ಕೊಡಗು: ಕೋವಿಡ್ ನಿಂದ ಬಿಎಸ್ಎಫ್ ಯೋಧ ನಿಧನ, ಹುಟ್ಟೂರಿಗೂ ಬರದ ಪಾರ್ಥಿವ ಶರೀರ
ಮಡಿಕೇರಿ, ಸೆಪ್ಟೆಂಬರ್ 24: ಕರ್ತವ್ಯದಲ್ಲಿದ್ದಾಗಲೇ ಕೋವಿಡ್ ಬಾಧಿಸಿದ ಪರಿಣಾಮ ಬಹು ಅಂಗಾಂಗ ವೈಫಲ್ಯದೊಂದಿಗೆ ಕೊಡಗು ಜಿಲ್ಲೆಯ ಬಿಎಸ್ಎಫ್ ಯೋಧರೊಬ್ಬರು ಕೇರಳದ ತಿರುವನಂತಪುರಂನಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಕೇರಳದ ತಿರುವನಂತಪುರಂನಲ್ಲಿರುವ ಬಿಎಸ್ಎಫ್ ಸೆಕ್ಟರ್ ಹೆಡ್ ಕ್ವಾರ್ಟರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ, ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದವರಾದ ದುದ್ದಿಯಂಡ ಎ.ಮಜೀದ್ ಎಂಬುವವರೇ ಮಹಾಮಾರಿ ಸಾಂಕ್ರಾಮಿಕ ಸೋಂಕಿಗೆ ಸಾವನ್ನಪ್ಪಿದ ಯೋಧರಾಗಿದ್ದಾರೆ. ಅವರಿಗೆ 50 ವರ್ಷ ಪ್ರಾಯವಾಗಿತ್ತು.
ಕೋವಿಡ್ಗೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಬಲಿ
ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ 4 ವರ್ಷಗಳಿಂದ ತಿರುವನಂತಪುರಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಜೀದ್ ಅವರು, ಕಳೆದ ಆಗಸ್ಟ್ ತಿಂಗಳ ಅಂತ್ಯದವರೆಗೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ತಿಂಗಳ ಮೊದಲ ವಾರದಲ್ಲಿ ದಿಢೀರನೆ ಇವರಿಗೆ ಕೋವಿಡ್-19 ಸೋಂಕು ಧೃಡಪಟ್ಟ ಕಾರಣ, ತಿರುವನಂತಪುರಂನ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್ ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ತಜ್ಞ ವೈದ್ಯರ ತಂಡ ನಿರಂತರವಾಗಿ ನೀಡಿದ ಚಿಕಿತ್ಸೆ ಆರಂಭದಲ್ಲಿ ಫಲ ಕಾಣದಿದ್ದಾಗ ಪ್ಲಾಸ್ಮಾ ಥೇರಪಿ ಮೂಲಕ ಚಿಕಿತ್ಸೆ ನೀಡಲಾಯಿತು. ಇದರಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದ ಮಜೀದ್ ಅವರಿಗೆ ತಮ್ಮ ಬಹು ಅಂಗಾಂಗ ವೈಫಲ್ಯ ಕಾಡತೊಡಗಿತು.
ತಮ್ಮ ಎರಡೂ ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ವೃದ್ಧಿಸಿದ ಪರಿಣಾಮ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಜಿದ್ ಅವರು, ಯಾವುದೇ ಉನ್ನತ ಮಟ್ಟದ ಚಿಕಿತ್ಸೆಗೂ ಸ್ಪಂದಿಸದೆ ಗುರುವಾರ ಬೆಳಿಗ್ಗೆ 7 ಗಂಟೆಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತ ಯೋಧ ಮಜೀದ್ ಅವರ ಮರಣವನ್ನು ವೈದ್ಯರು ಖಚಿತಪಡಿಸಿದ ನಂತರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯುವ ಉದ್ದೇಶದಿಂದ ಮತ್ತೊಮ್ಮೆ ಕೋವಿಡ್ ಆಂಟಿಜೆನ್ ಟೆಸ್ಟಿಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲೂ ಅದರ ಫಲಿತಾಂಶ ಪಾಸಿಟಿವ್ ಬಂದ ಕಾರಣ ಮಜೀದ್ ಅವರ ಅಂತ್ಯಕ್ರಿಯೆಯನ್ನು ತಿರುವನಂತಪುರಂನಲ್ಲೆ ನಡೆಸಲು ಬಿಎಸ್ಎಫ್ ಅಧಿಕಾರಿಗಳು ನಿರ್ಧರಿಸಿದರು. ಇದರಿಂದ ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಬರಬಹುದೆಂಬ ಗ್ರಾಮಸ್ಥರ ನಿರೀಕ್ಷೆ ಹುಸಿಯಾಯಿತು.
ಮೃತ ಮಜೀದ್ ಅವರ ಹುಟ್ಟೂರು ಜಮಾಅತ್ ಆದ ನಲ್ವತ್ತೋಕ್ಲು ಜುಮಾ ಮಸೀದಿಯ ಆಡಳಿತ ಮಂಡಳಿಯ ನಿರಾಕ್ಷೇಪದಂತೆ ಅವರ ಅಂತ್ಯಕ್ರಿಯೆ ತಿರುವನಂತಪುರಂನ ಭೀಮಾ ಮಸೀದಿಯ ಖಬರ್ ಸ್ಥಾನದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಗುರುವಾರ ಸಂಜೆ ನಡೆಯಿತು.
ಈ ವೇಳೆ ಹಾಜರಿದ್ದ ಹಿರಿಯ ಅಧಿಕಾರಿಗಳು ಪಾರ್ಥಿವ ಶರೀರದ 10 ಅಡಿ ದೂರದಲ್ಲಿ ಪುಷ್ಪಚಕ್ರ ಅರ್ಪಿಸಿ ಅಗಲಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು. ಮೃತ ಯೋಧ ಮಜೀದ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಹಿರಿಯ ಪುತ್ರ ಮೊಹಮ್ಮದ್ ರಿಶಾನ್, ಹಿರಿಯ ಸಹೋದರ ಡಿ.ಎ ಉಮ್ಮರ್ ಮತ್ತು ಅಕ್ಕನ ಮಗ ಸಫಾನ್ ಅವರು ಪಾಲ್ಗೊಂಡು ವಿಧಿವಿಧಾನ ನೆರವೇರಿಸಿದರು.
Recommended Video
ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು, ಐವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಸೇರಿದಂತೆ ಅಪಾರ ಪ್ರಮಾಣದ ಬಂಧು ವರ್ಗವನ್ನು ಅಗಲಿದ್ದಾರೆ.