ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು
ಮಡಿಕೇರಿ, ಮೇ 22 : ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಕೊಡಗು ಜಿಲ್ಲೆಯಲ್ಲಿ 13 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಲಾಗಿದೆ. ಕಳೆದ ವರ್ಷ ಮಳೆ, ಭೂ ಕುಸಿತದಿಂದಾಗಿ ಜಿಲ್ಲೆಯಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿತ್ತು.
ಕಳೆದ ವರ್ಷದ ದುರಂತದ ಬಳಿಕ ಜಿಲ್ಲೆಯಲ್ಲಿ ವಿಸ್ತ್ರೃತ ಅಧ್ಯಯನ ನಡೆಸಿದ್ದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ ಜಿಲ್ಲಾಡಳಿತಕ್ಕೆ ಮಧ್ಯಂತರ ವರದಿ ನೀಡಿದೆ. ಈ ವರದಿಯ ಅನ್ವಯ 13 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಲಾಗಿದೆ.
ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು
ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ ಜಿಲ್ಲೆಯ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧ್ಯಯನ ನಡೆಸಿತ್ತು. ಈ ಕುರಿತ ವರದಿಯನ್ನು ಕೊಡಗು ಜಿಲ್ಲಾಡಳಿತಕ್ಕೆ ಸಲ್ಲಿಕೆ ಮಾಡಿದೆ.
ಮಳೆಗಾಲ : ಕೊಡಗು ಜಿಲ್ಲೆಗೆ ಎನ್ಡಿಆರ್ಎಫ್ ತಂಡ ನಿಯೋಜನೆ
ಕೊಡಗು ಜಿಲ್ಲಾಡಳಿತ ಪ್ರಕೃತಿ ವಿಕೋಪ ಸೂಕ್ಷ್ಮ ಪ್ರದೇಶಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ, ಸೂಕ್ಷ್ಮ ಪ್ರದೇಶದ ಮನೆಗಳಿಗೆ ಗ್ರಾಮ ಲೆಕ್ಕಿಗರು ಹಾಗೂ ಪಿಡಿಓ ಜೊತೆ ಭೇಟಿ ನೀಡಿ ಕುಟುಂಬಗಳ ವಿವರ ಸಂಗ್ರಹಿಸಿದ್ದಾರೆ. ಪ್ರಕೃತಿ ವಿಕೋಪ ಎದುರಾದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರೊಂದಿಗೆ ಚರ್ಚೆ ನಡೆಸಿದ್ದಾರೆ.
ಮಡಿಕೇರಿಯ ನೆಹರು ಮಂಟಪಕ್ಕೆ ಮತ್ತೆ ಬಂತು ಜೀವ ಕಳೆ
ಭೂ ಕುಸಿತ ಉಂಟಾಗಬಹುದು
2019ರಲ್ಲಿಯೂ 13 ಸ್ಥಳಗಳಲ್ಲಿ ಭೂ ಕುಸಿತ ಉಂಟಾಗಬಹುದು ಎಂದು ಎಚ್ಚರಿಕೆ ರವಾನೆ ಮಾಡಲಾಗಿದೆ. ಜಿಲ್ಲಾಡಳಿತ ಸೂಕ್ಷ್ಮ ಪ್ರದೇಶಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಈ ಪ್ರದೇಶದಲ್ಲಿರುವ ಕುಟುಂಬಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಲಿದ್ದಾರೆ. ಪ್ರಕೃತಿ ವಿಕೋಪ ಉಂಟಾದರೆ ರಕ್ಷಣೆಗಾಗಿ ಅಗ್ನಿಶಾಮಕ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಪಾಯಕಾರಿ ಪ್ರದೇಶಗಳು
ಮಡಿಕೇರಿ ಮತ್ತು ಸೋಮವಾರ ಪೇಟೆ ತಾಲೂಕಿನ 13 ಸ್ಥಳಗಳನ್ನು ಅಪಾಯಕಾರಿ ಪಟ್ಟಿಯಲ್ಲಿ ಸೇರಿಸಲಾಗಿದೆ. ನಿಡುವಟ್ಟು, ಬಾರಿಬೆಳಚ್ಚು, ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ, ಬಾಡಿಗೇರಿ, ಮುಕ್ಕೊಡ್ಲು ಮೇಘತ್ತಾಳು, ಮಕ್ಕಂದೂರು, ಉದಯಗಿರಿ, ಕಾಟಕೇರಿ, ಮದೆ, 2ನೇ ಮೊಣ್ಣಂಗೇರಿ, ಜೋಡುಪಾಲ
ಬಾಡಿಗೆ ಮನೆಗಳಿಗೆ ಸ್ಥಳಾಂತರ
2ನೇ ಮೊಣ್ಣಂಗೇರಿ, ಕರ್ತೋಜಿ, ರಾಮಕೊಲ್ಲಿ, ಜೋಡುಪಾಲ, ಮದೆ ಮುಂತಾದ ಪ್ರದೇಶಗಳಲ್ಲಿನ ಕುಟುಂಬಗಳು ಜೂನ್, ಜುಲೈ ಮತ್ತು ಆಗಸ್ಟ್ ಮೂರು ತಿಂಗಳ ಕಾಲ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಬಯಸಿದ್ದಾರೆ. ಕುಟುಂಬಗಳು ಬಾಡಿಗೆ ಮನೆಗೆ ಹೋದರೆ ಜಿಲ್ಲಾಡಳಿತದಿಂದ ಬಾಡಿಗೆ ಪಾವತಿ ಮಾಡಲು ಚಿಂತನೆ ನಡೆಸಲಾಗಿದೆ.
ಜಿಲ್ಲಾಧಿಕಾರಿಗಳ ಭೇಟಿ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 'ಕೆಲವು ಮನೆಗಳಿಗೆ ಹಾನಿಯಾಗದಿದ್ದರೂ ಈ ವರ್ಷವೂ ಸಮಸ್ಯೆ ಎದುರಾಗಬಹುದು. ಬೆಟ್ಟದಲ್ಲಿನ ಮಣ್ಣು ಸಡಿಲಗೊಂಡಿದ್ದು, ಗ್ರಾಮಸ್ಥರು ಸಹ ಆತಂಕ ತೋಡಿಕೊಂಡಿದ್ದಾರೆ' ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ ತರಬೇತಿ
ಪ್ರಕೃತಿ ವಿಕೋಪ ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು 60 ಮಂದಿ ಪೊಲೀಸರ 4 ತಂಡಗಳನ್ನು ರಚನೆ ಮಾಡಲಾಗಿದೆ. ವಿಪತ್ತು ಸಂಭವಿಸಿದರೆ ಜನರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಬೆಂಗಳೂರಿನ ಟೀಂ ಸೃಷ್ಟಿ ಅಡ್ವೆಂಚರ್ಸ್, ಪುಣೆಯ ಆರ್ಟಿ ಜಿಯೋ ಸಮಿತಿಯ ಸದಸ್ಯರು ಪೊಲೀಸರಿಗೆ ತರಬೇತಿ ನೀಡಿದ್ದಾರೆ.