ಯೋಗಿ, ಸಾವಂತ್, ಸಿಂಗ್ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ
ಲಕ್ನೋ ಮಾರ್ಚ್ 17: ಪಂಚರಾಜ್ಯ ಚುನಾವಣೆ ಬಳಿಕ ಸಿಎಂ ಆಯ್ಕೆ ಪ್ರಕ್ರಿಯೆ ಆಯಾ ರಾಜ್ಯದಲ್ಲಿ ಚುರುಕುಗೊಂಡಿದೆ. ಸಿಎಂ ರೇಸ್ನಲ್ಲಿ ಹಲವರಿದ್ದರೂ ಈ ಬಾರಿ ಉತ್ತರಪ್ರದೇಶ, ಗೋವಾ ಮತ್ತು ಮಣಿಪುರದ ಹಾಲಿ ಮುಖ್ಯಮಂತ್ರಿಗಳನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಖತಿಮಾದಲ್ಲಿ ಸೋತ ಪುಷ್ಕರ್ ಧಾಮಿ ಅವರ ಭವಿಷ್ಯದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆದರೆ ಶೀರ್ಘದಲ್ಲೇ ಧಾಮಿಗೆ ಕರೆ ಬರುವ ಸಾಧ್ಯತೆ ಇದೆ.
ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಗೋವಾ ಮತ್ತು ಮಣಿಪುರದಲ್ಲಿ ಸಿಎಂ ಹುದ್ದೆಗೆ ಕೆಲವು ಸ್ಪರ್ಧಿಗಳು ಇದ್ದರು, ಆದರೆ ಪಕ್ಷವು ಹಾಲಿ ಸಿಎಂಗಳಿಗೆ ಮಣೆ ಹಾಕಲಿದೆ ಎಂದು ಪಕ್ಷದ ಮೂಲಗಳು ಒನ್ಇಂಡಿಯಾಗೆ ತಿಳಿಸಿವೆ. ಉತ್ತರ ಪ್ರದೇಶದ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಅವರು ಸಿಎಂ ಆಗಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಈ ಬಾರಿ ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಜನ ಮನಗೆಲ್ಲುವಲ್ಲಿ ಅಧಿಕ ಕೆಲಸಗಳನ್ನು ಮಾಡಿದ್ದಾರೆ. ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಸಿಎಂ ಯೋಗಿ, ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ವ್ಯಕ್ತಿ ಬಂಧನ
ಗೋವಾ ಮತ್ತು ಮಣಿಪುರದಲ್ಲಿ ಹಂಗಾಮಿ ಸಿಎಂ ಆಗಿರುವ ಪ್ರಮೋದ್ ಸಾವಂತ್ ಮತ್ತು ಬಿರೇನ್ ಸಿಂಗ್ ಇಬ್ಬರೂ ಬುಧವಾರ ದೆಹಲಿ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಮತ್ತೊಂದೆಡೆ ಧಾಮಿ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಮಾರ್ಚ್ 20ರ ನಂತರವೇ ಈ ರಾಜ್ಯಗಳಲ್ಲಿ ಸರ್ಕಾರ ರಚನೆಯಾಗಲಿದೆ. ಇನ್ನೊಂದೆಡೆ ಉತ್ತರಾಖಂಡದ ಹಲವು ಸಂಸದರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ್ದಾರೆ. ಉತ್ತರಾಖಂಡದ ಸಿಎಂ ಯಾರಾಗುತ್ತಾರೆ ಎಂಬುದರ ಕುರಿತು ಈ ವಾರದಲ್ಲಿ ಮಾಹಿತಿ ಸಿಗಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ಯೋಗಿ
ಉತ್ತರಪ್ರದೇಶದಲ್ಲಿ ಕಳೆದ 37 ವರ್ಷಗಳಲ್ಲಿ ಯಾವುದೇ ಸರ್ಕಾರ ಸಾಧಿಸದ ಐತಿಹಾಸಿಕ ಸಾಧನೆಯನ್ನು ಈ ಬಾರಿ ಬಿಜೆಪಿ ಮಾಡಿದೆ. ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ. ಬಿಜೆಪಿಯ ಈ ಗೆಲುವಿನ ಹಿಂದೆ ಕಳೆದ ಎರಡು ವರ್ಷಗಳಿಂದ ನೀಡಿದ ಉಚಿತ ಪಡಿತರ ಮತ್ತು ಹಿಂದೆ ಕ್ರೋಢೀಕರಿಸಿದ ಮಹಿಳಾ ಮತದಾರರು ಜೊತೆಗೆ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮಹಿಳಾ ಮತದಾರರೇ ಕಾರಣ ಎನ್ನಲಾಗುತ್ತಿದೆ. ಹೆಚ್ಚಿನ ಶೇಕಡಾವಾರು ಮಹಿಳಾ ಮತದಾರರು ಪಡಿತರವನ್ನು ಕಳುಹಿಸಿದ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಇದರ ಮುಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೀಡಿದ ಉಚಿತ ವಿದ್ಯುತ್ ಭರವಸೆ ಕೂಡ ಮಹಿಳಾ ಮತದಾರರನ್ನು ಎಸ್ಪಿ ಪಾಳೆಯಕ್ಕೆ ಸೆಳೆಯಲು ಸಾಧ್ಯವಾಗಲಿಲ್ಲ.
