ರಜೆ ಜಗಳ: ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಕೊಂದ ಸಹ ಶಿಕ್ಷಕ
ಲಕ್ನೋ, ನ. 22: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ತಾರಕಕ್ಕೇರಿ ಪ್ರಾಥಮಿಕ ಶಾಲಾ ಶಿಕ್ಷಕಿಯ ಹತ್ಯೆಯಲ್ಲಿ ಕೊನೆಗೊಂಡಿರುವ ಘಟನೆ ಸೀತಾಪುರ್ ನ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದಿದೆ.
35 ವರ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಅದೇ ಶಾಲೆಯ ಶಿಕ್ಷಕರೊಬ್ಬರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಗುಂಡೇಟು ತಿಂದು ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತು. ಆದರೆ, ಮಾರ್ಗಮಧ್ಯೆಯಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸೀತಾಪುರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆರ್ ಪಿ ಸಿಂಗ್ ಹಾಗೂ ಇನ್ನಿತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರದಂದು ನಡೆದ ಈ ಘಟನೆಯಲ್ಲಿ ಮೃತಪಟ್ಟ ಶಿಕ್ಷಕಿಯನ್ನು ಆರಾಧನ ರಾಯ್ ಎಂದು ಗುರುತಿಸಲಾಗಿದೆ. ಆರಾಧನ ಅವರಿಗೆ ಅದೇ ಶಾಲೆಯ ಶಿಕ್ಷಕ ಅಮಿತ್ ಕೌಶಲ್ ಎಂಬುವರು ಎರಡು ಬಾರಿ ಗುಂಡು ಹಾರಿಸಿದ್ದರು. ನಂತರ ಗಾಬರಿಯಿಂದ ಅಲ್ಲಿಂದ ಕಾಲ್ಕಿತ್ತಿದ್ದರು.
ಭಾನುವಾರದಂದು ಅಮಿತ್ ಕೌಶಲ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿದಾಗ, ಇಬ್ಬರು ಟೀಚರ್ ಗಳ ನಡುವೆ ಸಿಎಲ್(Casual leave) ನೋಂದಣಿ ಬಗ್ಗೆ ಮಾತಿನ ಚಕಮಕಿ ನಡೆದಿದೆ. ಶಾಲೆ ಸಿಬ್ಬಂದಿಗಳ ರಜೆ ನೋಂದಣಿ ಪುಸ್ತಕದಲ್ಲಿ ತಪ್ಪಾಗಿ ಎಂಟ್ರಿ ಮಾಡಲಾಗಿದೆ ಎಂಬ ಕಾರಣಕ್ಕೆ ನಡೆದ ಜಗಳ ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ.
Recommended Video
ಅಮಿತ್ ಹಾಗೂ ಆರಾಧನಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರಿಗೂ ವೈಮನಸ್ಯ ಉಂಟಾಗಿತ್ತು. ಕೌಶಲ್ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ಆರಾಧಾನ ಇತ್ತೀಚೆಗೆ ದೂರು ಕೂಡಾ ನೀಡಿದ್ದರು. ಕೌಶಲ್ ವಿರುದ್ಧ ವಿಚಾರಣೆ ನಡೆದು ಎಚ್ಚರಿಕೆ ನೀಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಕೌಶಲ್ ಪೂರ್ವನಿಯೋಜಿತರಾಗಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.