ಕೊಡಗಿನಲ್ಲಿ ರೆಡ್ ಅಲರ್ಟ್; ಭಾಗಮಂಡಲದಲ್ಲಿ ಗಾಳಿ, ಮಳೆ ಅಬ್ಬರ
ಮಡಿಕೇರಿ, ಸೆಪ್ಟೆಂಬರ್ 21: ಭಾರೀ ಮಳೆ ಸೂಚನೆಯಿದ್ದು, ಕೊಡಗು ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಬಾರಿ ಕೊಡಗು ಮಾತ್ರವಲ್ಲದೆ ರಾಜ್ಯದಾದ್ಯಂತ ಮಳೆ ಸುರಿಯುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಮಳೆಯ ರಭಸಕ್ಕೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅದರ ಪರಿಣಾಮ ಕೊಡಗಿನ ಮೇಲೆಯೂ ಆಗುತ್ತಿದೆ.
ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯೊಂದಿಗೆ, ಕೆಲವೊಮ್ಮೆ ರಭಸವಾಗಿಯೂ ಮಳೆಯಾಗುತ್ತಿದೆ. ಅಲ್ಲಲ್ಲಿ ಮತ್ತೆ ಹಾನಿಗಳು ಸಂಭವಿಸಿದ್ದು, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಅಬ್ಬರದಿಂದ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ಮತ್ತೆ ಪ್ರವಾಹ ಕಾಣಿಸಿಕೊಂಡಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಹುಶಃ ಸೆಪ್ಟೆಂಬರ್ ತಿಂಗಳಲ್ಲಿ ಇಂತಹ ಅಬ್ಬರದ ಮಳೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ.
ಭಾಗಮಂಡಲದಲ್ಲಿ ಹೆಚ್ಚಾದ ಮಳೆ ಅಬ್ಬರ
ಮುಂಗಾರು ಆರಂಭದಿಂದ ಇಲ್ಲಿವರೆಗೆ ಮೂರು ಬಾರಿ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭಾರೀ ಮಳೆ ಸುರಿದು ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರೂ ನಂತರ ಕೆಲವು ದಿನಗಳ ಕಾಲ ಮಳೆ ಸುರಿಯದೆ ಬಿಡುವು ನೀಡಿತ್ತು. ಇದೀಗ ಮತ್ತೆ ಮಳೆ ಸುರಿಯುತ್ತಿರುವುದು ಹಲವು ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ.
ಕೊಡಗು ಮಳೆ ರೆಡ್ ಅಲರ್ಟ್, ತುರ್ತು ಸೇವೆಗೆ ಹೆಲ್ಪ್ ಲೈನ್
ಇಂದು (ಸೋಮವಾರ) ಬೆಳಗಿನ ಜಾವವೇ ಜಿಲ್ಲೆಯ ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಸಂಪಾಜೆ, ವಿರಾಜಪೇಟೆ, ಶಾಂತಳ್ಳಿ, ಸೋಮವಾರಪೇಟೆ ಮತ್ತಿತರ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಬರೀ ಮಳೆಯಲ್ಲದೆ ಚಳಿ, ಗಾಳಿಯೂ ಇರುವುದು ಮುಂಗಾರು ಮಳೆಯ ಆರಂಭದ ವಾತಾವರಣವನ್ನು ಮತ್ತೆ ನೆನಪು ಮಾಡಿಕೊಡುತ್ತಿದೆ.
ಜಿಲ್ಲೆಯಲ್ಲಿ ಸರಾಸರಿ 64.11 ಮಿ.ಮೀ. ಮಳೆ
ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಮತ್ತೆ ವಿದ್ಯುತ್, ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಸರಾಸರಿ 64.19 ಮಿ.ಮೀ. ಮಳೆ ಸುರಿದಿದೆ. ತಾಲೂಕುವಾರು ನೋಡುವುದಾದರೆ, ಒಂದು ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 92.90 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ 47.45 ಮಿ.ಮೀ. ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 52.23 ಮಿ.ಮೀ. ಮಳೆ ಸುರಿದಿದೆ. ಭಾಗಮಂಡಲದಲ್ಲಿ ಅತ್ಯಧಿಕ ಮಳೆ, ಅಂದರೆ 135 ಮಿ.ಮೀ. ಮಳೆ ಸುರಿದಿದೆ.
