ಬೆಂಗಳೂರು ಸ್ಫೋಟದ ಶಂಕಿತ ಆರೋಪಿ ವೀರಾಜಪೇಟೆ ಪೊಲೀಸ್ ಠಾಣೆಯಲ್ಲೇಕಿದ್ದ?
ಮಡಿಕೇರಿ, ಅಕ್ಟೋಬರ್.22: ಬೆಂಗಳೂರಿನ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿಯನ್ನು ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಏಕೆ ಇಡಲಾಗಿತ್ತು ಎಂಬ ಪ್ರಶ್ನೆ ಹಲವರನ್ನು ಕುತೂಹಲಕ್ಕೀಡು ಮಾಡಿತ್ತು. ಇದಕ್ಕೆ ಇದೀಗ ಸ್ಪಷ್ಟನೆ ಸಿಕ್ಕಿದಂತಾಗಿದೆ.
ಕೇರಳ ಕಣ್ಣನೂರು ತಾಲೂಕಿನ ಪಿಣರಾಯಿ ಗ್ರಾಮದ ನಿವಾಸಿ ಸಲೀಂ(41) ಎಂಬಾತನೇ ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿದ್ದವನು. ಈತ ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿಯಾಗಿದ್ದು, ಅ.20 ರಂದು ವಿರಾಜಪೇಟೆಯ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು ಎಂಬ ಸುದ್ದಿ ಹರಡಿತ್ತು.
ಗಂಗಾಧರ ಚಡಚಣ ಹತ್ಯೆ : ಸಿಐಡಿ ಕೈಗೆ ಸಿಕ್ಕಿಬಿದ್ದ ಎಂ.ಬಿ.ಅಸೋಡೆ
ಈ ಕುರಿತಂತೆ ಮಾಹಿತಿ ಸಿಕ್ಕಿದ್ದು, ಅದೇನೆಂದರೆ, ಸಲೀಂನನ್ನು 15 ದಿನಗಳ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಈತನ ಮೇಲೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪವಿತ್ತು. ಹೀಗಾಗಿ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ಯಬೇಕಾಗಿತ್ತು.
ಸಿಸಿಬಿ ಪೊಲೀಸರು ಈತನನ್ನು ಮಡಿವಾಳ ಪೊಲೀಸರ ವಶಕ್ಕೆ ನೀಡಿ, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರಿಂದ ನ್ಯಾಯಾಂಗ ವಶದಲ್ಲಿದ್ದ ಆರೋಪಿ ಸಲೀಂನನ್ನು ಮತ್ತೆ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ನಡೆಸಲು ಅವಕಾಶ ನೀಡಲಾಗಿತ್ತು.
ಹೀಗಾಗಿ ಸ್ಥಳ ಮಹಜರು ನಡೆಸಲು ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದರು. ಆದರೆ ವಿರಾಜಪೇಟೆಗೆ ಆಗಮಿಸುವಾಗ ಕತ್ತಲಾದ ಹಿನ್ನಲೆಯಲ್ಲಿ ಆರೋಪಿ ಸಲೀಂನನ್ನು ಭದ್ರತಾ ದೃಷ್ಟಿಯಿಂದ ವಿರಾಜಪೇಟೆ ಠಾಣೆಯ ಲಾಕಪ್ನಲ್ಲಿ ಬಂಧಿಸಿಡಲಾಗಿತ್ತು.
ಭಾರತದ ವಾಂಟೆಡ್ ಕ್ರಿಮಿನಲ್ಸ್ ಪಟ್ಟಿಯಲ್ಲಿದೆ ಕರಾವಳಿಯ ಇಬ್ಬರ ಹೆಸರು
ಸಿಸಿಬಿ ಡಿವೈಎಸ್ ಪಿ ಸುಬ್ರಮಣಿ, ಮನೋಜ್ ಕುಮಾರ್ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನಾರಾಯಣ ಗೌಡ ಮತ್ತು 15ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಪೊಲೀಸರು ಭದ್ರತಾ ವ್ಯವಸ್ಥೆ ಒದಗಿಸಿದ್ದರು.
ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಸಾರ್ವಜನಿಕರಿಗೂ ಠಾಣೆ ಪ್ರವೇಶ ನಿಷೇಧಿಸಲಾಗಿತ್ತು. ಇದು ಸ್ಥಳೀಯರ ಕುತೂಹಲವನ್ನು ಕೆರಳಿಸಿತ್ತಲ್ಲದೆ, ತಮ್ಮದೇ ಆದ ಸುದ್ದಿಯನ್ನು ಹರಡತೊಡಗಿದ್ದರು. ಇದೀಗ ನಿಖರ ಮಾಹಿತಿ ತಿಳಿದು ಬಂದಿದ್ದು ಕುತೂಹಲಕ್ಕೆ ತೆರೆ ಎಳೆಯಲಾಗಿದೆ.