ಕಾಂಗ್ರೆಸ್ ಪಕ್ಷ 'ಭಯೋತ್ಪಾದನೆಯ ತಾಯಿ', ರಾಮನ ನಿಂದಿಸಿದ ಫಲ ಅನುಭವಿಸಲೇಬೇಕು ಎಂದ ಯೋಗಿ
ಲಕ್ನೋ, ಸೆಪ್ಟೆಂಬರ್ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ.
ಈ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿವೆ, ಹಾಗೆಯೇ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಸಂತ ಕಬೀರ್ ನಗರದಲ್ಲಿ 126 ಕೋಟಿ ವೆಚ್ಚದಲ್ಲಿ ನಿರ್ಮಾಣದ ಯೋಜನೆಯ ಅಡಿಯಲ್ಲಿ ಜಿಲ್ಲಾ ಕಾರಾಗೃಹದ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅನ್ನು ಭಯೋತ್ಪಾದನೆಯ ತಾಯಿ ಎಂದು ಕರೆದಿದ್ದಾರೆ.
ಉತ್ತರ ಪ್ರದೇಶ ಚುನಾವಣೆ 2022: ಕಾಂಗ್ರೆಸ್ಗೆ ಪ್ರಿಯಾಂಕಾ ನಾಯಕತ್ವ
ಕಾಂಗ್ರೆಸ್ ಪಕ್ಷ ದೇಶದಲ್ಲಿಯೇ ಭಯೋತ್ಪಾದನೆಯ ವಿಷಬೀಜ ಬಿತ್ತಿದ ಪಕ್ಷ ಎಂದು ಕಿಡಿಕಾರಿದ್ದಲ್ಲೇ, 2022ರ ಚುನಾವಣೆಯ ನಂತರ ಕಾಂಗ್ರೆಸ್ ನಿರ್ನಾಮವಾಗಿ ಹೋಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಗೆಲ್ಲುವುದು ಕೂಡ ಅನುಮಾನ ಎಂದಿದ್ದಾರೆ.
ಭಗವಾನ್ ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು ಮತ್ತು ತಾಲಿಬಾನಿಗಳನ್ನು ತಮ್ಮ ಜಾತೀಯತೆ ಮತ್ತು ರಾಜವಂಶದ ಮನಸ್ಥಿತಿಯಿಂದ ಬೆಂಬಲಿಸುವವರನ್ನು ರಾಜ್ಯದ ಜನರು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಏನು ಕೊರತೆ ಇತ್ತು, ನಿರುದ್ಯೋಗ?, ಮಾಫಿಯಾ ಆಡಳಿತ ಮತ್ತು ಭ್ರಷ್ಟಾಚಾರವನ್ನು ಹೊರತುಪಡಿಸಿ ಕಾಂಗ್ರೆಸ್, ಎಸ್ಪಿ ಹಾಗೂ ಬಿಎಸ್ಪಿ ಏನು ನೀಡಿದೆ ಎಂದು ಪ್ರಶ್ನಿಸಿದರು.
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ವಿರುದ್ಧವೂ ಕೂಡ ಅವರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರದಲ್ಲಿದ್ದಾಗ ರಾಜ್ಯದ ಜನರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಜನರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಕೂಡ ಮಾಡಿಲ್ಲ ಎಂದರು.
ರಾಮನ ಭಕ್ತರಿಗೆ ಅವಮಾನ ಮಾಡುವವರನ್ನು ಜನರು ಒಪ್ಪಿಕೊಳ್ಳಲೇಬಾರು. ಚೇಳು ಎಲ್ಲಿದ್ದರೂ ಅದು ಕಚ್ಚುತ್ತದೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು. ನಮ್ಮ ಪ್ರಧಾನಮಂತ್ರಿಯವರು ದೇಶದಲ್ಲಿದ್ದ ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ನ್ನು ರದ್ದುಗೊಳಿಸಿದರು. ಅದೇ ಸಮಾಜವಾದಿ ಪಕ್ಷದ ನಾಯಕರು, ತಾಲಿಬಾನ್ ಆಡಳಿತ ಬೆಂಬಲಿಸಿ ಹೇಳಿಕೆ ನೀಡುತ್ತಾರೆ.
2012ರಲ್ಲಿ ಅಂದಿದ್ದ ಎಸ್ಪಿ ಸರ್ಕಾರ ಭಯೋತ್ಪಾದಕರ ವಿರುದ್ಧ ಇದ್ದ ಪ್ರಕರಣಗಳನ್ನೆಲ್ಲ ಹಿಂಪಡೆದಿದೆ ಎಂದು ಯೋಗಿ ಆದಿತ್ಯನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ನೆಹರೂ ಅವರಿಗೆ ಶ್ರೀರಾಮನಲ್ಲಿ ನಂಬಿಕೆ ಇರಲಿಲ್ಲ. ಇಂದಿರಾಗಾಂಧಿಯವರು ಸಾಧು-ಸಂತರ ಮೇಲೆಯೇ ಗುಂಡಿನ ದಾಳಿ ನಡೆಯುವಂತೆ ಮಾಡಿದರು. ಸೋನಿಯಾ ಗಾಂಧಿಯವರು ರಾಮ ಇದ್ದಾನೆ ಎಂಬುದನ್ನೇ ಒಪ್ಪಲಿಲ್ಲ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಇದ್ದಾಗ ಅವು ಕೊಟ್ಟಿದ್ದೇನು? ಬರೀ ಕಾಯಿಲೆಗಳು, ನಿರುದ್ಯೋಗ, ಮಾಫಿಯಾ ರಾಜ್ಯ ಮತ್ತು ಭ್ರಷ್ಟಾಚಾರಗಳನ್ನೇ ಕೊಟ್ಟಿದ್ದಾರೆ. 2017ಕ್ಕಿಂತಲೂ ಮೊದಲು ಎಲ್ಲರಿಗೂ ರೇಶನ್ ಸಿಗುತ್ತಿತ್ತಾ? ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಓಲೈಕೆ ರಾಜಕಾರಣಕ್ಕೆ ಅವಕಾಶವೇ ಇಲ್ಲ.
