ಚಳಿಗೆ ಕುಡಿತಕ್ಕೆ ಹಣ ಕೇಳಿದ ಮಗ, ಕೊಡದ ತಂದೆಯನ್ನೇ ಕಡಿದು ಕೊಂದ
ಮಡಿಕೇರಿ, ಜೂನ್ 13 : ಸದಾ ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ ಕುಡಿಯಲು ಹಣ ನೀಡಿಲ್ಲ ಎಂಬ ಕೋಪದಿಂದ ಜನ್ಮ ಕೊಟ್ಟ ತಂದೆಯನ್ನೇ ಕತ್ತಿಯಿಂದ ಕಡಿದು, ಕೊಲೆಗೈದು ಜೈಲು ಸೇರಿದ ಘಟನೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಚೆನ್ನಾಪುರ ಗ್ರಾಮದಲ್ಲಿ ನಡೆದಿದೆ.
ಸಿ.ಬಿ. ಶಶಿಧರ್ ಎಂಬಾತ ಹತ್ಯೆಗೈದ ಆರೋಪಿಯಾಗಿದ್ದರೆ, ಬಸಪ್ಪ(70) ಮಗನಿಂದಲೇ ಕೊಲೆಯಾದ ದುರ್ದೈವಿ. ಚೆನ್ನಾಪುರ ಗ್ರಾಮದಲ್ಲಿ ನೆಲೆಸಿರುವ ಬಸಪ್ಪ ಕುಟುಂಬ ತೋಟದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ವಯಸ್ಸು ಎಪ್ಪತ್ತಾದರೂ ದುಡಿದು ಸಂಸಾರ ನಿಭಾಯಿಸುತ್ತಿದ್ದರು. ಆದರೆ ಇವರ ಪುತ್ರ ಶಶಿಧರ್ ಮಾತ್ರ ಕೆಲಸ ಮಾಡದೆ ಓಡಾಡುತ್ತಿದ್ದ. ಅಲ್ಲದೆ ಕುಡಿತದ ಚಟವನ್ನು ಕಲಿತಿದ್ದ.
ಮಹಾರಾಷ್ಟ್ರ: ಚಲಿಸುತ್ತಿದ್ದ ಬಸ್ಸಿನಲ್ಲಿ ಯುವಕನ ಬರ್ಬರ ಹತ್ಯೆ
ಕುಡಿಯಲು ಹಣವಿಲ್ಲದಾಗ ತಂದೆಯನ್ನು ಕಾಡಿ- ಬೇಡಿ ಪಡೆಯುತ್ತಿದ್ದ. ಈ ನಡುವೆ ಮಳೆ ಬಂದ ಕಾರಣ ಚಳಿಗೆ ಮದ್ಯ ಸೇವಿಸಲು ತಂದೆಯ ಬಳಿ ಹಣ ಕೇಳಿದ್ದಾನೆ. ಈ ವೇಳೆ ನನ್ನ ಬಳಿ ಹಣವಿಲ್ಲ ಎಂದು ತಂದೆ ಬಸಪ್ಪ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರೆ ಹಣ ಬರುತ್ತಾ ಎಂದು ಬಸಪ್ಪ ಮಗನನ್ನು ಗದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಶಿಧರ್ ಮನೆಯಲ್ಲಿದ್ದ ಕತ್ತಿಯಿಂದ ಕಡಿದು, ಕೊಲೆಗೈದು ಪರಾರಿಯಾಗಿದ್ದ. ಈ ಘಟನೆಯ ಸಂಬಂಧ ಹಿರಿಯ ಪುತ್ರ ಉಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.