ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ 1000 ಕೋಟಿ ಅನುದಾನ
ಮಡಿಕೇರಿ, ಫೆಬ್ರವರಿ 17; ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಬಾರಿಯ ಬಜೆಟ್ನಲ್ಲಿ ರೈಲು ಯೋಜನೆಗೆ 1000 ಕೋಟಿ ರೂ. ಅನುದಾನ ನೀಡಲಾಗಿದೆ.
ಮೈಸೂರು-ಕುಶಾಲನಗರ ನೂತನ 87.2 ಕಿ. ಮೀ. ಮಾರ್ಗ ನಿರ್ಮಾಣಕ್ಕೆ 1,854.62 ಕೋಟಿ ರೂ. ವೆಚ್ಚವಾಗಲಿದೆ ಎಂದು 2019ರ ಫೆಬ್ರವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಂದಾಜಿಸಲಾಗಿತ್ತು.
ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಸರ್ವೆ; ಡಿಪಿಆರ್ಗೆ ಕೇಂದ್ರ ಸಮ್ಮತಿ
ಪ್ರತಿ ಕಿಲೋಮೀಟರ್ ಮಾರ್ಗ ನಿರ್ಮಾಣಕ್ಕೆ 21.27 ಕೋಟಿ ಬೇಕು ಎಂದು ಅಂದಾಜಿಸಲಾಗಿದೆ. 274.65 ಹೆಕ್ಟೇರ್ ಒಣಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು
ಈ ನೂತನ ರೈಲು ಮಾರ್ಗ ನಿರ್ಮಾಣಗೊಂಡರೆ ಕೊಡಗು ಜಿಲ್ಲೆಗೆ ರೈಲು ಸಂಪರ್ಕ ದೊರಕಿದಂತೆ ಆಗುತ್ತದೆ. ರೈಲು ಮಾರ್ಗದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಬೈಲುಕುಪ್ಪೆ ಹಾಗೂ ಕುಶಾಲನಗರ ಜನರಿಗೆ ಅನುಕೂಲವಾಗಲಿದೆ.
ದೇಶದಲ್ಲೇ ಮೊದಲು: ಮೈಸೂರಲ್ಲಿ ತಯಾರಾದ ಹೈಸ್ಪೀಡ್ ರೈಲು ಚಕ್ರ
ರೈಲು ಮಾರ್ಗಕ್ಕೆ ವಿರೋಧ; ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ರೈಲು ಮಾರ್ಗ ನಿರ್ಮಾಣದಿಂದ ಕೊಡಗಿನಲ್ಲಿ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು.
ಮೈಸೂರಿನಿಂದ ಕೊಡಗು ಜಿಲ್ಲೆಯ ಕುಶಾಲನಗರದ ತನಕ ರೈಲು ಮಾರ್ಗ ನಡೆಸಲು ಸಮೀಕ್ಷೆ ನಡೆಸಲಾಗಿತ್ತು. ಆದರೆ ಈ ಮಾರ್ಗ ಲಾಭದಾಯಕವಲ್ಲ ಎಂದು ಅದನ್ನು ಕೈ ಬಿಡಲಾಗಿತ್ತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೈಲು ಮಾರ್ಗ ನಿರ್ಮಾಣಕ್ಕೆ ಪುನಃ ರೈಲ್ವೆ ಸಚಿವರಿಗೆ ಮನವಿ ಸಲ್ಲಿಕೆ ಮಾಡಿದ್ದರು.
ಪಿಯೂಷ್ ಗೋಯೆಲ್ ರೈಲು ಸಚಿವರಾಗಿದ್ದಾಗ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. 2022-23ರ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಯೋಜನೆಗೆ 1000 ಕೋಟಿ ರೂ. ಅನುದಾನ ನೀಡಿದ್ದಾರೆ.
ಈ ಹಿಂದೆ ನಡೆದ ಸಮೀಕ್ಷೆಯಂತೆ ಮೈಸೂರು-ಕುಶಾಲನಗರ ನಡುವೆ ಬೆಳಗೊಳ (ಮೈಸೂರು), ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು, ಸತ್ತೇಗಾಲ, ಪಿರಿಯಾಪಟ್ಟಣ, ದೊಡ್ಡ ಹೊನ್ನೂರು ಮಾರ್ಗವಾಗಿ ರೈಲು ಸಂಚಾರ ನಡೆಸಬೇಕಿದೆ. ಪಿರಿಯಾಪಟ್ಟಣ ತಾಲೂಕಿನ ಗಡಿಗ್ರಾಮವಾದ ಕೊಪ್ಪ ಕೊನೆಯ ನಿಲ್ದಾಣವಾಗಿದೆ.
ಕೊಪ್ಪ ಗ್ರಾಮದ ಗಡಿಯಲ್ಲಿ ಕಾವೇರಿ ನದಿ ಹರಿಯುತ್ತದೆ. ಸೇತುವೆ ಆಚೆಗೆ ಕುಶಾಲನಗರವಿದೆ. ಕೊಡಗು ಜಿಲ್ಲೆಗೆ ರೈಲು ಮಾರ್ಗ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದ್ದರಿಂದ ಶೀಘ್ರವೇ ಭೂ ಸ್ವಾಧೀನ ಕಾರ್ಯ ಆರಂಭವಾಗುವ ನಿರೀಕ್ಷೆ ಇದೆ.
ಈ ರೈಲು ಮಾರ್ಗದಿಂದ ಮೈಸೂರು ಮತ್ತು ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುತ್ತಾರೆ. ಆದರೆ ಇಷ್ಟು ದಿನ ರೈಲು ಸಂಪರ್ಕವಿಲ್ಲದ ಕಾರಣ ಪ್ರವಾಸಿಗರಿಗೆ ನಿರಾಸೆಯಾಗಿತ್ತು.
ಹೈಕೋರ್ಟ್ಗೆ ಅರ್ಜಿ; ಮೈಸೂರು-ಕುಶಾಲನಗರ ರೈಲು ಮಾರ್ಗಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಕೊಡಗು ಮೂಲದ ಸಿ. ಪಿ. ಮುತ್ತಣ್ಣ ಕರ್ನಾಟಕ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಮಾಡಿದ್ದರು.
Recommended Video
ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ. ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ರೈಲು ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಗೊಳಿತ್ತು.
ಪ್ರಸ್ತಾವಿತ ರೈಲು ಮಾರ್ಗದಿಂದ ನೂರಾರು ಎಕರೆ ಅರಣ್ಯ ನಾಶವಾಗಲಿದೆ. ಕುಶಾಲನಗರದಲ್ಲಿ ಆನೆ ಕಾರಿಡಾರ್ ಸಹ ಇದೆ. ಆನೆ ಕಾರಿಡಾರ್ನಲ್ಲಿ ಅಭಿವೃದ್ದಿ ಯೋಜನೆ ಕೈಗೊಳ್ಳುವ ಮೊದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಮತ್ತು ಪರಿಸರ ಇಲಾಖೆ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.