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವೂ ಬಿಜೆಪಿ ಮಡಿಲಿಗೆ ಬಂದಿದ್ದು, ಬಿಜೆಪಿಯ ಟಿ.ಆರ್. ಸುಷ್ಮಿತಾ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಯಾದರು.
10 ಮತಗಳಿಂದ ಸುಶ್ಮಿತಾ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೂ ಬಿಜೆಪಿಯ ಹರ್ಷವರ್ಧನ್ ಆಯ್ಕೆಯಾದರು. ಕಾಂಗ್ರೆಸ್ ನ ಅಗಸ್ಟಿನ್ ಮತ್ತು ಹರ್ಷವರ್ಧನ್ ಅವರಿಗೆ 10-10 ಸಮಬಲದ ಮತಗಳು ಬಂದಿದ್ದವು.
ಆಗ ಲಾಟರಿ ಮೂಲಕ ಆಯ್ಕೆಯಲ್ಲಿ ಹರ್ಷವರ್ಧನ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ವಿರಾಜಪೇಟೆಯಲ್ಲಿ ಬಿಜೆಪಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೂಲಕ ಕಮಲ ಪಕ್ಷ ದಿಗ್ವಿಜಯ ಸಾಧಿಸಿತು.
Recommended Video
ಬಿಜೆಪಿ 8 ಸದಸ್ಯರು, ಸಂಸದರು, ಶಾಸಕರ ಮತಗಳು ಸೇರಿ 10 ಮತಗಳು ಬಿಜೆಪಿಗೆ ಲಭಿಸಿದವು. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಮೈತ್ರಿಕೂಟಕ್ಕೆ ಸೋಲಾಯಿತು.