ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಿದ ಯೋಗಿ ಸರ್ಕಾರ
ಲಕ್ನೋ, ಆಗಸ್ಟ್ 30: ಮಥುರಾದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಿದೆ.
ಮಥುರಾದಲ್ಲಿ ಕೃಷ್ಣೋತ್ಸವ 2021 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿರುವವರು ಮಥುರಾ ವೈಭವವನ್ನು ಮರುಕಳಿಸುವ ಸಲುವಾಗಿ ಹಾಲಿನ ಮಾರಾಟವನ್ನು ಆರಂಭಿಸಬಹುದು ಎಂದು ಸಲಹೆ ನೀಡಿದರು. ಹಾಲಿನ ಉತ್ಪಾದನೆ ಮೂಲಕ ಹೆಸರಾಗಿರುವ ಮಥುರಾದಲ್ಲಿ ಹಾಲಿನ ವ್ಯಾಪಾರ ಉತ್ತಮವಾದುದ್ದಾಗಿದೆ ಎಂದರು.
ನಿಷೇಧಕ್ಕೆ ಯೋಜನೆಗಳನ್ನು ರೂಪಿಸಬೇಕು ಹಾಗೂ ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಯಮುನಾ ದಡದಲ್ಲಿ ಬ್ರಿಜ್ ಭೂಮಿಯನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಹಾಗೂ ಅದಕ್ಕಾಗಿ ಯಾವುದೇ ಹಣದ ಕೊರತೆ ಇರುವುದಿಲ್ಲ.
ನಾವು ಈ ಪ್ರದೇಶದ ಅಭಿವೃದ್ಧಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಮಿಶ್ರಣವನ್ನು ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಈ ಹಿಂದೆ ದೇವಾಲಯಗಳಿಗೆ ಹೋಗಲು ಹೆದರುತ್ತಿದ್ದವರು ಇದೀಗ ಶ್ರೀರಾಮ ಮತ್ತು ಕೃಷ್ಣ ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ದೇವಾಲಯಗಳಿಗೆ ಹೋಗಲು ಅಂಜುತ್ತಿದ್ದವರು ಇದೀಗ ಶ್ರೀರಾಮ ನಮ್ಮವ, ಶ್ರೀಕೃಷ್ಣ ಕೂಡ ನಮ್ಮವ ಎಂದು ಹೇಳಿಕೊಳ್ಳುತ್ತಿದ್ದಾರೆ.
ಮಥುರಾದಲ್ಲಿ 90 ನಿಮಿಷ ಇದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಲೀಲಾ ಮೈದಾನಕ್ಕೆ ತೆರಳಿ ಕೃಷ್ಣೋತ್ಸವಕ್ಕೆ ಚಾಲನೆ ನೀಡಿದರು. ಅದಕ್ಕೂ ಮುನ್ನ ಶ್ರೀಕೃಷ್ಣ ಜನ್ಮಸ್ಥಾನದ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಯೋಗಿ, ಕೃಷ್ಣ ಜನ್ಮಾಷ್ಟಮಿಯಂದು ಇದೇ ಮೊದಲ ಬಾರಿಗೆ ಮಥುರಾಗೆ ಆಗಮಿಸಿದ್ದರು ಎಂಬುದು ವಿಶೇಷ.
Recommended Video
ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿ ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನವ ಭಾರತದಲ್ಲಿ ಇದು ಸಾಧ್ಯವಾಗಿದೆ ಎಂದು ಯೋಗಿ ಅಭಿಪ್ರಾಯಪಟ್ಟಿದ್ದಾರೆ.