ದುಬಾರೆ; ಉಪಯೋಗಕ್ಕೆ ಬಾರದ ಉಪ ಪೊಲೀಸ್ ಠಾಣೆ
ಮಡಿಕೇರಿ, ಏಪ್ರಿಲ್ 06; ಕೊಡಗಿನ ಹೆಬ್ಬಾಗಿಲೆಂದೇ ಕರೆಯಲ್ಪಡುವ ಕುಶಾಲನಗರ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಪ್ರವಾಸಿ ತಾಣ ವೀಕ್ಷಣೆಗಿಂತ ಮೋಜು ಮಸ್ತಿಗಾಗಿ ಬರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಪ್ರವಾಸಿ ಸ್ಥಳದಲ್ಲಿ ಅಹಿತಕರ ಘಟನೆ ನಡೆದ ನಿದರ್ಶನ ಬೇಕಾದಷ್ಟಿವೆ.
ಇಲ್ಲಿನ ಪ್ರವಾಸಿ ತಾಣಗಳ ಪೈಕಿ ದುಬಾರೆಗೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಕಾವೇರಿ ನದಿ ದಡದಲ್ಲಿ ಅಡ್ಡಾಡಿ ದೋಣಿಯಲ್ಲಿ ಸವಾರಿ ಮಾಡಿ, ಗಜಮಜ್ಜನವನ್ನು ಹತ್ತಿರದಿಂದ ನೋಡಿ ಆನೆ ಸಫಾರಿ ಮಾಡಿ ಬರುವವರು ಇದ್ದಾರೆ.
ಒಂದು ವರ್ಷದ ಬಳಿಕ ದುಬಾರೆ ಸಾಕಾನೆ ಶಿಬಿರಕ್ಕೆ ಬಂದ ಕುಶ!
ಆದರೆ ಅಲ್ಲಿಗೆ ತೆರಳಿದ ಪ್ರವಾಸಿಗರು ಅದಷ್ಟನ್ನು ಮಾಡಿಕೊಂಡು ಬಂದರೆ ತೊಂದರೆಯಿಲ್ಲ. ಅದನ್ನು ಬಿಟ್ಟು ಅಕ್ರಮವಾಗಿ ಮೋಜು ಮಸ್ತಿ ಮಾಡುತ್ತಾರೆ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಹತ್ಯೆಯಂತಹ ಘಟನೆಗಳು ನಡೆದಿವೆ.
ಕೊಡಗು ಪ್ರವಾಸಿ ತಾಣಗಳಿಗೆ ನಿರ್ಬಂಧ; ವಿವರ ನೀಡಿದ ಜಿಲ್ಲಾಡಳಿತ
ದುಬಾರೆಯಲ್ಲಿ ಉಪ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ. ಆದರೆ ಈ ಉಪಠಾಣೆಯನ್ನು ತೆರೆದಿದ್ದರೂ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡದೆ, ಅಗತ್ಯ ಸೌಲಭ್ಯಗಳನ್ನು ನೀಡದೆ ಕಾಟಾಚಾರಕ್ಕೆ ಎಂಬಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕೊರೊನಾ ಏರಿಕೆ; ಕೊಡಗು ಪ್ರವಾಸಿ ತಾಣಗಳಿಗೆ ಮತ್ತೆ ನಿರ್ಬಂಧ
ಉಪ ಪೊಲೀಸ್ ಠಾಣೆ ಆರಂಭ ಏಕೆ?
ಇಷ್ಟಕ್ಕೂ ಇಲ್ಲಿ ಉಪ ಪೊಲೀಸ್ ಠಾಣೆಯನ್ನು ತೆರೆಯಲು ಕಾರಣವಿದೆ. ಅದೇನೆಂದರೆ 2018 ಫೆಬ್ರವರಿ 15ರಂದು ಇಲ್ಲಿಗೆ ಹೈದರಾಬಾದ್ನಿಂದ ಮೂರು ಬಸ್ಗಳಲ್ಲಿ ಸಾಫ್ಟ್ವೇರ್ ಕಂಪನಿಯ 120 ಮಂದಿ ಬಂದಿದ್ದರು. ಹಾಗೆ ಬಂದವರು ಕಾವೇರಿ ನದಿಯಲ್ಲಿ ರ್ಯಾಫ್ಟ್ ಮಾಡುವ ಸಲುವಾಗಿ ಹೋಗಿದ್ದರು. ಈ ವೇಳೆ ರ್ಯಾಫ್ಟ್ ನದಿಯಲ್ಲಿದ್ದ ಬಂಡೆಗೆ ಸಿಕ್ಕಿಕೊಂಡಿತ್ತು. ಇದು ರ್ಯಾಫ್ಟಿಂಗ್ ಮಾಡುತ್ತಿದ್ದ ಹುಡುಗರ ಕೋಪಕ್ಕೆ ಕಾರಣವಾಗಿತ್ತು. ಬಂಡೆ ಇದೆ ಅಂಥ ಗೊತ್ತಿಲ್ಲವೆ? ಏಕೆ ಈ ಕಡೆ ತಂದಿದ್ದೀರಾ ಎಂದು ದಬಾಯಿಸಿದ್ದರು.
