ಆಗಸ್ಟ್ ತಿಂಗಳ ಮಳೆ ಎಂದರೆ ಕೊಡಗಿನ ಜನರಿಗೆ ಭಯ!
ಮಡಿಕೇರಿ, ಜೂನ್ 22; ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮಹಾಮಳೆ ಸೃಷ್ಟಿಸಿದ ಅನಾಹುತ ಮತ್ತು ಅದು ಪಡೆದ ಜೀವಬಲಿಯನ್ನು ಯಾರೂ ಮರೆಯಲಾರರು. ಹೀಗಾಗಿಯೇ ಇಲ್ಲಿನ ಜನಕ್ಕೆ ಆಗಸ್ಟ್ ತಿಂಗಳ ಮಹಾಮಳೆ ಎಂದರೆ ಆತಂಕವಂತು ಇದ್ದೇ ಇದೆ.
ಕಳೆದ ಎರಡು ದಶಕಗಳ ಕಾಲದ ಮಳೆಗಾಲವನ್ನು ಮೆಲುಕು ಹಾಕಿದರೆ ಮಳೆಗಾಲದ ಆರಂಭ ಮತ್ತು ಅಂತ್ಯಗಳು ಜಿಟಿ ಜಿಟಿಯಾಗಿ ಆರಂಭವಾಗಿ ಜಿಟಿಜಿಟಿಯಾಗಿಯೇ ಮುಗಿದು ಹೋಗುತ್ತಿತ್ತು. ನಡುವಿನಲ್ಲಿ ನಿಧಾನವಾಗಿ ವಾರಾನುಗಟ್ಟಲೆ ಮಳೆ ಸುರಿದ ನಿದರ್ಶನಗಳಿವೆ.
ಲಾಕ್ಡೌನ್ ವಿಸ್ತರಣೆ; ಕೊಡಗು ಜಿಲ್ಲೆಗೆ ಮಾರ್ಗಸೂಚಿ
ಅದು ಜನಜೀವನದ ಮೇಲೆ ಒಂದಷ್ಟು ಪರಿಣಾಮ ಬೀರುತ್ತಿತ್ತಾದರೂ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರಲಿಲ್ಲ. ಯಾವುದೇ ನೀರಾವರಿ ಸೌಲಭ್ಯವಿಲ್ಲದ ಕಾರಣದಿಂದ ಮತ್ತು ಭತ್ತದ ಕೃಷಿಯೇ ಪ್ರಮುಖ ಕೃಷಿಯಾಗಿದ್ದ ಅವತ್ತಿನ ಕಾಲದಲ್ಲಿ ಇಲ್ಲಿನ ಜನ ಭತ್ತದ ಬೆಳೆಗೆ ತಕ್ಕಂತೆ ತಮ್ಮ ಜೀವನ ಕ್ರಮಗಳನ್ನು ಅಳವಡಿಸಿಕೊಂಡಿದ್ದರು.
ಕೊಡಗು; ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದೇಕೆ?
ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಭತ್ತದ ಬಯಲುಗಳಲ್ಲಿ ಉಳುಮೆ, ಗೊಬ್ಬರ ಹಾಕುವುದು, ನಾಟಿ ನೆಡುವುದು ಹೀಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಇನ್ನು ಆ ಕಾಲಕ್ಕೆ ಏಲಕ್ಕಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದರಿಂದ ಗಿಡನೆಡುವುದು, ಕಾಡುಕಡಿಯುವುದು ಹೀಗೆ ಕೆಲಸ ಇರುತ್ತಿತ್ತಾದರೂ ಹೆಚ್ಚಿನ ಗಮನ ಗದ್ದೆಯತ್ತಲೇ ಇರುತ್ತಿತ್ತು.
ಕೊಡಗು; ಗಜಗಿರಿ ಬೆಟ್ಟದಲ್ಲಿ ಇಂಗು ಗುಂಡಿ ಮುಚ್ಚಿದ ಅರಣ್ಯ ಇಲಾಖೆ
ವಾಣಿಜ್ಯ ಚಟುವಟಿಕೆ ಹೆಚ್ಚಾದವು
ಜನರು ಕ್ರಮೇಣವಾಗಿ ಏಲಕ್ಕಿ, ಕಾಫಿ, ಸೇರಿದಂತೆ ವಾಣಿಜ್ಯ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಓದಿ ವಿದ್ಯಾವಂತರಾದವರು ಕೆಲಸದ ಮೇರೆಗೆ ಊರು ಬಿಡಲಾರಂಭಿಸಿದರು. ಕ್ರಮೇಣ ವಾಣಿಜ್ಯ ಚಟುವಟಿಕೆಗಳು ಹೆಚ್ಚಾದವು. ಲಾಭ ತಂದುಕೊಡುವ ಬೆಳೆಗಳತ್ತ ಹೆಚ್ಚಿನ ಒಲವು ಬರಲಾರಂಭಿಸಿತು. ದನಕರುಗಳನ್ನು ಸಾಕುವುದು ಕಷ್ಟವಾಯಿತು. ಹೀಗಾಗಿ ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರ ಕಡಿಮೆಯಾಗಿ ಭತ್ತದ ಇಳುವರಿ ಕುಗ್ಗಿತು. ಕೂಲಿ ಕಾರ್ಮಿಕರ ಮೂಲಕ ಭತ್ತದ ಕೃಷಿ ಕೆಲಸ ಮಾಡಿಸುತ್ತಿದ್ದ ಮಾಲೀಕರಿಗೆ ಲಾಭವಿರಲಿ ಅಸಲು ಕೂಡ ಬಾರದೆ ನಷ್ಟ ಅನುಭವಿಸಲಾರಂಭಿಸಿದರು. ಹೀಗಾಗಿ ಕೆಲವರು ಗದ್ದೆಯನ್ನು ತೋಟವನ್ನಾಗಿ, ನಿವೇಶನಗಳನ್ನಾಗಿ ಪರಿವರ್ತಿಸಿದರೆ, ಮತ್ತೆ ಕೆಲವರು ಗದ್ದೆಯನ್ನು ಕೃಷಿ ಮಾಡದೆ ಪಾಳುಬಿಟ್ಟರು.
