ಪ್ರವಾಸಿಗರು ಅಬ್ಬಿ ಫಾಲ್ಸ್ಗೆ ಭೇಟಿ ನೀಡಲು ಇದ್ದ ನಿಷೇಧ ತೆರವು
ಮಡಿಕೇರಿ, ಸೆಪ್ಟೆಂಬರ್ 27 : ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯದ ನೆಲೆಬೀಡು. ಪಕೃತಿ ಸೌಂದರ್ಯವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಪ್ರವಾಸಿಗರ ಆಕರ್ಷಣೆಯಲ್ಲಿ ಅಬ್ಬಿಫಾಲ್ಸ್ ಸಹ ಒಂದಾಗಿತ್ತು.
ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗಿತ್ತು, ಭೂ ಕುಸಿತ ಸಂಭವಿಸಿತ್ತು. ಮಡಿಕೇರಿ ನಗರದ ಸುತ್ತಮುತ್ತ ಹಾಗೂ ಜಿಲ್ಲೆಯ ಹಲವೆಡೆ ಭೂಕುಸಿತದಿಂದ ಅಪಾರ ನಷ್ಟ ಉಂಟಾಗಿತ್ತು, ಹಲವಾರು ಜನರು ಮೃತಪಟ್ಟಿದ್ದರು.
ಕೊಡಗು ಪ್ರವಾಹ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ. ಸಹಾಯ ಧನ
ಪ್ರಸ್ತುತ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ವಿತರಣೆ, ಮೂಲ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡಲು ಇದ್ದ ನಿಷೇಧವನ್ನು ಜಿಲ್ಲಾಡಳಿತ ತೆರವುಗೊಳಿಇದೆ.
ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ, ಮಾಂದಲ್ಪಟ್ಟಿ ಮತ್ತು ತಡಿಯಂಡಮೋಳ್ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಭೂ ಕುಸಿತದಿಂದಾಗಿ ಹಾನಿಗೊಳಗಾಗಿದ್ದವು. ಆದ್ದರಿಂದ, ಈ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು.
ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ
ಪ್ರಸ್ತುತ ಅಬ್ಬಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ತುರ್ತು ದುರಸ್ಥಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಪೂರ್ಣಗೊಳಿಸಿದೆ. ಲಘು ವಾಹನ ಸಂಚಾರ ಯೋಗ್ಯ ರಸ್ತೆಯನ್ನು ನಿರ್ಮಿಸಲಾಗಿದೆ.
ಚಿತ್ರಗಳು : ಮಳೆ, ಭೂ ಕುಸಿತದ ಬಳಿಕ ಕೊಡಗು ಜಿಲ್ಲೆ
ಆದ್ದರಿಂದ, ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಲಘು ವಾಹನಗಳ ಮೂಲಕ ತೆರಳಬಹುದಾಗಿದೆ. ವಾರಂತ್ಯ ಮತ್ತು ದಸರಾ ರಜೆಗಳಲ್ಲಿ ಅಬ್ಬಿ ಜಲಪಾತವನ್ನು ವೀಕ್ಷಣೆ ಮಾಡಬಹುದಾಗಿದೆ.
'ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಆದ್ದರಿಂದ, ಜಿಲ್ಲೆಗೆ ಬರುವ ಪ್ರವಾಸಿಗರು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು' ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮನವಿ ಮಾಡಿದ್ದಾರೆ.