ಕೊಡಗಿನಲ್ಲೂ ಆಸ್ಪತ್ರೆಗೆ ಅಭಿಯಾನ - ಸ್ಯಾಂಡಲ್ ವುಡ್ ಬೆಂಬಲ
ಮಡಿಕೇರಿ, ಜೂನ್ 14 : ಕೆಲವು ದಿನಗಳ ಹಿಂದಷ್ಟೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಅಭಿಯಾನ ನಡೆದಿತ್ತು. ಇದೀಗ ಮಂಜಿನ ನಗರಿ ಮಡಿಕೇರಿ ಜಿಲ್ಲೆಯಲ್ಲಿಯೂ ಟ್ವಿಟರ್ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಎಲ್ಲೆಡೆಯಿಂದಲೂ ಬೆಂಬಲ ಹರಿದುಬಂದಿದೆ. ಚಂದನವನದ ನಟ ನಟಿಯರೂ ಈ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.
'ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್ ಇನ್ ಕೊಡಗು' ಹ್ಯಾಷ್ ಟ್ಯಾಗ್ ಮೂಲಕ ಸರ್ಕಾರದ ಗಮನ ಸೆಳೆಯಲು ವಿನೂತನವಾಗಿ ಈ ಅಭಿಯಾನವನ್ನು ಆರಂಭಿಸಿದ್ದಾರೆ. ಸ್ಯಾಂಡಲ್ ವುಡ್ ನಟ ನಟಿಯರು ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ ಇದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಾದಲ್ಲಿ ಮೈಸೂರಿಗೆ ಹೋಗಬೇಕು. ಅಲ್ಲಿಗೆ ಹೋಗುವಷ್ಟರಲ್ಲಿ ರೋಗಿ ಅಥವಾ ಗಾಯಾಳು ಸಾವನ್ನಪ್ಪುವ ಪ್ರಸಂಗಗಳು ನಡೆಯುತ್ತವೆ ಎಂದು ಅಭಿಯಾನ ಶುರು ಮಾಡಿದ್ದಾರೆ.
ಉತ್ತರ ಕನ್ನಡದಲ್ಲಿ ಆಸ್ಪತ್ರೆಗೆ #WeWantEmergencyHospitalInUK ಅಭಿಯಾನ
ಸಹಸ್ರ ಸಂಖ್ಯೆಯ ಜನರು ಟ್ವೀಟ್ ಮಾಡಿ ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಸಂಸದರಿಗೆ ಟ್ಯಾಗ್ ಮಾಡಿ ಸುಸಜ್ಜಿತ ಆಸ್ಪತ್ರೆಗೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡಿರುವ ಕೊಡಗು ಮೂಲದ ಯೋಧರು ಕೂಡ ವೀಡಿಯೋ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಕೊಡಗಿನವರ ಜೊತೆಗೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದ ನಟ ಶಿವರಾಜ್ ಕುಮಾರ್ ಸಹ ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕರ್ನಾಟಕಕ್ಕೆ ಸೇರಿದೆ. ಸಾಕಷ್ಟು ಯೋಧರು ಭಾರತೀಯ ಸೇನೆಗೆ ನೀಡಿದ ಮಹಾನ್ ಜಿಲ್ಲೆ ಇದು. ಇಂತಹ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ ಎಂದರೆ ಬೇಸರದ ಸಂಗತಿ. ಇಲ್ಲಿ ಇಂತಹ ಆಸ್ಪತ್ರೆಗಳು ತಕ್ಷಣವೇ ಬೇಕಾಗಿದೆ. ಹೀಗಾಗಿ ನಾವು ಯಾವಾಗಲೂ ಕೈ ಜೋಡಿಸುತ್ತೇವೆ ಎಂದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕೊಡಗು ಜಿಲ್ಲೆಯ ಟ್ವೀಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ.
ಕೂರ್ಗಿನಲ್ಲಿ ಅತ್ಯುತ್ತುಮವಾದ ಆಸ್ಪತ್ರೆ ಇಲ್ಲ, ಇದಕ್ಕಾಗಿ ನಾವು ದೂರ ಪ್ರಯಾಣಿಸಬೇಕಾಗಿದೆ. ಕೊಡಗಿನಲ್ಲಿ ಆಸ್ಪತ್ರೆಗೆ ಇದ್ದರೆ ಜನರಿಗೆ ತುಂಬಾ ಸಹಾಯವಾಗುತ್ತದೆ. ದಯವಿಟ್ಟು ಸ್ಪಂದಿಸಿ ಎಂದು #we need Emergency Hospital in kodagu ಹ್ಯಾಷ್ ಟ್ಯಾಗ್ ಬಳಸಿ ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಟ್ವಿಟರ್ ಅಭಿಯಾನಕ್ಕೆ ಎಚ್ಡಿಕೆ ಬೆಂಬಲ
ಕೊಡಗು ಮೂಲದ ಸ್ಯಾಂಡಲ್ ವುಡ್ ನಟ ನಟಿಯರಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ, ದಿಶಾ ಪೂವಯ್ಯ ಕೂಡ ಟ್ವೀಟ್ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಇದಕ್ಕೆ ಯಾವ ರೀತಿಯಾಗಿ ಸ್ಪಂದಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.