ಜಿಲ್ಲೆಯಲ್ಲಿ ಪಾಳುಬಿದ್ದ ಗದ್ದೆ ಬಯಲುಗಳಿವೆ
ಇವತ್ತಿಗೂ ಕೊಡಗಿಗೊಂದು ಸುತ್ತು ಹೊಡೆದರೆ ಪಾಳು ಬಿದ್ದ ಗದ್ದೆಗಳು ಕಾಣಿಸುತ್ತಿವೆ. ಬಹಳಷ್ಟು ಗದ್ದೆಗಳನ್ನು ಹೊಂದಿರುವ ಮಾಲೀಕರಿಗೆ ಅಲ್ಲಿ ಭತ್ತ ಹೊರತು ಬೇರೆ ಯಾವ ಕೃಷಿಯೂ ಮಾಡಲಾಗದ ಸ್ಥಿತಿಯಿದೆ. ಆದರೆ ಗದ್ದೆಯನ್ನು ನಾಟಿ ಮಾಡಿಸಿ ಫಸಲು ತೆಗೆಯುವುದು ಅವರಿಗೂ ಸಾಧ್ಯವಾಗದ ಕೆಲಸವಾಗಿದೆ. ಕಾರ್ಮಿಕರ ಸಮಸ್ಯೆ ಜತೆಗೆ ಖರ್ಚು ವೆಚ್ಚಗಳೇ ಜಾಸ್ತಿಯಾಗುತ್ತಿರುವುದರಿಂದ ಜತೆಗೆ ಮಳೆ, ಪ್ರವಾಹದಿಂದಾಗಿ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಕೆಲವರು ಇಲ್ಲಿ ಜಮೀನು ಹೊಂದಿದ್ದರೂ ಅವರು ಬೇರೆ ಊರುಗಳಲ್ಲಿ ನೆಲೆಸಿರುವ ಕಾರಣ ಜಿಲ್ಲೆಯತ್ತ ಬರುವುದೇ ಕಷ್ಟವಾಗಿದೆ. ಹೀಗೆ ಹತ್ತಾರು ಸಮಸ್ಯೆಗಳು ಕಾಡುತ್ತಿರುವ ಕಾರಣ ವಾಣಿಜ್ಯ ವ್ಯವಹಾರದತ್ತ ಜನ ಮುಖ ಮಾಡಿ ಭತ್ತದ ಕೃಷಿಯಿಂದ ವಿಮುಖರಾಗಿದ್ದಾರೆ.
ಭತ್ತದ ಕೃಷಿಯಿಂದ ವಿಮುಖರಾದ ಬೆಳೆಗಾರರು
ಭತ್ತದ ಕೃಷಿಯಿಂದ ದೂರವಾಗಿ ಆರ್ಥಿಕವಾಗಿ ಲಾಭತರುವ ಬೆಳೆಗಳತ್ತ, ಉದ್ಯಮದತ್ತ ತೊಡಗಿಸಿಕೊಂಡ ಕಾರಣದಿಂದಾಗಿ ಒಂದಷ್ಟು ಮಂದಿಗೆ ಉದ್ಯೋಗ ಸೇರಿದಂತೆ ಇನ್ನಿತರ ಉಪಯೋಗವಾಗಿದೆಯಾದರೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಿದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಗದ್ದೆಗಳಲ್ಲಿ ಕನಿಷ್ಟ ಆರು ತಿಂಗಳ ಕಾಲ ನೀರು ನಿಲ್ಲುತ್ತಿತ್ತು. ಇದರಿಂದ ಭೂಮಿಯ ಅಂತರ್ಜಲ ಹೆಚ್ಚುತ್ತಿತ್ತು. ಇನ್ನು ಒತ್ತೊತ್ತಾದ ಕಾಡು ಮರಗಳ ನೆರಳನಲ್ಲಿ ಏಲಕ್ಕಿ ಬೆಳೆಯುತ್ತಿದ್ದರಿಂದ ಕಾಡಿನ ಸಂರಕ್ಷಣೆಯೊಂದಿಗೆ ಆದಾಯವು ಬರುತ್ತಿತ್ತು. ಜತೆಗೆ ದಟ್ಟ ಮರಕಾಡಿನಿಂದ ಏಲಕ್ಕಿ ತೋಟಗಳು ಆವೃತವಾಗಿದ್ದರಿಂದ ಜೇನುಗಳ ಆವಾಸ ತಾಣವಾಗಿತ್ತು.
