ಯುಪಿ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಯೋಗಿ ಸರ್ಕಾರ
ಲಕ್ನೋ ಮೇ 12: ಉತ್ತರ ಪ್ರದೇಶದ ಮದರಸಾಗಳಲ್ಲಿ ದಿನದ ಅಧ್ಯಯನ ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿಯು ಮದರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡುವಂತೆ ಆದೇಶವನ್ನು ಹೊರಡಿಸಿದೆ.
ಮಾರ್ಚ್ನಲ್ಲಿ ಉತ್ತರ ಪ್ರದೇಶದ ಎಲ್ಲಾ ಮದರಸಾಗಳು ತರಗತಿ ಆರಂಭಕ್ಕೂ ಮುನ್ನ ಬೆಳಗ್ಗೆ ಪ್ರಾರ್ಥನೆಯೊಂದಿಗೆ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಪಠಿಸುವಂತೆ ಮದರಸಾ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು. ಆದರೆ ಸರ್ಕಾರ ಇದನ್ನು ಕಡ್ಡಾಯಗೊಳಿಸಿರಲಿಲ್ಲ. ಆದರೀಗ ಸರ್ಕಾರ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಗೊಳಿಸಿದೆ.
ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. 2017ರಲ್ಲಿ ಮಂಡಳಿಯು ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಮತ್ತು ರಾಷ್ಟ್ರ ಧ್ವಜಾರೋಹಣವನ್ನು ಕಡ್ಡಾಯಗೊಳಿಸಿದ ಸುಮಾರು ಐದು ವರ್ಷಗಳ ನಂತರ ಇದೀಗ ಜಾರಿಗೆ ಬಂದಿದೆ. ವಿವಿಧ ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ ಮತ್ತು ಮದರಸಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಲು ನಾವು ಇಚ್ಚಿಸುತ್ತೇವೆ. ಇದರಿಂದಾಗಿ ಅವರು ಧಾರ್ಮಿಕ ಅಧ್ಯಯನದ ಹೊರತಾಗಿಯೂ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿದುಕೊಳ್ಳುತ್ತಾರೆ. ಇದನ್ನು ಈಗಾಗಲೇ ಕೆಲವು ಮದರಸಾಗಳಲ್ಲಿ ಪಠಿಸಲಾಗಿದೆ. ಮುಂಬರುವ ಶೈಕ್ಷಣಿಕ ಅಧಿವೇಶನದಿಂದ ನಾವು ಈಗ ಅದನ್ನು ಕಡ್ಡಾಯಗೊಳಿಸಿದ್ದೇವೆ ಎಂದು ಅಧ್ಯಕ್ಷ ಇಫ್ತಿಕರ್ ಅಹ್ಮದ್ ಜಾವೇದ್ ಹೇಳಿದ್ದಾರೆ.
ಇಫ್ತಿಕಾರ್ ಅಹ್ಮದ್ ಜಾವೇದ್ ನೇತೃತ್ವದ ಸಭೆಯಲ್ಲಿ ಪರೀಕ್ಷೆಗಳು, ಹಾಜರಾತಿ ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಹಲವಾರು ಇತರ ನಿರ್ಧಾರಗಳನ್ನು ಮಂಡಳಿ ತೆಗೆದುಕೊಂಡಿತು. ಮದರಸಾ ಶಿಕ್ಷಕರಾಗಲು ಪೂರ್ವ ಅರ್ಹತೆಯಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರಾರಂಭಿಸಲು ಮಂಡಳಿ ನಿರ್ಧರಿಸಿದೆ.
ಇದರಲ್ಲಿ ಮೂಲ ಶಿಕ್ಷಣದ ಜೊತೆಗೆ 1 ರಿಂದ 8 ನೇ ತರಗತಿಯ ಪಠ್ಯಕ್ರಮದಲ್ಲಿ ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಅಂತೆಯೇ, ಮಾಧ್ಯಮಿಕ (ಮುನ್ಷಿ-ಮೌಲ್ವಿ) ನಲ್ಲಿ ಅರೇಬಿಕ್-ಪರ್ಷಿಯನ್ ಸಾಹಿತ್ಯದೊಂದಿಗೆ ದೀನಿಯಾತ್ ಸೇರಿದಂತೆ ಒಂದು ವಿಷಯವನ್ನು ಇರಿಸಲಾಗುತ್ತದೆ.