ಇಷ್ಟೊಂದು ಪ್ರಮಾಣದ ಮಳೆ ಮುಂಗಾರು ಆರಂಭದಲ್ಲಿಯೂ ಸುರಿದಿರಲಿಲ್ಲ. ಇದೇ ರೀತಿ ಮಳೆ ಮುಂದುವರಿದರೆ ಇನ್ನಷ್ಟು ಅನಾಹುತ ಸಂಭವಿಸುವ ಭಯ ಇಲ್ಲದಿಲ್ಲ.
ಕೃಷಿಕರಿಗೆ ಮತ್ತೆ ಕಾಡಿದ ಆತಂಕ
ಕಾವೇರಿ ನದಿ ಸೇರಿದಂತೆ ನದಿ, ಹೊಳೆಯ ತಟದಲ್ಲಿರುವ ಗದ್ದೆ ಬಯಲುಗಳಲ್ಲಿ ಭತ್ತದ ನಾಟಿಯಾಗಿದ್ದು, ಪೈರು ಉತ್ತಮ ಬೆಳವಣಿಗೆ ಕಾಣುತ್ತಿದೆ. ಆದರೆ ಮತ್ತೆ ಕೆಲವು ಗದ್ದೆಗಳಿಗೆ ನದಿ ನೀರು ನುಗ್ಗಿದ್ದು, ಗದ್ದೆಗಳು ಜಲಾವೃತಗೊಂಡಿವೆ. ಇನ್ನು ಕೆಲವೆಡೆ ಕಾಫಿ ತೋಟಗಳಿಗೂ ನೀರು ನುಗ್ಗಿದೆ. ಶುಂಠಿ ಕೃಷಿಯ ಮೇಲೆಯೂ ಮಳೆ ಪರಿಣಾಮ ಬೀರಿದ್ದು, ಶುಂಠಿ ಕೊಳೆಯುತ್ತಿದೆ. ಇದರಿಂದ ಬಂಡವಾಳ ಹಾಕಿ ಕೃಷಿ ಮಾಡಿದವರು ಆತಂಕ ಪಡುವಂತಾಗಿದೆ.
ಪೊನ್ನಂಪೇಟೆ, ನಾಪೋಕ್ಲು, ಸಂಪಾಜೆಯಲ್ಲಿ ಸುರಿದ ಮಳೆ ಎಷ್ಟು?
Recommended Video
ಹಾರಂಗಿಯಿಂದ 12 ಸಾವಿರ ಕ್ಯುಸೆಕ್ ನೀರು ಬಿಡುಗಡೆ
ಈಗಾಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಎಲ್ಲ ಕಡೆಯೂ ಮಳೆಯಾಗುತ್ತಿದ್ದು ಅತ್ಯಧಿಕ ಮಳೆ ಭಾಗಮಂಡಲದಲ್ಲಿ 135 ಮಿ.ಮೀ. ಸುರಿದಿದೆ. ಅತಿ ಕಡಿಮೆ ಮಳೆ ಕುಶಾಲನಗರದಲ್ಲಿ 20 ಮಿ.ಮೀ. ಸುರಿದಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು ಸದ್ಯ 8666 ಕ್ಯುಸೆಕ್ ನೀರು ಹರಿದು ಬರುತ್ತಿದೆ.
2,859 ಅಡಿಯ ಹಾರಂಗಿ ಜಲಾಶಯದಲ್ಲಿ 2857.56 ಅಡಿಯಷ್ಟು ನೀರಿಟ್ಟುಕೊಂಡು, ಉಳಿದಂತೆ ಸುಮಾರು 12 ಸಾವಿರ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಿಂದ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೆ.ಆರ್.ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ಪ್ರಮಾಣವೂ ಹೆಚ್ಚಾಗಲಿದೆ.