ಅಲ್ಲೋಲ ಕಲ್ಲೋಲ ಮಾಡಿದ ಮಳೆ
ಏಲಕ್ಕಿಗೆ ದಟ್ಟವಾದ ನೆರಳು ಬೇಕಿತ್ತು. ಆದರೆ ಕಾಫಿ ಬೆಳೆ ಅದಕ್ಕೆ ವಿರುದ್ಧವಾಗಿತ್ತು. ಹೆಚ್ಚು ನೆರಳಿದ್ದರೆ ಕಾಫಿ ಬೆಳೆಯುತ್ತಿರಲಿಲ್ಲ. ಹುಲುಸಾಗಿ ಗಿಡ ಬೆಳೆದರೂ ಫಸಲು ಬಿಡುತ್ತಿರಲಿಲ್ಲ. ಹೀಗಾಗಿ ಕಾಫಿಗೆ ಬೆಲೆ ಹೆಚ್ಚಾದ ಸಂದರ್ಭ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಮಾರ್ಪಡಿಸಿದ ಕಾರಣ ಅರಣ್ಯ ನಾಶ ವಾಯಿತು. ಇದೆಲ್ಲದರ ಕಾರಣದಿಂದಾಗಿ ಹಿಂದಿನ ಕಾಲದ ಮಳೆಯ ಹಾದಿಯೇ ಬದಲಾಗಿದೆ. ಕಾಲಕ್ಕೆ ಸರಿಯಾಗಿ ಸುರಿಯದೆ, ಒಂದು ವೇಳೆ ಸುರಿದರೆ ವಾರಗಟ್ಟಲೆ ಸುರಿಯಬೇಕಾದ ಮಳೆ ಒಂದೇ ದಿನ ಸುರಿದು ಜನರ ಬದುಕನ್ನೇ ಅಲ್ಲೋಲಕಲ್ಲೋಲ ಮಾಡುತ್ತಿದೆ.
ಮಹಾಮಳೆಯ ಅನಾಹುತ ಎದುರಿಸಲು ಸಿದ್ಧತೆ
ಕಳೆದ ಮೂರು ವರ್ಷಗಳಲ್ಲಿ ಅದರಲ್ಲೂ ಆಗಸ್ಟ್ ತಿಂಗಳು ಕೊಡಗಿನ ಮಟ್ಟಿಗೆ ಕಂಟಕವಾಗಿ ಪರಿಣಮಿಸಿದೆ. ಮೂರು ವರ್ಷವೂ ಯಾರೂ ಯೋಚನೆ ಮಾಡದ ಪ್ರದೇಶಗಳಲ್ಲಿ ಭೂಕುಸಿತವಾಗಿ ಜನರ ಪ್ರಾಣವನ್ನು ಬಲಿ ಪಡೆದಿದೆ. ಹೀಗಾಗಿಯೇ ಆಗಸ್ಟ್ ತಿಂಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸುವ ಸಲುವಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರಾಕೃತಿಕ ವಿಕೋಪ ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶವನ್ನು ಗುರುತಿಸಿ ಅಲ್ಲಿಯ ಜನರನ್ನು ಜುಲೈ 15 ರೊಳಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Recommended Video
ಮಳೆ ಸುರಿಯಲಿ ದುರಂತ ಸಂಭವಿಸದಿರಲಿ
ಈಗಾಗಲೇ ಮುಂಗಾರು ಆರಂಭವಾಗಿದ್ದು, ಕಳೆದ ವಾರ ಹೆಚ್ಚಿನ ಮಳೆಯಾಗಿದೆ. ಹಾಗೆಯೇ ಕಳೆದ ಮೂರು ವರ್ಷದಲ್ಲಿ ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ಧಾರಾಕಾರ ಮಳೆಯಾಗಿ ಅವಘಡಗಳು ಸಂಭವಿಸಿರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವುದರ ಜೊತೆಗೆ, ಕಾಳಜಿ ಕೇಂದ್ರದಲ್ಲಿ ಶೌಚಾಲಯ, ಸ್ನಾನದ ಮನೆ, ಬಿಸಿನೀರು ಮತ್ತಿತರ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಯೋಜನೆ ತಯಾರಿಸಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಅಧಿಕಾರಿಗಳು ಸೇರಿದಂತೆ ಸ್ಥಳೀಯ ಸ್ವಯಂ ಸೇವಕರನ್ನು ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಸಹಕಾರ ಪಡೆಯುವಂತೆ ಹೇಳಿದ್ದಾರೆ.