ಕೊಡಗಿನಲ್ಲಿ ಬಾರದ ಮಳೆಗೆ ಆತಂಕ... ಬರಲಿರುವ ಮಳೆಗೆ ಭಯ...
ಮಡಿಕೇರಿ, ಜುಲೈ 17: ಕೊಡಗಿನಲ್ಲಿ ಈ ಬಾರಿ ಅಚ್ಚರಿಯ ಸನ್ನಿವೇಶ ಸೃಷ್ಟಿಯಾಗಿದೆ. ಒಂದೆಡೆ, ಇದುವರೆಗೆ ಸಮರ್ಪಕವಾಗಿ ಮಳೆ ಸುರಿಯಲಿಲ್ಲವಲ್ಲ ಎಂಬ ಆತಂಕ. ಮತ್ತೊಂದೆಡೆ ಮುಂದಿನ ದಿನಗಳಲ್ಲಿ ಭಾರಿ ಮಳೆ ಸುರಿದರೆ ಏನು ಮಾಡೋದು ಎಂಬ ಭಯ. ಇವೆರಡರ ಗೊಂದಲದಲ್ಲಿ ಜನಜೀವನ ಸಾಗಿಸುವಂತಾಗಿದೆ.
ಮಳೆಗಾಲದಲ್ಲಿ ಮಳೆ ಬಾರದೆ ಬಿಸಿಲು ಬರಬೇಕಾ? ಹೀಗೊಂದು ಪ್ರಶ್ನೆಯನ್ನು ಒಂದೆರಡು ದಶಕಗಳ ಹಿಂದೆ ಕೊಡಗಿನಲ್ಲಿ ಹಿರಿಯರು ಕೇಳುತ್ತಿದ್ದರು. ಅವತ್ತಿನ ಕಾಲದಲ್ಲಿ ಮಳೆಗಾಲ ಎಂದರೆ ಯುಗಾದಿಯಿಂದಲೇ ಆರಂಭವಾಗಿಬಿಡುತ್ತಿತ್ತು. ಏಪ್ರಿಲ್ ಮೇ ತಿಂಗಳಲ್ಲಿ ಆಗೊಮ್ಮೆ ಈಗೊಮ್ಮೆ ಸಿಡಿಲು, ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಮೇ ತಿಂಗಳ ಅಂತ್ಯದಲ್ಲೇ ಮುಂಗಾರು ಮಳೆ ಶುರುವಾಗುತ್ತಿತ್ತು. ಮೂರು ತಿಂಗಳ ಕಾಲ ಸೂರ್ಯನನ್ನು ನೋಡುವುದೇ ಕಷ್ಟವಾಗುತ್ತಿತ್ತು. ಮಳೆಗಾಲದ ಬಗ್ಗೆ ಮೊದಲೇ ಗೊತ್ತಿದ್ದರಿಂದ ಅದನ್ನು ಎದುರಿಸಲು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನು ಮಾಡಿಕೊಂಡು ಮಳೆಗಾಲವನ್ನು ಯಾವುದೇ ತೊಂದರೆಯಿಲ್ಲದೆ ಕಳೆಯುತ್ತಿದ್ದರು.
ಕೊಡಗು, ಕೇರಳಲ್ಲಿ ಮತ್ತೆ ಮಹಾ ಪ್ರವಾಹದ ಅಲರ್ಟ್
ಈಗ ಕೊಡಗಿನಲ್ಲಿ ಸುರಿಯುವ ಮಳೆ ಪ್ರಮಾಣ ಕಡಿಮೆಯಾಗಿದೆ. ಜತೆಗೆ ಮುಂಗಾರು ಮಳೆಯ ಅವಧಿಯೂ ಏರುಪೇರಾಗಿದೆ. ಹೀಗಾಗಿ ಜನ ಕೂಡ ಮಳೆಯ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಳೆ ಕಡಿಮೆಯಾದ ಕಾರಣ ನದಿ, ತೊರೆಗಳಲ್ಲಿ ನೀರಿನ ಪ್ರಮಾಣವೂ ಇಳಿಮುಖವಾಗಿ ಅದರ ವ್ಯಾಪ್ತಿ ಪ್ರದೇಶ ಕುಗ್ಗಿದೆ. ಅದನ್ನು ದುರುಪಯೋಗ ಪಡಿಸಿಕೊಂಡ ಜನರು ನದಿ ಪಾತ್ರದ ಸ್ಥಳದಲ್ಲಿ ವಸತಿ ನಿರ್ಮಾಣ ಮಾಡಿ, ಮರಳು ತೆಗೆದು ಮೂಲ ಸ್ಥಿತಿಯನ್ನೇ ಬದಲಾಯಿಸಿಬಿಟ್ಟಿದ್ದಾರೆ. ಅದರ ಪರಿಣಾಮ ಕಳೆದ ವರ್ಷ ಭಾರೀ ಅನಾಹುತವನ್ನೇ ಎದುರಿಸುವಂತಾಯಿತು.
