ಕೊಡಗು: ಕೋವಿಡ್ 2ನೇ ಅಲೆಯಲ್ಲಿ ಮೂರು ಸಾವಿರ ಮಕ್ಕಳಿಗೆ ಸೋಂಕು
ಮಡಿಕೇರಿ, ಜೂನ್ 5: ರಾಜ್ಯದ ಅತ್ಯಂತ ಚಿಕ್ಕ ಜಿಲ್ಲೆ ಆಗಿರುವ ಕೊಡಗಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕು ಕಡಿಮೆ ಆಗುತ್ತಿಲ್ಲ. ಈಗಲೂ ಪಾಸಿಟಿವಿಟಿ ರೇಟ್ ಶೇ.15ಕ್ಕಿಂತ ಹೆಚ್ಚಾಗಿದೆ.
ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಆದರೆ, ಕೊಡಗಿನಲ್ಲಿ ಕೋವಿಡ್ ಎರಡನೇ ಅಲೆಯಲ್ಲಿಯೇ ಮಕ್ಕಳಿಗೆ ಹೆಚ್ಚು ಸೋಂಕು ಹರಡಿದೆ. ಜಿಲ್ಲೆಯಲ್ಲಿ ಇದುವರೆಗೆ ಮಕ್ಕಳಿಗೆ ಆಗಿರುವ ಕೋವಿಡ್ ಸೋಂಕಿನ ಅಂಕಿ ಸಂಖ್ಯೆಗಳನ್ನು ಪರಿಶೀಲಿಸಿದಾಗ ಜಿಲ್ಲೆಯಲ್ಲಿ ನಿಜವಾಗಿಯೂ ಮೂರನೇ ಅಲೆ ಆರಂಭವಾಗಿರಬೇಕು ಅನ್ನುವ ಅನುಮಾನ ಬರುತ್ತದೆ. ಮೊದಲನೇ ಅಲೆಯಿಂದ ಇದುವರೆಗೆ ಕೊಡಗು ಜಿಲ್ಲೆಯಲ್ಲಿ 21,700ಕ್ಕೂ ಹೆಚ್ಚು ಜನರಿಗೆ ಕೋವಿಡ್ ಸೋಂಕು ತಗುಲಿದೆ. ಅದರಲ್ಲಿ 3609 ಮಕ್ಕಳಿಗೆ ಸೋಂಕು ವಕ್ಕರಿಸಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರ್ ತಿಳಿಸಿದ್ದಾರೆ.
ಮೇ 28ರಿಂದ 244 ಮಕ್ಕಳಿಗೆ ಕೋವಿಡ್ ಸೋಂಕು
ಇದುವರೆಗೂ 3609 ಮಕ್ಕಳಿಗೆ ಸೋಂಕು ಹರಡಿದ್ದರೂ ಎರಡನೇ ಅಲೆ ಅಂದರೆ ಮಾರ್ಚ್ ತಿಂಗಳಿನಿಂದ ಇದುವರೆಗೆ ಅತೀ ಹೆಚ್ಚು ಮಕ್ಕಳಿಗೆ ಸೋಂಕು ಹರಡಿದೆ. ಮೊದಲನೇ ಅಲೆಯಲ್ಲಿ ಕೇವಲ 700 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದರೆ, ಎರಡನೇ ಅಲೆಯಲ್ಲಿ 2909 ಮಕ್ಕಳಿಗೆ ಸೋಂಕು ಹರಡಿದೆ. ಇದು ನಿಜವಾಗಿಯೂ ಅತ್ಯಂತ ಅಚ್ಚರಿಯ ಮತ್ತು ಆತಂಕದ ವಿಷಯವೇ ಸರಿ. ಅದರಲ್ಲೂ ಕಳೆದ ಒಂದು ವಾರದಿಂದ ಅಂದರೆ ಮೇ 28ನೇ ತಾರೀಖಿನಿಂದ ಇಲ್ಲಿಯವರೆಗೆ 244 ಮಕ್ಕಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
11ರಿಂದ 18 ವರ್ಷದೊಳಗಿನ ಮಕ್ಕಳಿಗೆ 2159 ಮಕ್ಕಳಿಗೆ ಸೋಂಕು
ಇದುವರೆಗೆ 2 ವರ್ಷದವರೆಗಿನ 197 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದರೆ, ಮೂರರಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ 1253 ಮಕ್ಕಳಿಗೆ ಮಹಾಮಾರಿ ಹೆಗಲೇರಿದೆ. ಅಷ್ಟೇ ಅಲ್ಲ, 11ರಿಂದ 18 ವರ್ಷದೊಳಗಿನ ಮಕ್ಕಳಿಗೆ 2159 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರ, ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಸೋಂಕು ಹರಡುತ್ತಿರುವುದಕ್ಕೆ ಅವರ ಪೋಷಕರೇ ನೇರ ಕಾರಣ ಎನ್ನುತ್ತಾರೆ. ಮಕ್ಕಳಿಗೆ ಹರಡುತ್ತಿರೋದು ಪೋಷಕರಿಂದಲೇ ಹೊರತು ಹೊರಗಿನವರ ಸಂಪರ್ಕದಿಂದಲ್ಲ ಎಂದು ಅವರು ಹೇಳಿದರು.
ತಮ್ಮ ಮಕ್ಕಳಿಗೂ ಸೋಂಕು ಅಂಟಿಸುತ್ತಿದ್ದಾರೆ
ಪೋಷಕರು ಹೊರಗೆ ಓಡಾಡಿ ಬಂದು ತಾವು ಸೋಂಕು ಅಂಟಿಸಿಕೊಂಡು ತಮ್ಮ ಮಕ್ಕಳಿಗೂ ಅಂಟಿಸುತ್ತಿದ್ದಾರೆ ಎಂದರು. ಹೊರಗಿನಿಂದ ಮನೆಗೆ ಪ್ರವೇಶ ಮಾಡಿದಾಗ ಮೊದಲು ಕೈ ಮುಖ ತೊಳೆದುಕೊಂಡು ನಂತರ ಇತರರನ್ನು ಸ್ಪರ್ಶಿಸಿದರೆ ಸೋಂಕು ಹರಡುವಿಕೆ ಕಡಿಮೆ ಆಗುತ್ತದೆ ಎಂದೂ ಅವರು ಹೇಳಿದರು.
ಪೋಷಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ""ಇಷ್ಟು ಸಂಖ್ಯೆಯಲ್ಲಿ ಮಕ್ಕಳಿಗೆ ಹರಡಿರುವುದರಿಂದ ಇನ್ಮುಂದೆ ಮಕ್ಕಳನ್ನು ಹೊರಗೆ ಬಿಡದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಯಾವೆಲ್ಲಾ ಗ್ರಾಮಗಳಲ್ಲಿ ಮಕ್ಕಳಿಗೆ ಹೆಚ್ಚು ಕೋವಿಡ್ ಸೋಂಕು ತಗುಲಿದೆಯೋ ಅಲ್ಲಿ ವಿಶೇಷ ಕಾಳಜಿ ವಹಿಸುವುದರ ಜತೆಗೆ ಮಕ್ಕಳನ್ನು ಹೊರಗೆ ಕಳಿಸದಿರಲು ಪೋಷಕರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಿದ್ದಾರೆ'' ಎಂದರು.
Recommended Video