ಶುಕ್ರವಾರ ಕೊಡಗು ಜಿಲ್ಲಾದ್ಯಂತ ನಿಷೇದಾಜ್ಞೆ
ಮಡಿಕೇರಿ, ಡಿಸೆಂಬರ್ 5: ಅಯೋಧ್ಯೆ ರಾಮಜನ್ಮ ಭೂಮಿ ವಿವಾದಕ್ಕೆ ಕೋರ್ಟ್ ತೆರೆ ಎಳೆದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈ ತೀರ್ಪನ್ನು ದೇಶದ ಜನ ಶಾಂತಿಯುತವಾಗಿ ಸ್ವಾಗತಿಸಿದ್ದಾರೆ. ಆದರೆ ಡಿಸೆಂಬರ್ 6 ಬಂದಾಕ್ಷಣ ಬಾಬ್ರಿ ಮಸೀದಿ ಧ್ವಂಸ ಪ್ರಕರಣವೂ ಕಣ್ಣ ಮುಂದೆ ಬರುತ್ತದೆ.
ಬಾಬ್ರಿ ಮಸೀದಿ ಧ್ವಂಸವಾಗಿ ಇದೇ ಡಿ.6ಕ್ಕೆ 27 ವರ್ಷ. ಆದ್ದರಿಂದ ಶುಕ್ರವಾರ ಮಡಿಕೇರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ. ಶುಕ್ರವಾರ ಕೊಡಗು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಆದೇಶ ಹೊರಡಿಸಿದ್ದಾರೆ. ನಗರದ ಜನತೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಅಯೋಧ್ಯೆ ರಾಮಮಂದಿರ ಕಟ್ಟುಕಥೆ; ಪ್ರಚೋದನಾಕಾರಿ ಭಿತ್ತಿ ಪತ್ರ ಕಂಡಿದ್ದೆಲ್ಲಿ?
ಕೊಡಗಿನಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೊಡಗು ಮೊದಲೇ ಮತೀಯವಾಗಿ ಸೂಕ್ಷ್ಮ ಜಿಲ್ಲೆಯಾದ್ದರಿಂದ ಶಾಂತಿ ಕಾಪಾಡಲು ಎರಡೂ ಕೋಮಿನ ಸದಸ್ಯರು ಕರಾಳ ದಿನ ಹಾಗೂ ವಿಜಯೋತ್ಸವ ಆಚರಿಸದಂತೆ ಕೊಡಗು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.