ಕೊಡಗಿನಲ್ಲಿ ಮಳೆಗಾಲದ ಭಯ
ಕಳೆದ ವರ್ಷದ ಬಳಿಕದ ದುರಂತದ ನಂತರ ಈ ಬಾರಿಯ ಮಳೆಗಾಲದ ಬಗ್ಗೆ ಜನರಲ್ಲಿ ಭಯವುಂಟಾಗಿರುವುದಂತೂ ನಿಜ. ಈ ನಡುವೆ ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಮಳೆ ಸುರಿಯುತ್ತದೆ ಎಂಬ ಹವಾಮಾನ ವರದಿಗಳು, ಜತೆಗೆ ಊಹಾಪೂಹದ ಸುದ್ದಿಗಳು ಕೂಡ ಜನರನ್ನು ಆತಂಕಕ್ಕೆ ತಳ್ಳಿತ್ತು. ಇದೇ ಸಂದರ್ಭ, ಜಿಲ್ಲೆಯ ಜನತೆ ಭಯಪಡಬೇಡಿ ಎಂದು ಧೈರ್ಯ ತುಂಬುವುದರೊಂದಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸರ್ವ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಇದುವರೆಗೆ ಸಮರ್ಪಕವಾಗಿ ಮಳೆಯೇ ಸುರಿದಿಲ್ಲ. ಹಾಗಾಗಿ ಮಳೆಯನ್ನೇ ನಂಬಿ ಭತ್ತದ ಕೃಷಿ ಮಾಡುವ ರೈತ ಆಕಾಶದತ್ತ ನೋಡುವಂತಾಗಿದೆ. ಇಷ್ಟರಲ್ಲೇ ಮಳೆ ಸುರಿದು ಬಿತ್ತನೆ ಮಾಡಿ ಇನ್ನು ಕೆಲವೇ ದಿನಗಳಲ್ಲಿ ನಾಟಿ ಮಾಡಬೇಕಿತ್ತು. ಕೆಲವೆಡೆ ಈಗ ಬಿತ್ತನೆ ಮಾಡಿದ್ದು ಪೈರು ಬಂದ ಬಳಿಕ ನಾಟಿ ಮಾಡಬೇಕಾಗಿದೆ. ಬಹಳಷ್ಟು ಕಡೆಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಕೃಷಿಯನ್ನೇ ಕೈಬಿಡಲಾಗಿದೆ.
ಕೊಡಗು ; ಭಾರಿ ಮಳೆ ಮುನ್ಸೂಚನೆ, ಜು. 18 ರಿಂದ 22 ಆರೆಂಜ್ ಅಲರ್ಟ್
ಜುಲೈ 18-22ರ ವರೆಗೆ ಮಳೆ ಸೂಚನೆ
ಇದೆಲ್ಲದರ ನಡುವೆಯೂ ಭಾರತೀಯ ಹವಾಮಾನ ಇಲಾಖೆಯು ಕೊಡಗು ಜಿಲ್ಲೆಯಾದ್ಯಾಂತ ಜುಲೈ 18 ರಿಂದ ಜುಲೈ 22 ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಮುನ್ಸೂಚನೆ ನೀಡಿರುವುದು ಆತಂಕ ತಂದಿದೆ. ಆದರೆ ಇದುವರೆಗೆ ಭಾರಿ ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ವರ್ಷ ಈ ವೇಳೆಗೆ ಸಾಕಪ್ಪಾ ಸಾಕು ಎಂಬ ಪರಿಸ್ಥಿತಿಗೆ ಬಂದು ತಲುಪಿತ್ತು. ಕಳೆದ ವರ್ಷ ಸರಾಸರಿ ದಿನಕ್ಕೆ ಜಿಲ್ಲೆಯಲ್ಲಿ ಐವತ್ತರಿಂದ ನೂರು ಮಿಲಿ ಮೀಟರ್ ಮಳೆ ಸುರಿಯುತ್ತಿದ್ದರೆ, ಈ ಬಾರಿ ಎರಡಂಕಿ ದಾಟದ ಸ್ಥಿತಿಯಾಗಿದೆ. ಕಳೆದ ವರ್ಷ ಮಳೆ ಕಡಿಮೆಯಾದರೆ ಸಾಕೆಂದು ಬೇಡುತ್ತಿದ್ದವರು ಮಳೆ ಬರಲೆಂದು ಪ್ರಾರ್ಥಿಸುತ್ತಿದ್ದಾರೆ. ಅಷ್ಟೇ ಅಲ್ಲ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿರುವುದರಿಂದ ಮಳೆ ಬರಲೆಂದು ಕಪ್ಪೆಗೆ ಮದುವೆ ಮಾಡುವ ಮೂಲಕ ಮಳೆಗಾಗಿ ಆಶಿಸುವಂತಹ ದುಸ್ಥಿತಿ ಬಂದೊದಗಿದೆ.
