ಕೊಡಗು ಪ್ರವಾಹ : ಶೀಘ್ರದಲ್ಲೇ ನಷ್ಟ ಅಂದಾಜಿಗೆ ಕೇಂದ್ರ ತಂಡ ಭೇಟಿ
ಮಡಿಕೇರಿ, ಸೆಪ್ಟೆಂಬರ್ 07 : ಮಳೆ ಮತ್ತು ಭೂ ಕುಸಿತದಿಂದ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸಲು ಕೇಂದ್ರದ ತಂಡ ಜಿಲ್ಲೆಗೆ ಭೇಟಿ ನೀಡಲಿದೆ. ಮತ್ತೊಂದು ಕಡೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರದ ತಂಡಕ್ಕೆ ಅಗತ್ಯ ಮಾಹಿತಿ ನೀಡಲು ಸಿದ್ದವಾಗಿರುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ಶಾಶ್ವತ ನೆಲೆ ಕಲ್ಪಿಸಲು ಜಾಗ ಗುರುತಿಸುವಂತೆಯೂ ಸೂಚನೆ ನೀಡಲಾಗಿದೆ.
ಕೊಡಗು ಮಹಾಮಳೆಯ ದುರಂತದ ನಂತರ ಕಾಲೂರಿನ ದುಸ್ಥಿತಿ ಇದು
ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು, 'ಸುಮಾರು 850 ಕುಟುಂಬಗಳು ಗುಡ್ಡ ಕುಸಿತದಿಂದಾಗಿ ಮನೆ ಕಳೆದುಕೊಂಡಿವೆ. ತಾತ್ಕಾಲಿಕ ಶೆಡ್ ನಿರ್ಮಿಸಲು 23 ಎಕರೆ ಜಾಗ ಗುರುತಿಸಲಾಗಿದೆ. 30*40 ಅಳತೆಯ ಶೆಡ್ ನಿರ್ಮಿಸಲಾಗುತ್ತದೆ' ಎಂದು ಹೇಳಿದ್ದಾರೆ.
ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ
ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಸುಮಾರು 9000 ಹೆಕ್ಟೇರ್ ಬೆಳಗಳು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟು 14 ಸಂತ್ರಸ್ತ ಕೇಂದ್ರದಲ್ಲಿ 1431 ಜನರು ಇನ್ನೂ ಆಶ್ರಯ ಪಡೆದಿದ್ದಾರೆ.
ಚಿತ್ರಗಳು : ಕೊಡಗಿನ ಈ ರಸ್ತೆಗಳ ಗುರುತು ಹಿಡಿಯುವಿರಾ?
ಪಶುಗಳಿಗೆ ಆಹಾರ ವಿತರಣೆ
ಕೊಡಗಿನಲ್ಲಿ ಉಂಟಾದ ಪ್ರವಾಹದಿಂದಾಗಿ ಜನರು ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಜಾನುವಾರಗಳ ಮೇವಿಗೂ ಕೊರತೆ ಉಂಟಾಗಿದೆ. ಜಾನುವಾರು ಮೇವನ್ನು ಪಶು ಇಲಾಖೆಯ ಮೂಲಕ ವಿತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಹಳ್ಳಿ-ಹಳ್ಳಿಗಳಿಗೆ ಹೋಗಿ ಮೇವು ವಿತರಣೆ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ
ಕೊಡಗು ಜಿಲ್ಲೆಯಲ್ಲಿ ಮಳೆ, ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲಾಗುತ್ತದೆ. ಶೆಡ್ ಮಾದರಿ ಈಗಾಗಲೇ ಸಿದ್ಧವಾಗಿದೆ. ಆದರೆ, ಎಲ್ಲಿ ಶೆಡ್ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಗಾಳಿಬೀಡು ಗ್ರಾಮದ ಬಳಿ ಸಂತ್ರಸ್ತರ ಪುನರ್ವಸತಿಗಾಗಿ ಭೂಮಿಯ ಪರಿಶೀಲನೆ ನಡೆಸಿದರು, ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದರು.
ಒಟ್ಟು 14 ಸಂತ್ರಸ್ತ ಕೇಂದ್ರಗಳು
ಕೊಡಗಿನಲ್ಲಿ ಈಗ ಮಳೆ ಕಡಿಮೆಯಾಗಿದೆ. ಆದರೆ, ಮನೆಗಳನ್ನು ಕಳೆದುಕೊಂಡ 1431 ಸಂತ್ರಸ್ತರು ಇನ್ನೂ ಜಿಲ್ಲೆಯ 14 ಸಂತ್ರಸ್ತ ಕೇಂದ್ರಲ್ಲಿ ಆಶ್ರಯ ಪಡೆದಿದ್ದಾರೆ.
ಮಡಿಕೇರಿ ನಗರದ ಮೈತ್ರಿ ಪೊಲೀಸ್ ಭವನದಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದರು.
ಜಾನುವಾರುಗಳ ರಕ್ಷಣೆ
ಕೊಡಗು ಪ್ರವಾಹದಿಂದ ಜನರು ಮಳೆ ಕಳೆದುಕೊಂಡರು. ಜನರಿಗೆ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ನೀಡಲಾಯಿತು. ಮತ್ತೊಂದು ಕಡೆ ಜಾನವಾರುಗಳು ಸಹ ಅನಾಥವಾಗಿದ್ದವು. ಅವುಗಳನ್ನು ರಕ್ಷಿಸಿ ಪೋಷಣೆ ಮಾಡಲಾಗುತ್ತಿದೆ.
ಜಿಲ್ಲಾಡಳಿತದಿಂದ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿದ್ದ 100ಕ್ಕೂ ಅಧಿಕ ಜಾನುವಾರುಗಳನ್ನು ರಕ್ಷಿಸಿ ಪೋಷಣೆ ಮಾಡಲಾಗುತ್ತಿದೆ. ಅಲ್ಲಿನ ಚಿತ್ರಣ ಹೀಗಿದೆ ನೋಡಿ.
ನೀರಿನ ಸ್ವಚ್ಛತೆ
ಪ್ರವಾಹ, ಗುಡ್ಡ ಕುಸಿತದ ಬಳಿಕ ಮಡಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ನೀರು ಕಲುಷಿತಗೊಂಡಿದೆ. ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸಿ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಮತ್ತೊಂದು ಕಡೆ ಸೋಮವಾರಪೇಟೆ ತಾಲೂಕಿನ ಮದ್ಲಾಪುರದಲ್ಲಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಮತ್ತು ಸ್ವಚ್ಚತೆ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.