19 ವರ್ಷದಿಂದ ಯೋಧ ಗಂಡನಿಗೆ ಶಬರಿಯಂತೆ ಕಾದಿರುವ ಪಾರ್ವತಿ
ಮಡಿಕೇರಿ, ಜೂನ್ 8: ಆತ ದೇಶ ಸೇವೆಗೆಂದು ತನ್ನ ಪ್ರಾಣವನ್ನೇ ಮುಡಿಪಾಗಿಟ್ಟಿದ್ದ. ಅಪ್ಪ, ಅಮ್ಮ, ಪ್ರೀತಿಯ ಮಡದಿಯನ್ನು ಬಿಟ್ಟು ಸೈನ್ಯ ಸೇರಿದ್ದ. ಹೆಂಡತಿ ಗರ್ಭಿಣಿ ಎಂದು ತಿಳಿದಾಗ ಸಂತೋಷದಿಂದ ಮನೆಗೂ ಬಂದಿದ್ದ. ಆದರೆ ಹೆಂಡತಿಯನ್ನು ಕಂಡು ಮತ್ತೆ ಸೈನ್ಯಕ್ಕೆ ಹೋದಾತ ಮಾತ್ರ ಮರಳಿ ಬರಲೇ ಇಲ್ಲ. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳೇ ಉರುಳಿ ಹೋದವು. ದೇಶ ಕಾಯಲು ಹೋದಾತನ ಮುಖ ಮಾತ್ರ ಮತ್ತೆ ಕಾಣಲೇ ಇಲ್ಲ.
ಇತ್ತ ಹೆಂಡತಿ, ತನ್ನ ಗಂಡ ಇಂದು ಬರುತ್ತಾರೆ, ನಾಳೆ ಬರುತ್ತಾರೆ ಎಂಬ ನಿರೀಕ್ಷೆ ಹೊತ್ತೇ 19 ವರ್ಷದಿಂದ ಶಬರಿಯಂತೆ ಕಾಯುತ್ತಿದ್ದಾರೆ. ಅವರೇ ಪಾರ್ವತಿ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದ ಯೋಧನ ಪತ್ನಿ ಪಾರ್ವತಿ ತನ್ನ ಪತಿ ಉತ್ತಯ್ಯನ ಬರುವಿಕೆಗಾಗಿ 19 ವರ್ಷಗಳಿಂದ ಕಾಯುತ್ತಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ
1999ರ ಆಗಸ್ಟ್ ತಿಂಗಳು. ಉತ್ತರಪ್ರದೇಶದಲ್ಲಿ ಸ್ನಿಗ್ನಲ್ ಬೆಟಾಲಿಯನ್ ನಲ್ಲಿ ಲಾನ್ಸ್ ನಾಯಕ್ ಆಗಿದ್ದ ಉತ್ತಯ್ಯ ಮನೆಗೆ ಬಂದು, 20 ದಿನ ಇಲ್ಲೇ ಇದ್ದರು. ಗರ್ಭಿಣಿ ಆಗಿದ್ದ ಪತ್ನಿಗೆ ಬೇಗ ವಾಪಾಸ್ ಬರ್ತೀನಿ ಎಂದು ಹೇಳಿ ಅಲಹಾಬಾದ್ನ ತನ್ನ ಯುನಿಟ್ಗೆ ವಾಪಾಸ್ ಹೋಗಿದ್ದರು. ಬಳಿಕ ನವೆಂಬರ್ 21ರಂದು ಪತ್ನಿಗೆ ಕರೆ ಮಾಡಿದವರು, ಹುಷಾರಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ಅದೇ ಕಡೆಯ ಕರೆಯಾಗಿತ್ತು. ಆ ನಂತರ ಅತ್ತಲಿಂದ ಕರೆಯೇ ಬಾರದಿದ್ದರಿಂದ ಆತಂಕಕ್ಕೀಡಾದ ಕುಟುಂಬಕ್ಕೆ ಡಿಸೆಂಬರ್4ಕ್ಕೆ ಒಂದು ಟೆಲಿಗ್ರಾಮ್ ಬಂದಿದೆ. ಕಡೆಗೂ ಗಂಡನಿಂದ ಟೆಲಿಗ್ರಾಮ್ ಬಂತು ಎಂದುಕೊಂಡಿದ್ದ ಪಾರ್ವತಿ ಅವರಿಗೆ ದೊಡ್ಡ ಆಘಾತವೇ ಕಾದಿತ್ತು. ಆ ಟೆಲಿಗ್ರಾಮ್ನಲ್ಲಿ, ಉತ್ತಯ್ಯ ಸೈನ್ಯದ ಯುನಿಟ್ನಲ್ಲಿಲ್ಲ, ಊರಲ್ಲಿದ್ದರೆ ಕಳುಹಿಸಿಕೊಡಿ ಎಂದು ಬರೆಯಲಾಗಿತ್ತು. ಆ ಸುದ್ದಿ ಕೇಳಿ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿತ್ತು. ಅದೇ ಸಮಯದಲ್ಲಿ, ಪಾರ್ವತಿಗೆ ಹೆರಿಗೆಯಾಗಿ ಮಗುವೂ ತೀರಿಕೊಂಡಿತು.
ದಿನ ಕಳೆದಂತೆ ಸುಧಾರಿಸಿಕೊಂಡು ಪತಿಗಾಗಿ ಹುಡುಕಾಟ ನಡೆಸಿ, ಸೈನ್ಯದ ಯುನಿಟ್ಗೆ ಹೋಗಿ ಬಂದರೂ ಪಾರ್ವತಿಗೆ ಪತಿಯ ಸುಳಿವೇ ಸಿಗಲಿಲ್ಲ. ಕಡೆಗೆ, ಸೇವೆಗೆ ಜೂನ್ 14ಕ್ಕೆ ಉತ್ತಯ್ಯ ನಿಧನರಾಗಿದ್ದಾರೆಂದು ಪತ್ರ ಕಳುಹಿಸಿದ ಸರ್ಕಾರ, 2010ರಿಂದ ಪಿಂಚಣಿ ಕೊಡಲು ಆರಂಭಿಸಿತು. ಯೋಧನ ಮೃತದೇಹವಾಗಲೀ, ಎಲ್ಲಿ, ಹೇಗೆ ನಿಧನರಾಗಿದ್ದಾರೆ ಎಂದಾಗಲೀ ಕುಟುಂಬಕ್ಕೆ ಸೂಕ್ತ ಮಾಹಿತಿಯೇ ದೊರೆಯಲಿಲ್ಲ.
ಎದೆಯೊಡ್ಡಿ ನಿಂತು ಉಗ್ರರನ್ನು ಕೊಂದಿದ್ದ ಕನ್ನಡಿಗನ ಸಾಹಸಗಾಥೆ ಪುಸ್ತಕ ರೂಪದಲ್ಲಿ
ಇತ್ತ ಗಂಡನೂ ಇಲ್ಲದೇ, ಮಗುವನ್ನೂ ಕಳೆದುಕೊಂಡು ಒಂಟಿಯಾಗಿರುವ ಪಾರ್ವತಿ, ಪತಿಯ ಬಗ್ಗೆ ಇಂದಲ್ಲ ನಾಳೆ ವಿಷಯ ತಿಳಿಯಬಹುದು ಎಂದು ನಿರೀಕ್ಷಿಸುವುದೂ ನಿಂತಿಲ್ಲ.