ಯೋಗಿ ಮುಂದಿನ ನಡೆ; ಭಿನ್ನಾಭಿಪ್ರಾಯ ವದಂತಿ ನಂತರ ಬಿಜೆಪಿ ಸಭೆ
ಲಖ್ನೋ, ಜೂನ್ 22: ಕೆಲವೇ ದಿನಗಳ ಹಿಂದೆ ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ವದಂತಿಗಳು ಕೇಳಿಬಂದಿದ್ದವು. ಈ ವದಂತಿ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಭೇಟಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಬೆಳವಣಿಗೆಗಳ ಬಿಸಿ ತಗ್ಗಿದ ನಂತರ ಮಂಗಳವಾರ ಯೋಗಿ ತಮ್ಮ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಭೇಟಿ ಬಳಿಕ ಪ್ರಧಾನಿ ಮೋದಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ ಆದಿತ್ಯನಾಥ್
ಕೇಶವ್ ಅವರ ಪುತ್ರನ ವಿವಾಹ ಕಾರ್ಯಕ್ರಮ ಈಚೆಗೆ ನೆರವೇರಿದ್ದು, ಅವರಿಗೆ ಶುಭಾಶಯ ಹೇಳಲು ಯೋಗಿ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಹಲವು ಬಿಜೆಪಿ ಸದಸ್ಯರೂ ಆಗಮಿಸಿದ್ದು, ಡಿಸಿಎಂ ದಿನೇಶ್ ಶರ್ಮಾ ಕೂಡ ಬಂದಿದ್ದರು. ಕಾರ್ಯಕ್ರಮದ ನಂತರ ಎಲ್ಲರೂ ಲಖ್ನೋದಲ್ಲಿನ ಬಿಜೆಪಿ ಕಚೇರಿಗೆ ತೆರಳಿ ಸಭೆ ನಡೆಸಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ತೆರೆಮರೆಯಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಭಿನ್ನಾಭಿಪ್ರಾಯ ಶಮನಮಾಡುವ ಪ್ರಯತ್ನಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಸಭೆಗೆ ದೆಹಲಿಯಿಂದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ರಾಧಾ ಮೋಹನ್ ಸಿಂಗ್ ಅವರೂ ಆಗಮಿಸಿದ್ದರು. ಬಿಜೆಪಿಯ 20 ಹಿರಿಯ ನಾಯಕರು ಸೇರಿದಂತೆ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕೂಡ ಸಭೆಯಲ್ಲಿದ್ದರು.
ದೆಹಲಿ ನಾಯಕರು ಲಖ್ನೋದಲ್ಲಿ ಮೂರು ದಿನಗಳ ಕಾಲ ತಂಗಲಿದ್ದು, ಬಿಜೆಪಿ ಸಂಘಟನೆ ಕುರಿತು ಚರ್ಚೆ ನಡೆಸಲಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಹಿನ್ನೆಡೆ ಅನುಭವಿಸಿತು ಎಂಬ ಆರೋಪಗಳು ಕೇಳಿಬಂದಿದ್ದವು. ಕೆಲ ಬಿಜೆಪಿ ಶಾಸಕರು ಹಾಗೂ ಸಂಸದರೇ ಸಾರ್ವಜನಿಕವಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಅಲ್ಲದೆ ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು.
ಹೀಗಾಗಿ ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಬಿಜೆಪಿಯ ನಾಯಕತ್ವ ಬದಲಾವಣೆಯ ಮಾತು ಕೇಳಿಬಂದಿದ್ದವು. ಆದರೆ ಯೋಗಿ ಕೊರೊನಾ ನಿರ್ವಹಣೆಯನ್ನು ಹೊಗಳುವ ಮೂಲಕ ಸಂತೋಷ್ ವಂದತಿಗೆ ತೆರೆ ಎಳೆದಿದ್ದರು. ಈ ಬೆಳವಣಿಗೆಗಳು ನಡೆದ ಹಲವು ದಿನಗಳ ನಂತರ ಬಿಜೆಪಿ ಸದಸ್ಯರು ಸಭೆ ಸೇರಿದ್ದಾರೆ.