ಕಾವೇರಿ ತೀರ್ಥೋದ್ಭವ; ಕೊಡಗಿನ ನೈಜ ಭಕ್ತರಿಗೆ ಮುಕ್ತ ಅವಕಾಶ ನೀಡಿ ಎಂದು ಆಗ್ರಹ
ಕೊಡಗು, ಅಕ್ಟೋಬರ್ 14: ಅ.17ರಂದು ನಡೆಯಲಿರುವ ತೀರ್ಥೋದ್ಭವದಲ್ಲಿ ಮೂಲನಿವಾಸಿಗಳಿಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಒತ್ತಾಯಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕಾವೇರಿ ತೀರ್ಥೋದ್ಭವದ ಕುರಿತು ಜಿಲ್ಲಾಡಳಿತ ಹಾಗೂ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಕಾವೇರಿ ತೀರ್ಥೋದ್ಭವ ಹಾಗೂ ದಸರಾ ಸಂದರ್ಭದಲ್ಲಿ ಕೋವಿಡ್ ನಿಯಮ ಕಡ್ಡಾಯ: ಕೊಡಗು ಜಿಲ್ಲಾಡಳಿತ
ತೀರ್ಥೋದ್ಭವಕ್ಕೆ ಸೀಮಿತ ಜನರಿಗೆ ಅವಕಾಶ ನೀಡಿ, ಇತರ ಯಾರಿಗೂ ಕ್ಷೇತ್ರದ ಒಳಗೆ ಪ್ರವೇಶವಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದ ಕಾವೇರಿಯ ನೈಜ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ. ಹುಟ್ಟಿನಿಂದ ಸಾವಿನವರೆಗೂ ಕುಲಮಾತೆ ಕಾವೇರಿಯೊಂದಿಗೆ ನಮಗೆ ತಾಯಿ ಮಕ್ಕಳ ಸಂಬಂಧವಿದ್ದು, ತಾಯಿಯನ್ನು ನೋಡಲು ಮಕ್ಕಳನ್ನು ಬಿಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿ, ಜಿಲ್ಲಾಡಳಿತದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಡಿಯಲ್ಲಿ ಅನ್ಯಧರ್ಮದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗೆ ಹಾಗೂ ಅವರ ಸಹಾಯಕರಿಗೆ ಜವಾಬ್ದಾರಿಯನ್ನು ನೀಡದೆ ಆ ಅಧಿಕಾರಿಯನ್ನು ತಾತ್ಕಾಲಿಕವಾಗಿ ರಜೆ ಅಥವಾ ಆ ಹಬ್ಬದ ಉಸ್ತುವಾರಿಯನ್ನು ಅದೇ ಧರ್ಮದ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವಿದೆ. ಸರಕಾರ ಹಾಗೂ ಸಂಬಂಧಪಟ್ಟವರು ಈ ನಿಯಮವನ್ನು ಏಕೆ ಪಾಲಿಸಿಲ್ಲ?. ಕನಿಷ್ಠ ಪಕ್ಷ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಪರಿಜ್ಞಾನ ಸರ್ಕಾರಕ್ಕೆ ಬೇಕು ಎಂದು ಆಗ್ರಹಿಸಿದ್ದಾರೆ.
Recommended Video
ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡು ಮೂಲನಿವಾಸಿಗಳಿಗೆ ಪ್ರಾಶಸ್ತ್ಯ ನೀಡಬೇಕು. ತೀರ್ಥೋದ್ಭವಕ್ಕೆ ಸಾಕಷ್ಟು ಕಾಲಾವಕಾಶವಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮೂಲನಿವಾಸಿಗಳ ಮೇಲೆ ಗದಾಪ್ರಹಾರಕ್ಕೆ ನಿಂತಿರುವುದು ಎಷ್ಟು ಸರಿ? ದೇಶದಲ್ಲಿ, ರಾಜ್ಯದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಇದಕ್ಕೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಸದ್ಯದ ಮಟ್ಟಿಗೆ ಪ್ರಸ್ತುತ ವರ್ಷ ಹೊರಜಿಲ್ಲೆ ಹೊರ ರಾಜ್ಯದ ಭಕ್ತರಿಗೆ ಕಡಿವಾಣ ಹಾಕಿ ಜಿಲ್ಲೆಯ ನೈಜ ಭಕ್ತರಿಗೆ ಅವಕಾಶ ಮಾಡಿ ಕೊಡಿ ಎಂದಿದ್ದಾರೆ.