ನಮ್ಮನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಕೊಡವ ಭಾಷಿಕ ಸಮುದಾಯ ಕೂಟ ಒತ್ತಾಯ
ಮಡಿಕೇರಿ, ಅಕ್ಟೋಬರ್ 9: ಕೊಡವ ಭಾಷೆ (ಕೊಡಗು ಭಾಷೆ) ಸಾಹಿತ್ಯ, ಸಂಸ್ಕೃತಿಯ ಆಧಾರ ಸ್ತಂಭವಾಗಿರುವ ಕಲೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದೆ. ಕೊಡಗು ಭಾಷಿಕ ಜನಾಂಗದವರ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೊಡವ ಭಾಷಿಕ ಸಮುದಾಯಗಳ ಕೂಟ ಒತ್ತಾಯಿಸಿದೆ.
ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರಮುಖರು, ರಾಜ್ಯದಲ್ಲಿ ತುಳು, ಲಿಂಗಾಯಿತ, ವೀರಶೈವ ಹಾಗೂ ಒಕ್ಕಲಿಗರಲ್ಲಿ ವಿವಿಧ ಪಂಗಡಗಳಿರುವಂತೆ, ಕೊಡಗು ಜಿಲ್ಲೆಯಲ್ಲಿ ಕೊಡಗು ಭಾಷೆ ಮಾತನಾಡುವ ಪಂಗಡಗಳಿವೆ ಎಂದು ಗಮನ ಸೆಳೆದಿದ್ದಾರೆ.
ಕೊಡಗಿನ ಹೋಂ ಸ್ಟೇಗಳ ಮೇಲೆ ತೀವ್ರ ನಿಗಾ ಇಡಿ; ಸಚಿವ ಸುಧಾಕರ್
ಕೊಡವ ಭಾಷೆ ಮಾತಾನಾಡುವವರು ಅನಾದಿ ಕಾಲದಿಂದಲೂ ಪೂರ್ವಿಕರಿಂದ ನಡೆಸಿಕೊಂಡು ಬಂದಿರುವ ಎಲ್ಲಾ ವಿಶಿಷ್ಟ ಪದ್ಧತಿ, ಪರಂಪರೆ, ಆಚಾರ, ವಿಚಾರ, ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಜೀವನದಿ ಕಾವೇರಿಯ ಉಗಮ ಸ್ಥಾನವಾಗಿರುವ ಕೊಡಗು ಜಿಲ್ಲೆಯು ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ದೇವಾನುದೇವತೆಗಳ ನೆಲೆವೀಡು. ಈ ನಾಡಿನ ಕೊಡವ ಭಾಷಾ ಮೂಲ ನಿವಾಸಿಗಳಿಗೆ ಹೆಮ್ಮೆಯ ವಿಚಾರ ಎಂದರು.
ಕೊಡಗು ಭಾಷೆ ಮಾತನಾಡುವ ಸಮುದಾಯಗಳಾದ ಹೆಗ್ಗಡೆ, ಐರಿ, ಕೊಯವ, ಕೊಡಗು ನಾಯರ್, ಕೋಲೆಯ, ಗೊಲ್ಲ, ಮಲೆಯ, ಪಣಿಕ, ಕಣಿಯ, ಕೊಡವ ಸವಿತ (ನಾಯಿಂದ) ಬೂಣೆ ಪಟ್ಟಮ, ಮಡಿವಾಳ ಮತ್ತು ಬಣ್ಣ ಜನಾಂಗದವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಾ ಬರುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದಿದ್ದರೂ ಕೊಡಗು ಭಾಷಿಕ ಜನಾಂಗದ ಹಲವಾರು ಸಮುದಾಯಗಳ ಬದುಕು ದುಸ್ತರವಾಗಿದೆ. ಕೂಲಿ ಕೆಲಸ ಮಾಡಿ ಕಣ್ಣೀರಿನ ಬದುಕನ್ನು ಸಾಗಿಸುತ್ತಿರುವುದು ವಿಪರ್ಯಾಸ ಎಂದು ಡಾ.ಸುಭಾಷ್ ನಾಣಯ್ಯ ಹೇಳಿದ್ದಾರೆ.