ಸಚಿವ ನಾಗೇಶ್ ಮನೆ ಮೇಲೆ ದಾಳಿ; ತನಿಖೆಗೆ ಕೆ. ಜಿ. ಬೋಪಯ್ಯ ಆಗ್ರಹ
ಮಡಿಕೇರಿ, ಜೂ 02: "ಗೂಂಡಾ ಸಂಸ್ಕೃತಿಯ ಪ್ರತೀಕ ಕಾಂಗ್ರೆಸ್. ಅದರ ಬಹುತೇಕ ನಾಯಕರು ಗೂಂಡಾರಾಜ್ಯ ಮಾಡುವ ಕನಸು ಹೊತ್ತಿರುವ ಬ್ರ್ಯಾಂಡ್ ಅಂಬಾಸಿಡರ್ಗಳು. ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಮನೆಯ ಮೇಲೆ ದಾಳಿ ಮಾಡಿರುವ ಎನ್ಎಸ್ಯುಐ ಪುಡಿ ರೌಡಿಗಳು ಕಾಂಗ್ರೆಸ್ ಗರಡಿಯಲ್ಲಿ ಪಳಗುತ್ತಿರುವ ಪಕ್ಷದ ಮುಂದಿನ ಭವಿಷ್ಯ ಎಂಬಂತೆ ಭಾಸವಾಗುತ್ತಿದೆ" ಎಂದು ಮಾಜಿ ಸ್ಪೀಕರ್, ವೀರಾಜಪೇಟೆ ಬಿಜೆಪಿ ಶಾಸಕ ಕೆ. ಜಿ. ಬೋಪಯ್ಯ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಈ ತರಹ ಮನೆಗೆ ಬೆಂಕಿ ಹಚ್ಚುವವರು ಲಾಠಿಯ ಸದ್ದಿನಿಂದ ಪಾಠ ಕಲಿಯುವವರಲ್ಲ, ಬದಲು ನಳಿಕೆಯ ಶಬ್ಧದಿಂದ ಮಾತ್ರ ಬದಲಾಗಬಹುದು" ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ರಾಜ್ಯದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆ ಮೇಲಿನ ದಾಳಿ, ಡಿಜೆ ಹಳ್ಳಿ & ಕೆಜೆ ಹಳ್ಳಿ ದಾಳಿಯ ಹೋಲಿಕೆ ಕಂಡುಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ" ಎಂದು ಒತ್ತಾಯಿಸಿದ್ದಾರೆ.
"ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಪಟೂರಿನ ಮನೆಯ ಆವರಣಕ್ಕೆ ನುಗ್ಗಿ ಎನ್ಎಸ್ಯುಐ ಕಾರ್ಯಕರ್ತರು ಪ್ರತಿಭಟನೆ ಮಾಡಿ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕುಕೃತ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಕಿಡಿಗೇಡಿ ಕ್ರಿಮಿಗಳನ್ನು ತಕ್ಷಣವೇ ಮಟ್ಟಹಾಕಬೇಕು: ಬೋಪಯ್ಯ
"ಕಾಂಗ್ರೆಸ್ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದ್ದು, ಅದರ ಬಹುತೇಕ ನಾಯಕರು ಗೂಂಡಾ ರಾಜ್ಯ ಮಾಡುವ ಕನಸು ಹೊತ್ತಿರುವ ಬ್ರ್ಯಾಂಡ್ ಅಂಬಾಸಿಡರ್ಗಳು. ಕಾಂಗ್ರೆಸ್ನ ರಾಜ್ಯಾಧ್ಯಕ್ಷರೇ ಕೊತ್ವಾಲ್ ರಾಮಚಂದ್ರನ ಶಿಷ್ಯ. ಯುವ ಘಟಕದ ರಾಜ್ಯಾಧ್ಯಕ್ಷ ಓರ್ವ ಮರಿ ಪುಡಾರಿಗಳ ನಾಯಕ. ಇವರಿಂದ ಭವಿಷ್ಯದಲ್ಲಿ ರಾಜ್ಯದ ಜನತೆ ಯಾವ ಒಳಿತನ್ನು ಬಯಸಲು ಸಾಧ್ಯವಿದೆ?" ಎಂದು ಬೋಪಯ್ಯ ಪ್ರಶ್ನಿಸಿದ್ದಾರೆ.
"ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಮನೆಯ ಮೇಲೆ ದಾಳಿ ಮಾಡಿರುವ ಎನ್ಎಸ್ಯುಐನ ಪುಡಿ ರೌಡಿಗಳು ಕಾಂಗ್ರೆಸ್ ಗರಡಿಯಲ್ಲಿ ಪಳಗುತ್ತಿರುವ ಪಕ್ಷದ ಮುಂದಿನ ಭವಿಷ್ಯ ಎಂಬಂತೆ ಭಾಸವಾಗುತ್ತಿದ್ದು, ರಾಜ್ಯದ ಶಾಂತಿ ಕದಡುವ ಈ ಕಿಡಿಗೇಡಿ ಕ್ರಿಮಿಗಳನ್ನು ತಕ್ಷಣವೇ ಮಟ್ಟಹಾಕಬೇಕು" ಎಂದು ಒತ್ತಾಯಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ
"ಸಚಿವ ಬಿ. ಸಿ. ನಾಗೇಶ್ ಮನೆಯ ಮೇಲಿನ ದಾಳಿ ನಡೆಸಿ, ಬೆಂಕಿ ಹಚ್ಚಲು ಮುಂದಾದ ಎಸ್ಎಸ್ಯುಐ ಕಾರ್ಯಕರ್ತರ ಕೃತ್ಯವನ್ನು ಖಂಡಿಸುತ್ತೇನೆ" ಎಂದು ಗೃಹಸಚಿವ ಆರಗ ಜ್ಞಾನೆಂದ್ರ ಹೇಳಿದರು.
ಶಿಕ್ಷಣ ಸಚಿವರ ಮನೆಗೆ ಗೃಹ ಸಚಿವರು ಭೇಟಿ ನೀಡಿದರು. ನಂತರ ಮಾತನಾಡಿ, "ಈಗಾಗಲೇ ಸಚಿವರ ಮನೆ ಮೇಲೆ ದಾಳಿ ಮಾಡಲು ಯತ್ನಸಿದವರನ್ನು ಬಂಧಿಸಲಾಗಿದೆ. ಇನ್ನೂ ಈ ಘಟನೆಯನನ್ನು ಗಮನಿಸಿದಾಗ ಬೇರೆ ಬೇರೆ ಜಿಲ್ಲೆಗಳಿಂದ ಎಲ್ಲರೂ ಸೇರಿ ಒಟ್ಟಿಗೆ ಮನೆ ಮೇಲೆ ದಾಳಿ ನಡೆಸಿರುವುದನ್ನು ಗಮನಿಸಿದ್ದರೆ ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ" ಎಂದು ತಿಳಿಸಿದ್ದಾರೆ.
ಘಟನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, "ಘಟನೆಗೆ ಪೊಲೀಸ್ ವೈಫಲ್ಯ ಕಾರಣವಲ್ಲ. ಘಟನೆ ನಡೆದಾಗ ಮನೆಯಲ್ಲಿ ಸಚಿವರ ಮಗ ಹಾಗೂ ಅವರ ಆಪ್ತ ಸಹಾಯಕ ಮಾತ್ರ ಇರುವ ಕಾರಣ ಯಾರಿಗೂ ತೊಂದರೆಯಾಗಿಲ್ಲ. ರಾಜ್ಯದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯ ಕಂಡಿಲ್ಲ. ಪೊಲೀಸರು ಸಹ ಎಚ್ಚರದಿಂದ ಇದ್ದಾರೆ. ಘಟನೆ ಏಕಾಏಕಿ ನಡೆದಿದೆ. ಇನ್ನೂ ಘಟನೆಯ ಹಿಂದೆ ಕಾಂಗ್ರೆಸ್ ಇದ್ದು ಎನ್ಎಸ್ಯುಐ ಕಾಂಗ್ರೆಸ್ನ ಮತ್ತೊಂದು ಭಾಗವಾಗಿದೆ" ಎಂದರು.
