ಕೊಡಗಿನ ಭೀಕರ ಮಳೆಗೆ 7 ಮಂದಿ ಬಲಿ, 8 ಮಂದಿ ಕಣ್ಮರೆ
ಮಡಿಕೇರಿ, ಆಗಸ್ಟ್ 9 : ಮಡಿಕೇರಿಯಲ್ಲಿ ವರುಣನ ಆರ್ಭಟ ಸದ್ಯ ಕೇವಲ 12 ಗಂಟೆಯಲ್ಲಿ 7 ಮಂದಿ ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡಿದ್ದು 8 ಜನರು ನಾಪತ್ತೆಯಾಗಿದ್ದಾರೆ.
3 ತಿಂಗಳಲ್ಲಿ ಮಹಾ ಮಳೆಗೆ ಬಲಿಯಾದವರೆಷ್ಟು? ಇಲ್ಲಿದೆ ಮಾಹಿತಿ
ಇಂದು ಮಧ್ಯಾಹ್ನ 3ಕ್ಕೆ ವರುಣನ ಕೋಪಾತಾಪಕ್ಕೆ ಗುಡ್ಡ ಕುಸಿದ ಪರಿಣಾಮ ಜಿಲ್ಲೆಯ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಅತ್ತೇಡಿ ಯಶವಂತ, ಬೋಳನ ಬಾಲಕೃಷ್ಣ, ಬೋಳನ ಯಮುನಾ, ಕಾಳನ ಉದಯ ಹಾಗೂ ವಸಂತ ಎಂದು ಗುರುತಿಸಲಾಗಿತ್ತು.
ಇದಾದ ಬಳಿಕ ಸಂಜೆಯ ವೇಳೆಗೆ ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂ ಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ಅದೇ ಪ್ರದೇಶದ ಸುತ್ತಮುತ್ತ 8 ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರದೇಶದ ನಾಲ್ಕೈದು ಮನೆಗಳು ಕುಸಿದಿದ್ದು, ಮಮತ (40) ಹಾಗೂ ಮಗಳು ಲಿಖಿತಾ (15) ಇವರುಗಳ ಮೃತ ದೇಹ ಪತ್ತೆಯಾಗಿದೆ. ದುರ್ಘಟನೆಯಲ್ಲಿ ಸಿಲುಕಿ ಶಂಕರ, ಅಪ್ಪು(55), ಲೀಲಾ, ಹರೀಶ ಎಂಬುವರ ಪತ್ನಿ, ಮತ್ತೊಂದು ಕುಟುಂಬದ ದೇವಕ್ಕಿ (65), ಅನು(35), ಅಮೃತ(13) ಹಾಗೂ ಆದಿತ್ಯ(10)ನಾಪತ್ತೆಯಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ 58 ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 15 ಪ್ರದೇಶಗಳಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟಾಗಿ 34 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 817 ಕುಟುಂಬಗಳ ಒಟ್ಟು 2866 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 247 ಜನರನ್ನು ಮತ್ತು 11 ಜಾನುವಾರಗಳನ್ನು ರಕ್ಷಿಸಲಾಗಿದೆ. ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ 300 ಕುಟುಂಬಗಳನ್ನು ರಕ್ಷಿಸಲಾಗಿದೆ. ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ಕ್ಷೇತ್ರದಲ್ಲಿದ್ದು ಕ್ರಮ ವಹಿಸುತ್ತಿದ್ದಾರೆ. ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಮೈಸೂರು ಜಿಲ್ಲೆಗೂ ನಾಳೆ ಶಾಲಾ - ಕಾಲೇಜಿಗೆ ರಜೆ ಘೋಷಿಸಲಾಗಿದೆ.