ಮಾರ್ಚ್ 10ರಂದು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯುಪಿಯ 403 ವಿಧಾನಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202 ಆಗಿತ್ತು. ಇದರಲ್ಲಿ ಬಿಜೆಪಿ 255 ಸ್ಥಾನಗಳನ್ನು ಪಡೆದು ಯುಪಿಯಲ್ಲಿ ಮತ್ತೆ ಕಮಲವನ್ನು ಅರಳಿಸಿದೆ. ಜೊತೆಗೆ ಸಮಾಜವಾದಿ ಪಕ್ಷ ಒಟ್ಟು 111 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದು ಹೀನಾಯ ಸೋಲು ಕಂಡಿದೆ. ಇನ್ನೂ ಇತರೆ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳನ್ನು ಮಾತ್ರ ಪಡೆದುಕೊಂಡಿವೆ. ಈ ಬಾರಿ ಎಸ್ಪಿಗೆ ಕಾಂಗ್ರೆಸ್ ಹಾಗೂ ಬಿಎಸ್ಪಿ ಮತಗಳು ಸಿಕ್ಕಿವೆ ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಇನ್ನೂ ಮೊದಲಬಾರಿಗೆ ಸ್ಪರ್ಧಿಸಿದ ಗೋರಖ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ ಹಾಗೂ ಕರ್ಹಾಲ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೆಶ್ ಯಾದವ್ ಬಹುಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.
ಇನ್ನೂ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 11, ಎಎಪಿ 2, ಎಂಜಿಪಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಆರ್ಜಿಪಿ 1 ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 21 ಸಿಕ್ಕಿಲ್ಲ.ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷೇತರರು ಮತ್ತು ಎಂಜಿಪಿ ಪಕ್ಷದ ನೆರವಿನಿಂದ ಸರ್ಕಾರ ರಚನೆ ಮಾಡುವುದಾಗಿ ಹೇಳಿದೆ.
ಜೊತೆಗೆ ರಾಜ್ಯದ ಮುಖ್ಯಮಂತ್ರಿ ಬಿರೆನ್ ಸಿಂಗ್ ಅವರು ಹೈಂಗಾಗ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಒಟ್ಟು 60 ಕ್ಷೇತ್ರಗಳ ಮಣಿಪುರದಲ್ಲಿ ಆಡಳಿತ ನಡೆಸಲು 31 ಕ್ಷೇತ್ರಗಳ ಅಗತ್ಯವಿತ್ತು. ಬಿಜೆಪಿ ರಾಜ್ಯದಲ್ಲಿ 32 ಕ್ಷೇತ್ರಗಳನ್ನು ಗೆದ್ದುಕೊಂಡು ಸರಳ ಬಹುಮತವನ್ನು ಪಡೆದುಕೊಂಡಿದೆ. ಈ ಹಿಂದಿನ ಅತ್ಯಂತ ದೊಡ್ಡ ಪಕ್ಷವಾದ ಕಾಂಗ್ರೆಸ್ 5 ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿದ್ದು, ಹೀನಾಯ ಸೋಲನ್ನು ಅನುಭವಿಸಿದೆ.