ಹಿಂದೆ ಯಾರು ಅಬ್ಬಾ ಜಾನ್ ಎನ್ನುತ್ತಿದ್ದರೋ ಅವರಿಗೆ ಮಾತ್ರ ರೇಶನ್ ಸಿಗುತ್ತಿತ್ತು. ಬಡವರ ಪಡಿತರ ಎಲ್ಲ ಅವರೇ ನುಂಗುತ್ತಿದ್ದರು ಎಂದು ಯೋಗಿ ವಾಗ್ದಾಳಿ ನಡೆಸಿದ್ದಾರೆ. ಈ ರಾಜ್ಯದ ಜನರು, ತಾಲಿಬಾನಿಗಳ ಪರ ಇರುವವರನ್ನು, ವಂಶ ರಾಜಕಾರಣವನ್ನು, ಜಾತಿ ಆಧಾರಿತವಾಗಿ ಇರುವವರನ್ನು ತಿರಸ್ಕರಿಸಬೇಕು ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ಉಗ್ರವಾದದ ತಾಯಿ..ಅಷ್ಟೇ ಅಲ್ಲ ಹಲವು ಮಾಫಿಯಾಗಳಿಗೆ ಆಶ್ರಯವನ್ನು ಕೊಟ್ಟಿದೆ. ಶ್ರೀರಾಮನ ಮೇಲಿನ ನಂಬಿಕೆಯನ್ನೇ ಆ ಪಕ್ಷ ಅವಮಾನಿಸಿದೆ. ಅದಕ್ಕೆ ವಿರುದ್ಧವಾಗಿ ಬಿಜೆಪಿ ಇದೆ. ನಾಗರಿಕರ ಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ. ಶ್ರೀರಾಮನ ಭವ್ಯ ದೇಗುಲ ನಿರ್ಮಾಣಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಈ ಮಾಫಿಯಾಗಳನ್ನೆಲ್ಲ ಹತ್ತಿಕ್ಕಿ, ಅವರು ಯಾವ ಸ್ಥಳಕ್ಕೆ ಹೋಗಬೇಕೋ ಅಲ್ಲಿಗೇ ಕಳಿಸುತ್ತೇವೆ ಎಂದು ಹೇಳಿದ್ದಾರೆ.
ಭಗವಾನ್ ರಾಮನನ್ನು ನಿಂದಿಸಿದ್ದು, ರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಫಲವನ್ನು ಕಾಂಗ್ರೆಸ್ ಅನುಭವಿಸಲಿದೆ ಎಂದು ಹೇಳಿದರು.
ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸ್ಪರ್ಧೆ ನಡೆಸಲಿದೆ ಎಂದು ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ ಆದರೆ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಸಲ್ಮಾನ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.
ಚುನಾವಣೆ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ ಸಲ್ಮಾನ್, ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ತಜ್ಞರ ಶಿಫಾರಸಿನ ಮೇರೆಗೆ ತಯಾರಿಸಲಾಗುವುದಿಲ್ಲ. ಇದು ಸ್ಥಳೀಯ ಜನರ ಸಾಮಾನ್ಯ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಈ ಪ್ರಣಾಳಿಕೆ ತಮ್ಮದೇ ಎಂದು ಅವರು ಹೇಳಬಹುದು ಎಂದರು.
ಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧೆಯ ಕಾರಣದಿಂದ ರಂಗೇರಿರುವ ಭವಾನಿಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಣದಿಂದ ಹಿಂದೆ ಸರಿಯುವ ಮೂಲಕ ಕಾಂಗ್ರೆಸ್ ಮತ್ತೆ ಮೂಕಪ್ರೇಕ್ಷಕನಾಗುತ್ತಿದೆ.
ಮತ ವಿಭಜನೆಯಿಂದ ಮತ್ತೆ ಬಿಜೆಪಿ ಮೇಲುಗೈ ಆಗುವುದನ್ನು ತಪ್ಪಿಸುವ ಸಲುವಾಗಿ, ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿಯನ್ನು ಹಾಕದಿರಲು ಕಾಂಗ್ರೆಸ್ ನಿರ್ಧರಿಸಿದೆ.
ರಾಷ್ಟ್ರೀಯ ರಾಜಕಾರಣದಲ್ಲಿ ಇದು ಬಿಜೆಪಿ ವಿರೋಧಿ ನಡೆಯಾಗಿ ಕಾಣಿಸಿದರೂ ಪಶ್ಚಿಮ ಬಂಗಾಳದಲ್ಲಿ ಇದು ಕಾಂಗ್ರೆಸ್ನ ಅಸ್ತಿತ್ವಕ್ಕೆ ಮತ್ತೊಂದು ಪೆಟ್ಟು ನೀಡುವ ಕ್ರಮವಾಗಿದೆ. ಈಗಾಗಲೇ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಆಗಿದೆ.
ಆದರೆ ಈ ಉಪಚುನಾವಣೆಯಿಂದ ಹಿಂದೆ ಸರಿಯುವ ನಡೆಯು ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕೆಡಿಸುವ ಕ್ರಮವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.