ಕೊಡಗಿನಲ್ಲಿ ಮತ್ತೆ ನಕ್ಸಲರ ಕಾಟ: ಮುಂದುವರಿದ ಕೂಂಬಿಂಗ್ ಕಾರ್ಯಾಚರಣೆ
ಮಡಿಕೇರಿ, ಫೆಬ್ರವರಿ 23: ದಕ್ಷಿಣಕನ್ನಡ ಮತ್ತು ಕೊಡಗು ಗಡಿಭಾಗದ ಪಶ್ಚಿಮಘಟ್ಟದಲ್ಲಿ ನಕ್ಸಲರಿರುವುದು ದಿಟವಾಗಿದ್ದು, ಕೇರಳ ಗಡಿಭಾಗದ ಅರಣ್ಯಪ್ರದೇಶದಲ್ಲೇ ಅಲೆದಾಡುತ್ತಿರುವುದು ಈಗಿನ ಬೆಳವಣಿಗೆಯಾಗಿದ್ದು, ಅವರ ಸೆರೆಗೆ ನಕ್ಸಲ್ ನಿಗ್ರಹದಳ ಸಜ್ಜಾಗಿದ್ದು, ಈಗಾಗಲೇ ಕೂಂಬಿಂಗ್ ಆರಂಭಗೊಂಡಿದೆ.
ಕೆಲವು ದಿನಗಳ ಹಿಂದೆ ಕೊಡಗಿನ ಗಡಿಭಾಗ ಸಂಪಾಜೆ ಅರಣ್ಯ ಕಾಣಿಸಿಕೊಂಡಿದ್ದ ಮೂವರು ನಕ್ಸಲರು ಇದೀಗ ನಾಪೋಕ್ಲು ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಕೆಲ ದಿನಗಳ ಹಿಂದೆ ಕಕ್ಕಬ್ಬೆ ನಾಲಾಡಿ ಗ್ರಾಮದ ಬಲ್ಲಚಂಡ ಎಸ್ಟೇಟ್ ನ ರೈಟರ್ ರಘು ಪೆಮ್ಮಯ್ಯ ಅವರ ಮನೆಗೆ ದಿಢೀರ್ ಭೇಟಿ ನೀಡಿ ದಿನಬಳಕೆ ವಸ್ತುಗಳನ್ನು ಪಡೆದು ಅವರಲ್ಲಿ ಊಟ ಮಾಡಿ ತೆರಳಿದ್ದಾರೆ ಎಂಬ ಸುದ್ದಿ ಬಯಲಾಗಿದೆ.
ಬಂಡೀಪುರ ಅರಣ್ಯದಲ್ಲಿ ಕೂಂಬಿಂಗ್ ನಡೆಸಿದ್ದೇಕೆ?
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ಹಾಗೂ ಡಿವೈಎಸ್ಪಿ ಸುಂದರ್ ರಾಜ್ ಅವರ ನೇತೃತ್ವದಲ್ಲಿ ನಕ್ಸಲ್ ನಿಗ್ರಹದಳ ಸುಮಾರು 100 ಎಕರೆಯ ಬಲ್ಲಚಂಡ ಎಸ್ಟೇಟ್, ತಡಿಯಂಡಮೋಳ್ ಬೆಟ್ಟಶ್ರೇಣಿ, ಕೊಡಗು ಕೇರಳ ಗಡಿಯ ಬಾಯಿಕಟ್ಟೆ ಅರಣ್ಯ ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ. ಆದರೆ ನಕ್ಸಲರ ಸುಳಿವು ಮಾತ್ರ ಸಿಕ್ಕಿಲ್ಲ. ಅವರು ಕೇರಳಕ್ಕೆ ದಾಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಮೂವರು ನಕ್ಸಲರಲ್ಲಿ ಪೊಲೀಸರಿಗೆ ಬೇಕಾಗಿರುವ ನಕ್ಸಲ್ ನಾಯಕರಾದ ವಿಕ್ರಂಗೌಡ ಹಾಗೂ ಚಂದ್ರು ಇರುವುದು ಖಚಿತವಾಗಿದೆ. ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ ಗಡಿಭಾಗದಲ್ಲಷ್ಟೆ ಕಾಣಿಸಿಕೊಳ್ಳುತ್ತಿದ್ದ ಈ ನಕ್ಸಲರು ಇದೀಗ ಕೊಡಗಿನಲ್ಲಿ ಕಾಣಿಸಿಕೊಳ್ಳುವುದು ಆತಂಕಕ್ಕೆ ಕಾರಣವಾಗಿದೆ.
ಈ ನಕ್ಸಲರು ಫೆ.2ರಂದು ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಯ ಗಡಿಪ್ರದೇಶ ಕೊಯನಾಡು ವ್ಯಾಪ್ತಿಯಲ್ಲಿ ಕಂಡು ಬಂದಿದ್ದರು. ತಕ್ಷಣ ಕೂಂಬಿಂಗ್ ನಡೆಸಲಾಗಿತ್ತು. ಆದರೆ ಅವರ ಸುಳಿವೇ ಪತ್ತೆಯಾಗಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಧುತ್ತನೆ ಪ್ರತ್ಯಕ್ಷವಾಗಿರುವುದು ಭಯಕ್ಕೆ ಕಾರಣವಾಗಿದೆ.