ಬಸ್ಸಿನಿಂದ ಎಳೆದು ಹೊಡೆದಿದ್ದರು
ಈ ವೇಳೆ ಮಾತಿಗೆ ಮಾತು ಬೆಳೆದಿತ್ತು. ಕೊನೆಗೆ ಅದು ಅತಿರೇಕಕ್ಕೆ ಹೋಗಿ ಕೈಕೈ ಮಿಲಾಯಿಸಿದ್ದಲ್ಲದೆ, ರ್ಯಾಫ್ಟ್ ನಡೆಸುವಾಗ ಬಳಸುವ ಹುಟ್ಟನ್ನೇ ಹಿಡಿದು ಪ್ರವಾಸಿ ಹುಡುಗರ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಕೆಲವರು ಓಡಿ ಹೋಗಿ ತಾವು ಬಂದಿದ್ದ ಬಸ್ಸಿಗೆ ಹತ್ತಿದರೂ ಬಿಡದೆ ಬಸ್ಸಿನಿಂದ ಹೊರಗೆ ಎಳೆದು ಹೊಡೆದಿದ್ದರು. ಪರಿಣಾಮ ಪ್ರವಾಸಿಗನೊಬ್ಬ ಸಾವನ್ನಪ್ಪಿದ್ದನು. ಇದರಿಂದ ಎಚ್ಚೆತ್ತ ಅಂದಿನ ಎಸ್ಪಿ ರಾಜೇಂದ್ರಪ್ರಸಾದ್ ಅವರು ದುಬಾರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಇಲ್ಲಿ ನಡೆಯುವ ಪುಂಡಾಟಕ್ಕೆ ಬ್ರೇಕ್ ಹಾಕುವ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನೂತನ ಉಪ ಪೊಲೀಸ್ ಠಾಣೆ ತೆರೆಯಲು ಕ್ರಮ ಕೈಗೊಂಡಿದ್ದರು. ಅದರಂತೆ ಉಪ ಪೊಲೀಸ್ ಠಾಣೆ ತೆರೆಯಲಾಗಿದೆ.
ಪುಂಡಾಟ ತಡೆಗೆ ಉಪ ಪೊಲೀಸ್ ಠಾಣೆ
ಸದ್ಯ ಇಲ್ಲಿಗೆ ಭೇಟಿ ನೀಡಿದರೆ ಪೊಲೀಸ್ ಚೌಕಿ ಎಂಬ ನಾಮಫಲಕವುಳ್ಳ ಕಟ್ಟಡ ನಿರ್ಮಾಣವಾಗಿರುವುದು ಕಂಡು ಬರುತ್ತದೆ. ಆದರೆ ಕಟ್ಟಡಕ್ಕೆ ವಿದ್ಯುತ್, ಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಹೀಗಾಗಿ ಠಾಣೆಗೆ ಬೀಗ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Recommended Video
ಒಬ್ಬ ಪೇದೆಯ ನೇಮಕ
ದುಬಾರೆಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇವರ ನಡುವೆ ಮೋಜು ಮಸ್ತಿಗೆಂದು ಬರುವ ವರ್ಗವೂ ಇದೆ. ಇಂತಹವರನ್ನು ನಿಯಂತ್ರಿಸುವುದಕ್ಕೆ ಒಬ್ಬ ಪೇದೆಯನ್ನು ನೇಮಕ ಮಾಡಿದರೆ ಸಾಕಾಗುತ್ತಾ? ಎಂಬ ಪ್ರಶ್ನೆಗಳನ್ನು ಸ್ಥಳೀಯರು ಮಾಡುತ್ತಿದ್ದಾರೆ. ಇನ್ನಾದರೂ ಉಪ ಪೊಲೀಸ್ ಠಾಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ದುಬಾರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವಾಗಲಿ ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.