ಕೆಲ ಕಿಡಿಗೇಡಿ ಸಂಘಟನೆಗಳ ಹೇಯ ಕೃತ್ಯ
"ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ಬೌದ್ಧಿಕವಾಗಿ ಎದುರಿಸಲಾಗದ ಕಾಂಗ್ರೆಸ್ ಪಕ್ಷದ ಭಟ್ಟಂಗಿಗಳು ಸಚಿವ ಬಿ. ಸಿ. ನಾಗೇಶ್ ನಿವಾಸದ ಮೇಲೆ ದಾಳಿ ನಡೆಸಿರುವುದು ಹೇಡಿತನ ಮತ್ತು ಅವಿವೇಕದ ಪರಮಾವಧಿ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬಿ. ಸಿ. ನಾಗೇಶ್ಗೆ ಯಾರು ಶತ್ರುಗಳಿಲ್ಲ ಎಂದು ಭಾವಿಸಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ತಲೆಬಾಗಿ ಸಾಮಾನ್ಯ ಕಾರ್ಯಕರ್ತರಂತೆ ರಾಜಕೀಯವೇ ಸೇವೆ ಮಾಡುತ್ತಿದ್ದವರನ್ನು, ಸಹಿಸದ ಕೆಲ ಕಿಡಿಗೇಡಿ ಸಂಘಟನೆಗಳು ಈ ಹೇಯ ಕೃತ್ಯ ಮಾಡಿವೆ. ಈ ಘಟನೆಗೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
"ಅಭಿವ್ಯಕ್ತಿ ಸ್ವಾತಂತ್ರ್ಯ, ವೈಚಾರಿಕ ಸ್ವಾತಂತ್ರ್ಯಗಳ ಬಗ್ಗೆ ಬಿಜೆಪಿ ಬಗ್ಗೆ ಅನಗತ್ಯವಾಗಿ ಗೂಬೆ ಕೂರಿಸುತ್ತಿದ್ದ ಸಾಹಿತಿಗಳು ಈಗ ಜಾಣಮೌನಕ್ಕೆ ಜಾರಿರುವುದು ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್ ತಾನು ಅಧಿಕಾರದಲ್ಲಿಲ್ಲದಿದ್ದಾಗ ಹೆಚ್ಚು ಅಪಾಯಕಾರಿ ಎನ್ನುವ ವಾಜಪೇಯಿಯವರ ಮಾತು ನಿಜವೆಂದು ಇದರಿಂದ ಸಾಬೀತಾಗಿದೆ" ಎಂದು ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಗುಲಾಮಗಿರಿ
ಕಾಂಗ್ರೆಸ್ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಿ, ಗುಲಾಮಗಿರಿಯನ್ನು ಬೆಳೆಸಿದೆ. ಸ್ವತಂತ್ರ ಆಲೋಚನೆ ಇರುವವರಾರೂ ದಾಳಿಯಂಥ ಅನಾಗರಿಕ ಕೃತ್ಯಗಳಿಗೆ ಮುಂದಾಗುವುದಿಲ್ಲ. ಇದು ಕಾಂಗ್ರೆಸ್ಸಿನ ಸಾಂಸ್ಕೃತಿಕ, ಬೌದ್ಧಿಕ ಮತ್ತು ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಆದರೆ, ಇಂತಹ ಕೀಳು ತಂತ್ರಗಳಿಂದ ಬಿಜೆಪಿ ಸರಕಾರದ ಸ್ಥೈರ್ಯವನ್ನು ಕುಗ್ಗಿಸಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ಕಾಂಗ್ರೆಸ್ ಪಕ್ಷವನ್ನು ದೇಶದ ಜನ ಈಗಾಗಲೇ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಬಿಜೆಪಿ ನಾಯಕರು ಸಚಿವರ ಮನೆ ಮೇಲೆ ನಡೆದ ದಾಳಿ ಖಂಡಿಸಿದ್ದಾರೆ.