ಜ್ವಾಲಾಮುಖಿ ಪರ್ವತದಲ್ಲಿ ಸ್ಕೀಯಿಂಗ್ ಕಲಿತ ಗಟ್ಟಿಗಿತ್ತಿ ಈ ಕೊಡಗಿನ ಕುವರಿ
ಹಿಮಚ್ಛಾದಿತ ಪರ್ವತ ಏರುವುದು, ಈಜು, ಕುದುರೆ ಸವಾರಿ... ಇಂಥ ಸಾಹಸಮಯ ಕ್ರೀಡೆಗಳೆಂದರೆ ಕೊಡಗಿನ ಈ ಯುವತಿಗೆ ನೀರು ಕುಡಿದಷ್ಟೇ ಸಲೀಸು. ಇವಿಷ್ಟೇ ಅಲ್ಲ, ನ್ಯೂಜಿಲ್ಯಾಂಡ್ನ ಜ್ವಾಲಾಮುಖಿ ಪರ್ವತವಾಗಿರುವ ಮೌಂಟ್ ರೂಪೇವ್ ನಲ್ಲಿ ಮೂರು ತಿಂಗಳ ಕಾಲ ಸ್ಕೀಯಿಂಗ್ ತರಬೇತಿ ಮುಗಿಸಿ ಅಂತರ ರಾಷ್ಟ್ರೀಯ ಸ್ಕೀಯಿಂಗ್ ಬೋಧಕರ ಅರ್ಹತೆಯನ್ನೂ ಪಡೆದುಕೊಂಡಿರುವ ಇವರ ಮುಂದೆ ಈಗ ನೂರಾರು ಕನಸುಗಳೂ ಹರಡಿಕೊಂಡಿವೆ.
ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು
ಈಗಾಗಲೇ ರಷ್ಯಾದ ಅತಿ ಎತ್ತರದ ಮೌಂಟ್ ಎಲ್ಬ್ರಸ್ ಪರ್ವತದ ಮೇಲೆ ಭಾರತದ ಧ್ವಜ ನೆಟ್ಟು ಬಂದಿರುವ ಕೊಡಗಿನ ಭವಾನಿ ಸ್ಕೀಯಿಂಗ್ ನಲ್ಲಿಯೂ ಸಾಧನೆ ಮಾಡಿ ಕೊಡಗಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಮೌಂಟ್ ರೂಪೇವ್ ನಲ್ಲಿ ತರಬೇತಿ ಪಡೆದ ಮೊದಲ ಭಾರತೀಯ ಯುವತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಕೊಡಗಿನ ಕುವರಿಗೆ ಸಾಹಸಮಯ ಕ್ರೀಡೆ ಎಂದರೆ ಇಷ್ಟ
ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ (ಶಂಭು), ಪಾರ್ವತಿ (ದಿವ್ಯ) ದಂಪತಿ ಮಗಳಾದ ಭವಾನಿ ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತೊಡಗಿಸಿಕೊಳ್ಳಲು ಹಾದಿ ಇನ್ನಷ್ಟು ಸುಗಮವಾಯಿತು.
ಭವಾನಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ, ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದರು. ಪ್ರೌಢಶಾಲೆಯಿಂದಲೇ ಎನ್ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿ ಗಮನಸೆಳೆದರು.
ಧೈರ್ಯ ತುಂಬಿದ ಪರ್ವತಾರೋಹಣ
ಪರ್ವಾತಾರೋಹಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಭವಾನಿ ಅವರು, ಪ್ರಾಥಮಿಕ ತರಬೇತಿಯನ್ನು ಮನಾಲಿಯ ಅಟಲ್ ಬಿಹಾರಿ ವಾಜಪೇಯಿ ಇನ್ ಸ್ಟಿಟ್ಯೂಟ್ ಆಫ್ ಮೌಂಟೇನರಿಂಗ್ ಆಲೈಡ್ ಸ್ಫೋರ್ಟ್ಸ್ ನಲ್ಲಿ ಮತ್ತು ಹೆಚ್ಚಿನ ತರಬೇತಿಯನ್ನು ಡಾರ್ಜಿಲಿಂಗ್ ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ (ಹೆಚ್ಎಂಐ) ನಲ್ಲಿ ಪಡೆದಿದ್ದಾರೆ. ಡಾರ್ಜಲಿಂಗ್ ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ.
ಜೋದಪುರದಲ್ಲಿ ನಡೆದ ವಾಯುದಳದ ಅಖಿಲ ಭಾರತ ವಾಯು ಸೈನಿಕ್ ಶಿಬಿರದಲ್ಲೂ ಪಾಲ್ಗೊಂಡು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ಸಿಸಿಯ ಡೈರೆಕ್ಟರ್ ಜನರಲ್ ಲೆ.ಜ.ಅನಿರುದ್ಧ ಚಕ್ರವರ್ತಿ, ಕರ್ನಾಟಕ, ಗೋವಾ ಎನ್ಸಿಸಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಸಿ.ರಾಜೀವ್ ಅವರ ಶ್ಲಾಘನೆಗೂ ಪಾತ್ರರಾಗಿದ್ದಾರೆ.
ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು
ಅಂದುಕೊಂಡಷ್ಟು ಸಲೀಸಲ್ಲ ಈ ತರಬೇತಿ
ಮೌಂಟ್ ರೂಪೇವ್ ಜ್ವಾಲಾಮುಖಿ ಪರ್ವತ. ಯಾವಾಗ ಬೇಕಾದರೂ ಇಲ್ಲಿ ಜ್ವಾಲಾಮುಖಿ ಉಕ್ಕುತ್ತದೆ. ಇಂತಹ ಪರ್ವತಗಳಲ್ಲಿ ಸ್ಕೀಯಿಂಗ್ ತರಬೇತಿ ಪಡೆಯುವುದು ಅಷ್ಟು ಸುಲಭವಲ್ಲ. ಆದರೆ ಭವಾನಿ ಜುಲೈನಿಂದ ಸೆಪ್ಟಂಬರ್ ತನಕ ಮೂರು ತಿಂಗಳ ಕಾಲ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಬಂದಿದ್ದಾರೆ. ಈ ತರಬೇತಿಯನ್ನು ಮುಗಿಸಿದವರು ಜಗತ್ತಿನ ಯಾವ ದೇಶದಲ್ಲಿ ಬೇಕಾದರೂ ತರಬೇತಿ ನೀಡುವ ಅರ್ಹತೆ ಪಡೆಯುತ್ತಾರೆ ಎಂಬ ಮಾತಿದೆ. ಪರ್ವತಾರೋಹಣ ಬಳಿಕ ಸ್ಕೀಯಿಂಗ್ ನಲ್ಲಿ ಸಾಧನೆ ಮಾಡಬೇಕೆಂಬ ಹಂಬಲದಿಂದ ಭಾರತದ ಗುಲ್ಮಾರ್ಗ್ ಮತ್ತು ಕಾಶ್ಮೀರದಲ್ಲಿ ತರಬೇತಿ ಪಡೆದಿದ್ದು, ಹೆಚ್ಚಿನ ತರಬೇತಿಯನ್ನು ನ್ಯೂಜಿಲ್ಯಾಂಡ್ನ ಮೌಂಟ್ ರೂಪೇವ್ ನಲ್ಲಿ ಪಡೆದರು.
ಕಠಿಣ ತರಬೇತಿ ಮುಗಿಸಿದ ಯುವತಿ
ಈಗಾಗಲೇ ಹಿಮಾಲಯ ಪರ್ವತ ಸೇರಿದಂತೆ ಹಲವು ಕಠಿಣ ಪರ್ವತಗಳಲ್ಲಿ ಪರ್ವತಾರೋಹಣ ನಡೆಸಿರುವ ಭವಾನಿ, ಅತ್ಯಂತ ಕಠಿಣವಾಗಿರುವ ಪ್ರಥಮ ದರ್ಜೆಯ ಸ್ಕೀಯಿಂಗ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ, ಈ ತರಬೇತಿ ಪೂರೈಸಿದ ಏಕೈಕ ಯುವತಿ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ ಉತ್ತರಾಖಾಂಡ್ ನ ರುಡುಗೈರ್, ಮನಾಲಿಯ ಫ್ರೆಂಡ್ಶಿಪ್, ಸಿಕ್ಕಿಂನ ರೆನಾಕ್, ಲೇಹ್ ನ ಸ್ಟಾಕ್ ಕಂಗ್ರಿಯಲ್ಲಿ ಮಂಜುಗಡ್ಡೆ ಹೊದಿಕೆಯ ಪರ್ವತಗಳನ್ನೇರಿ ಯಶಸ್ಸು ಸಾಧಿಸಿದ್ದಾರೆ.
ಎಲ್ ಬ್ರಸ್ ನಲ್ಲಿ ಭಾರತ ಪತಾಕೆ ಹಾರಿಸಿದ ಭವಾನಿ
ಕಳೆದ ವರ್ಷ ಯೂರೋಪ್ ದೇಶಗಳ ಪೈಕಿ ಅತಿ ಎತ್ತರದ ರಷ್ಯಾದ ಹಿಮಚ್ಚಾದಿತ ಪರ್ವತ ಎಲ್ಬ್ರಸ್ ನ್ನು ನಿರಂತರವಾಗಿ ಸುಮಾರು ಎಂಟು ಗಂಟೆಗಳ ಕಾಲ ಏರಿ ತುತ್ತ ತುದಿಯಲ್ಲಿ ಭಾರತದ ಬಾವುಟವನ್ನು ಹಾರಿಸಿ ಬಂದಿದ್ದಾರೆ. ನಾಲ್ಕು ದೇಶಗಳ ನಾಲ್ವರು ಪರ್ವತಾರೋಹಿಗಳ ಪೈಕಿ ಪರ್ವತದ ತುತ್ತ ತುದಿ ತಲುಪಿದ ಮೊದಲನೆಯವರು ಇವರಾಗಿದ್ದರು.
ಮುಂದಿನ ದಿನಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಸ್ಕೀಯಿಂಗ್ ಗೆ ಸಂಬಂಧಪಟ್ಟಂತೆ ಇನ್ನಷ್ಟು ತರಬೇತಿ ಪಡೆಯಲು ಅವಕಾಶ ಒದಗಿ ಬಂದಿದೆ. ಆದರೆ ಇದಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಇದುವರೆಗೂ ರೊನಾಲ್ಡ್ ಕೊಲ್ಯಾಕೋ, ನಟ ಗೋಲ್ಡನ್ ಸ್ಟಾರ್ ಗಣೇಶ್, ವಿರಾಜಪೇಟೆ ಕೊಡವ ಸಮಾಜ ನೆರವು ನೀಡಿದ್ದಾರೆ.