ಮಡಿಕೇರಿ ಸೌಂದರ್ಯದ ಸೊಬಗು ಬಿಚ್ಚಿಟ್ಟ ಆ 4 ಚಿತ್ರಗಳು
ಮಡಿಕೇರಿ, ಆಗಸ್ಟ್ 14: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ಕೊಡಗಿನ ನಿಸರ್ಗ ಸೊಬಗು ಛಾಯಾಚಿತ್ರ ಸ್ಪರ್ಧೆಯಲ್ಲಿ ಮಡಿಕೇರಿಯ ಸುನಿಲ್ ಶೆಟ್ಟಿ ಪ್ರಥಮ, ಸುಧಾಮ ಪೆರಾಜೆ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಮಡಿಕೇರಿಯ ಡೈರಿ ಫಾರಂನ ನಿವಾಸಿ ಕೆ.ಎಂ. ಜಗನ್ನಾಥ್ ಹಾಗೂ ಜಿ.ಎಸ್. ಲೀಲಾ ದಂಪತಿಯ ಪುತ್ರ ಸುನಿಲ್ ಶೆಟ್ಟಿ ಔಷಧಿ ವಿತರಣಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
'ಮುಗಿಲುಪೇಟೆ'ಯಲ್ಲಿ ಕೊಂಡ ಆ ಮಂಜಿನ ಹನಿಗಳು..!
ಮಡಿಕೇರಿಯ ಮಂಗಳಾದೇವಿ ನಗರದ ನಿವಾಸಿ ಕೇಶವ್ ಪೆರಾಜೆ ಹಾಗೂ ನಾಗಮ್ಮ ಪೆರಾಜೆ ದಂಪತಿ ಪುತ್ರ ಸುಧಾಮ ಪೆರಾಜೆ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು.
ಮಡಿಕೇರಿಯ ಮಂಗಳಾದೇವಿ ನಗರದ ನಾಗೇಶ್ ಹಾಗೂ ಗೀತಾ ದಂಪತಿಗಳ ಪುತ್ರ ಜಗದೀಶ್ ಪೂಜಾರಿ ತೃತೀಯ ಬಹುಮಾನ ಪಡೆದಿದ್ದಾರೆ. ಇವರು ಮಡಿಕೇರಿಯಲ್ಲಿ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾಗಮಂಡಲ ಸಮೀಪದ ತಣ್ಣಿಮಾನಿಯ ನಿವಾಸಿ ದೇವಿಪ್ರಸಾದ್ ನಾಲ್ಕನೇ ಬಹುಮಾನ ಪಡೆದಿದ್ದಾರೆ.
ಆ.20ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ತಿಳಿಸಿದ್ದಾರೆ.
ಮಡಿಕೇರಿ ಮೇಲ್ ಮಂಜು!
ಹಸಿರು ತುಂಬಿದ ಬೆಟ್ಟದ ಮೇಲೆ ಮುತ್ತಿನ ರಂಗವಲ್ಲಿ ಬರೆದ ಕೊಡಗಿನ ಸೊಬಗಿನ ಈ ಚಿತ್ರ ಕ್ಲಿಕ್ಕಿಸಿದ್ದಕ್ಕಾಗಿ ಪ್ರಥಮ ಬಹುಮಾನ ಪಡೆದವರು ಸುನಿಲ್ ಶೆಟ್ಟಿ.
ಸ್ವರ್ಗಕ್ಕೇ ಸ್ಪರ್ಧೆ!
ಸ್ವರ್ಗಕ್ಕೇ ಸ್ಪರ್ಧೆ ನೀಡುವಂಥ ರಾಜಾಸೀಟ್ ನ ಈ ಮನಮೋಹಕ ದೃಶ್ಯಕ್ಕಾಗಿ ಸುಧಾಮ ಪೆರಾಜೆ ದ್ವಿತೀಯ ಬಹುಮಾನ ಪಡೆದಿದ್ದಾರೆ.
ನಾಕಕ್ಕೆ ಮೂರೇ ಗೇಣು!
ಸ್ವರ್ಗಕ್ಕೆ ಇನ್ನು ಮೂರೇ ಗೇಣು ಎನ್ನುತ್ತಿರುವ ಮುಗಿಲುಪೇಟೆಯ ಈ ರಮಣೀಯ ದೃಶ್ಯಕ್ಕಾಗಿ ತೃತೀಯ ಬಹುಮಾನ ಪಡೆದವರು ಜಗದೀಶ್ ಪೂಜಾರಿ.
ಹಸಿರ ಜಾತ್ರೆ
ಬಾನು, ಭೂಮಿಯನ್ನೆಲ್ಲ ಒಂದಾಗಿಸಿ ಸೌಂದರ್ಯದ ರಸಾನುಭೂತಿ ನೀಡಿದ ಹಸಿರಜಾತ್ರೆಯ ಈ ಚಿತ್ರ ಕ್ಲಿಕ್ಕಿಸಿದ್ದಕ್ಕಾಗಿ ದೇವಿಪ್ರಸಾದ್ ನಾಲ್ಕನೇ ಬಹುಮಾನ ಗಳಿಸಿದ್ದಾರೆ.