ಕೊಡಗಿನ ವೀರ ಯೋಧ ಕಾರ್ಯಪ್ಪ, ತಿಮ್ಮಯ್ಯ ಕಂಚಿನ ಪ್ರತಿಮೆ ಅನಾವರಣ
ಮಡಿಕೇರಿ, ನವೆಂಬರ್ 4: ಮಡಿಕೇರಿಯ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕೊಡಗಿನ ಮಹಾನ್ ಯೋಧರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆಗಳನ್ನು ಭಾರತದ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶನಿವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, "ಸ್ವತಂತ್ರ ಭಾರತದ ಮೊದಲ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲು ಶಿಫಾರಸ್ಸು ಮಾಡುವುದಾಗಿ" ಹೇಳಿದರು.
ಕಾರ್ಯಪ್ಪ ಅವರಿಗೆ ಭಾರತರತ್ನ ಸಿಗಬೇಕು: ಸೇನಾ ಮುಖ್ಯಸ್ಥ ಬಿಪಿನ್
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರು ಭಾರತೀಯ ಸೇನೆಗೆ ಅಚ್ಚಳಿಯದ ನೆನಪುಗಳನ್ನು ಬಿಟ್ಟು ಹೋಗಿದ್ದು, ಈ ಮಹನೀಯರ ಪ್ರತಿಮೆಗಳನ್ನು ಅನಾವರಣ ಮಾಡುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಸುಮಾರು ಏಳೂವರೆ ಅಡಿ ಎತ್ತರದ ಪ್ರತಿಮೆ
ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕೊಡಗಿನ ಮಹಾನ್ ಯೋಧರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಏಳೂವರೆ ಅಡಿ ಎತ್ತರದ ಕಂಚಿನ ಪ್ರತಿಮೆಗಳನ್ನು ಭಾರತದ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶನಿವಾರ ಅನಾವರಣಗೊಳಿಸಿದರು.
ಕಾರ್ಯಪ್ಪ, ತಿಮ್ಮಯ್ಯ ಸೇವೆ ಸ್ಮರಣೀಯ
ಬಳಿಕ ಮಾತನಾಡಿದ ರಾವತ್ ಅವರು, ದೇಶ ವಿಭಜನೆಯಾದ ಬಳಿಕ ಸೇನೆಗೆ ರೂಪುರೇಷೆಗಳನ್ನು ಹಾಕಿಕೊಟ್ಟವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಗಿದ್ದಾರೆ. ಅವರಂತೆ ಜನರಲ್ ತಿಮ್ಮಯ್ಯ ಅವರು ಕೂಡ ಅಪ್ರತಿಮ ವೀರ ಯೋಧರಾಗಿದ್ದು, ಯುದ್ಧಕಾಲದಲ್ಲಿ ಯೋಧರೊಂದಿಗೆ ನಿಂತು ಧೈರ್ಯ ತುಂಬಿದ ಸಾಹಸಿ ಅವರ ಸೇವೆ ಸ್ಮರಣೀಯ ಎಂದರು.
ಸ್ಮಾರಕ ಭವನಕ್ಕೆ 10 ಲಕ್ಷ ರು. ಭರವಸೆ
ಮಡಿಕೇರಿಯಲ್ಲಿ ನಿರ್ಮಾಣವಾಗುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಸೇನೆಯಿಂದ 10 ಲಕ್ಷ ರು. ಗಳನ್ನು ನೀಡುವುದಾಗಿ ಭರವಸೆ ನೀಡಿದ ಅವರು ಇತರೆ ಸಹಕಾರ ನೀಡಲು ಸಿದ್ದರಾಗಿರುವುದಾಗಿಯೂ ಹೇಳಿದರು.
ಕಾರ್ಯಕ್ರಮದಲ್ಲಿ ಹಲವರು ಉಪಸ್ಥಿತಿ
ಕಾರ್ಯಕ್ರಮದ ವೇಳೆ ಏರಿಯಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆನಂದ್, ಸಬ್ ಏರಿಯಾ ಕಮಾಂಡರ್ ಮೇಜರ್ ಜನರಲ್ ಕೆ.ಎಸ್. ನಿಜ್ಜರ್, ಬೆಂಗಳೂರು ಎಂಇಜಿ ಕಮಾಂಡೆಂಟ್ ಬ್ರಿಗೇಡಿಯರ್ ಸಚ್ ದೇವ್ ಹಾಗೂ ಫೀಲ್ಡ್ ಮಾರ್ಷಲ್ ಪೋರಂನ ಲೆ.ಕ.(ನಿ) ಕೆ.ಸಿ.ಸುಬ್ಬಯ್ಯ, ಸಂಚಾಲಕ ಲೆ.ಜ. ನಂಜಪ್ಪ, ಶಾಸಕರಾದ ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ಎಸ್ಪಿ ರಾಜೇಂದ್ರಪ್ರಸಾದ್ ಸೇರಿದಂತೆ ನಿವೃತ್ತ ಸೇನಾಧಿಕಾರಿಗಳು ಉಪಸ್ಥಿತರಿದ್ದರು.
ಬಿಪಿನ್ ರಾವತ್ ಅವರನ್ನು ಸ್ವಾಗತಿಸಿದ ಜಿಲ್ಲಾಧಿಕಾರಿ
ಇದಕ್ಕೂ ಮುನ್ನ ಜಿಲ್ಲೆಗೆ ಸೇನಾ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಭೂ ಸೇನೆಯ ಮಹಾದಂಡನಾಯಕರಾದ ಜನರಲ್ ಬಿಪಿನ್ ರಾವತ್ ಅವರನ್ನು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ ಮತ್ತು ಎಸ್ಪಿ ರಾಜೇಂದ್ರಪ್ರಸಾದ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.