ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ 8 ಡ್ರೋಣ್ ಕ್ಯಾಮರಾ: ಎಡಿಜಿಪಿ ರಾವ್
ಕೊಡಗು, ಆಗಸ್ಟ್ 22: ಕೊಡಗು ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಒಟ್ಟು 8 ಡ್ರೋಣ್ ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜು ಅವರು ಉತ್ತಮ ಸಹಕಾರ ನೀಡಿದ್ದು, ಭಾರತೀಯ ಭೂಸೇನೆ, ವಾಯುಸೇನೆ ಉತ್ತಮ ಸಹಕಾರ ನೀಡಿದ್ದಾರೆ.
ಕೊಡಗಿನ ಜನರ ರಕ್ಷಣೆಗೆ ಬೆಂಗಳೂರು ಹುಡುಗರ ಡ್ರೋನ್
ಮಳೆಹಾನಿಗೆ ಸಿಲುಕಿಕೊಂಡವರ ರಕ್ಷಣೆ ಮಾಡಿದ್ದು, ಇದುವರೆಗೂ 1750 ಜನರನ್ನು ಜಿಲ್ಲೆಯಾದ್ಯಂತ ಮಳೆಹಾನಿಗೆ ತುತ್ತಾದ ಪ್ರದೇಶದಿಂದ ರಕ್ಷಣೆ ಮಾಡಲಾಗಿದ್ದು ಇಂದಿಗೆ ಅಧಿಕೃತವಾಗಿ ರಕ್ಷಣಾ ಕಾರ್ಯ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲಾದರೂ ರಕ್ಷಣಾ ಕಾರ್ಯಕ್ಕೆ ರಕ್ಷಣಾ ತಂಡಗಳು ಜಿಲ್ಲೆಯಲ್ಲಿ ಸನ್ನದ್ಧವಾಗಿರುತ್ತದೆ. ಅಗತ್ಯವಿರುವ ಕಡೆ ಕಾರ್ಯ ನಿರ್ವಹಿಸಲು ಸಿದ್ಧವಿದೆ, ಮಳೆಹಾನಿಯಲ್ಲಿ ತುತ್ತಾದ ಜನರ ರಕ್ಷಣಾ ಕಾರ್ಯದಲ್ಲಿ ಸರ್ಕಾರ, ಸಾರ್ವಜನಿಕರು ಮಾಡಿದಂತಹ ಕೆಲಸವು ಶ್ಲಾಘನೀಯವಾದದ್ದು ಎಂದು ಹೇಳಿದರು.
ಕರ್ನಾಟಕದ ಉತ್ತರ ಭಾಗದ ಎಂಟು ಡ್ರೋಣ್ ಕ್ಯಾಮರಾಗಳನ್ನು ಜಿಲ್ಲೆಗೆ ತರಿಸಿಕೊಳ್ಳಲಾಗುತ್ತಿದ್ದು, ಪರಿಹಾರ ಕಾರ್ಯಾಚರಣೆಗೆ ಕೊಡಗಿನಲ್ಲಿ ಪ್ರಥಮ ಬಾರಿಗೆ ಬಳಸಿಕೊಳ್ಳಲಾಗುತ್ತಿದ್ದು ಪರಿಹಾರ ಕಾರ್ಯಾಚರಣೆಗೆ ತುಂಬಾ ಸಹಕಾರಿಯಾಗಲಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವವರ ಮನೆಗಳಿಗೆ ಅಗತ್ಯ ರಕ್ಷಣೆ ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಗೃಹ ರಕ್ಷಕ ಸಿಬ್ಬಂದಿಯವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿದ್ದು ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.
ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ
ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನಗದು ಸಹಾಯವನ್ನು ಮಾಡಲು ಇಚ್ಚಿಸುವವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾದ ಸುಳ್ಳು ವದಂತಿಗಳನ್ನು ಹರಡುತ್ತಿದ್ದು, ಅಂತಹ ವದಂತಿಗಳಿಗೆ ಕಿವಿಗೊಡಬಾರದು, ಸುಳ್ಳು ವದಂತಿಗಳನ್ನು ಹರಡುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅವರು ಎಚ್ಚರಿಕೆ ನೀಡಿದರು.