1488.88 ಮಿ.ಮೀ ಕಡಿಮೆ ಮಳೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿ ನೋಡುವುದಾದರೆ ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಇಲ್ಲಿತನಕ 1488.88ಮಿ.ಮೀ ಕಡಿಮೆ ಮಳೆ ಸುರಿದಿರುವುದನ್ನು ಕಾಣಬಹುದಾಗಿದೆ. ಕಳೆದ ವರ್ಷ ಜನವರಿಯಿಂದ ಈ ವೇಳೆಗೆ 2199.88 ಮಿ.ಮೀ ಸುರಿದಿದ್ದರೆ, ಈ ಸಲ ಕೇವಲ 711.58 ಮಿ.ಮೀ. ಮಳೆ ಸುರಿದಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಿದೆ.
ಕೊಡಗಿನಲ್ಲಿ ಜುಲೈ 17ರಿಂದ ಆರಂಭವಾಗಿ ಆಗಸ್ಟ್ 16ರವರೆಗೆ ಒಂದು ತಿಂಗಳ ಅವಧಿಯನ್ನು ಕಕ್ಕಡ (ಆಟಿ) ಮಾಸ ಎಂದು ಕರೆಯಲಾಗುತ್ತಿದೆ. ಈ ಸಮಯದಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿರುತ್ತದೆ. ಅದರಂತೆ ಈ ತಿಂಗಳಲ್ಲಿ ಮಳೆ ಸುರಿಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ ಭಾರತೀಯ ಹವಾಮಾನ ಇಲಾಖೆಯು ಐದು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮುಂಗಾರು ಪ್ರಭಾವ, ಪ್ರವಾಹ: ಉತ್ತರ ಕನ್ನಡ, ಮಲೆನಾಡಿನಲ್ಲಿ ಭಾರಿ ಮಳೆ
ಆರೆಂಜ್ ಅಲರ್ಟ್ ಘೋಷಣೆ
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರ ಉಪಸ್ಥಿತಿಯಲ್ಲಿ ಹಾಗೂ ಎನ್ಡಿಆರ್ ಎಫ್ ತಂಡ ಪ್ರಮುಖರ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಜತೆಗೆ ಜಿಲ್ಲೆಯಲ್ಲಿ ಜುಲೈ 18 ರಿಂದ 22 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿಲಾಗಿದೆ. ಈ ದಿನಗಳಲ್ಲಿ 115ರಿಂದ 204ಮಿ.ಮೀ ವರೆಗೆ ಮಳೆ ಬೀಳುವ ಸಾಧ್ಯತೆ ಇದ್ದು, ತುರ್ತು ಕಾರ್ಯ ನಿರ್ವಹಣೆಗೆ ಸನ್ನದ್ಧವಾಗಿರುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಒಟ್ಟಾರೆ ಕೊಡಗಿನಲ್ಲಿ ಈ ಬಾರಿಯ ಮುಂಗಾರು ಭಯ, ಆತಂಕವನ್ನು ಸೃಷ್ಟಿಸಿರುವುದಂತೂ ನಿಜ.