ಯೋಗಿ 2.0 ಸಂಪುಟ; ಅಮಿತ್ ಶಾ ನಿವಾಸದಲ್ಲಿ ಮಹತ್ವದ ಸಭೆ
ಲಕ್ನೋ, ಮಾರ್ಚ್ 23; ಉತ್ತರ ಪ್ರದೇಶ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಯೋಗಿ ಆದಿತ್ಯನಾಥ್ 2.0 ಸಂಪುಟ ಸೇರುವವರು ಯಾರು? ಎಂಬುದು ಈಗ ಕುತೂಹಕ್ಕೆ ಕಾರಣವಾಗಿದೆ.
ಮಾರ್ಚ್ 25ರಂದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅಂದು ಕೆಲವು ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಸಿಎಂ ಆಗುವ ಮುನ್ನವೇ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ ಆದಿತ್ಯನಾಥ್
ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯ ನಿವಾಸದಲ್ಲಿ ಉತ್ತರ ಪ್ರದೇಶದ ಸಂಪುಟ ರಚನೆ ಬಗ್ಗೆ ಮಹತ್ವದ ಸಭೆ ನಡೆಯುತ್ತಿದೆ. ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ, ಬಿ. ಎಲ್. ಸಂತೋಷ್ ಮತ್ತು ಧರ್ಮೇಂದ್ರ ಪ್ರಧಾನ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಯೋಗಿ ಪ್ರಮಾಣ ವಚನ ಸ್ವೀಕಾರಿಸುವ ಏಕಾನಾ ಕ್ರೀಡಾಂಗಣದ ವಿಶೇಷತೆ ಏನು?
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸಮಾರಂಭಕ್ಕೆ ತೆರಳಿದ್ದ ಯೋಗಿ ಆದಿತ್ಯನಾಥ್ ಅಲ್ಲಿಂದ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ. ಯೋಗಿ ಸಂಪುಟ ರಚನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಮಿತ್ಗೆ ಹಲವು ಸೂಚನೆಗಳನ್ನು ನೀಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಮಾಣವಚನಕ್ಕೆ ಮಾ.25ರ ಮುಹೂರ್ತ
ಕಳೆದ ವಾರ ಅಮಿತ್ ಶಾ ಲಕ್ನೋಗೆ ಭೇಟಿ ನೀಡಿದ್ದರು. ಆಗ ಯೋಗಿ ಆದಿತ್ಯನಾಥ್ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಒಂದು ಸುತ್ತಿನ ಸಭೆ ನಡೆಸಿದ್ದರು. 2ನೇ ಬಾರಿಗೆ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಿದ್ದು, ಹಲವು ಹೊಸ ಶಾಸಕರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ.
ಕಳೆದ ಬಾರಿ ಯೋಗಿ ಆದಿತ್ಯನಾಥ್ ಸಂಪುಟದಲ್ಲಿದ್ದ ಕೆಲವು ಸಚಿವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಸುದ್ದಿಗಳು ಹಬ್ಬಿವೆ. ದೆಹಲಿಯ ಅಮಿತ್ ಶಾ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಸಂಪುಟದಲ್ಲಿ ಎಲ್ಲಾ ವರ್ಗಕ್ಕೂ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಸ್ವತಂತ್ರ ದೇವ್ ಸಿಂಗ್, ಬ್ರಜೇಶ ಪಾಠಕ್, ಶ್ರೀಕಾಂತ್ ಶರ್ಮಾ, ಕನ್ವರ್ ಬ್ರಿಜೇಶ್ ಸಿಂಗ್, ಅದಿತಿ ಸಿಂಗ್, ರಾಜೇಶ್ವರ್ ಸಿಂಗ್ ಯೋಗಿ ಆದಿತ್ಯ ನಾಥ್ ಜೊತೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಉಪ ಮುಖ್ಯಮಂತ್ರಿಗಳು; ಉತ್ತರ ಪ್ರದೇಶದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಇಬ್ಬರು ಹಿರಿಯ ಶಾಸಕರು, ಮೂವರು ಹೊಸಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಬ್ರಿಜೇಶ್ ಪಾಠಕ್, ಬೇಬಿ ರಾಣಿ ಮೌರ್ಯ, ದಿನೇಶ್ ಶರ್ಮಾ, ಕೇಶವ ಪ್ರಸಾದ್ ಮೌರ್ಯ ಹೆಸರುಗಳು ಕೇಳಿ ಬರತ್ತಿವೆ.
ಬ್ರಾಹ್ಮಣ ಮತ್ತು ಪಾಠಕ್ ಸಮುದಾಯದ ಇಬ್ಬರು ಶಾಸಕರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬುದು ಪಕ್ಷದ ಲೆಕ್ಕಾಚಾರ. ಉಳಿದಂತೆ ಕಳೆದ ಅವಧಿಯಲ್ಲಿ ಡಿಸಿಎಂಗಳಾಗಿದ್ದ ಇಬ್ಬರನ್ನು ಮುಂದುವರೆಸಬೇಕು ಎಂಬುದು ಸಹ ಬೇಡಿಕೆಯಾಗಿದೆ.
ಒಟ್ಟು 7 ಹಂತಗಳಲ್ಲಿ 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಬಿಜೆಪಿ 273 ಸ್ಥಾನಗಳಲ್ಲಿ ಜಯಗಳಿಸಿದೆ. ಮಾರ್ಚ್ 25ರಂದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿವಿಧ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.
2017ರ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗ ಮಾರ್ಚ್ 17ರಂದು ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈಗ ಮಾರ್ಚ್ 25ರಂದು ಪ್ರಮಾಣ ವಚನ ಸಮಾರಂಭ ನಡೆಯುತ್ತಿದೆ.