ಮೀರತ್ ನಲ್ಲಿ ಚಲಿಸುವ ಬಸ್ ನಲ್ಲೇ ಮಹಿಳೆ ಮೇಲೆ ಅತ್ಯಾಚಾರ
ಲಕ್ನೋ, ಸಪ್ಟೆಂಬರ್.27: ನವದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣವನ್ನೇ ನೆನಪಿಸುವಂತಾ ಮತ್ತೊಂದು ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಚಲಿಸುವ ಬಸ್ ನಲ್ಲಿ ಮಹಿಳಾ ಪ್ರಯಾಣಿಕೆ ಮೇಲೆ ಬಸ್ ಚಾಲಕ ಮತ್ತು ನಿರ್ವಾಹಕರಿಂದಲೇ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದಲ್ಲಿ ಕಳೆದ ಒಂದೇ ತಿಂಗಳಿನಲ್ಲಿ ಸಂಚರಿಸುವ ಬಸ್ ನಲ್ಲೇ ಮಹಿಳೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಮೂರನೇ ಪ್ರಕರಣ ಇದಾಗಿದೆ. ಶನಿವಾರ ಮೀರತ್ ನಲ್ಲಿರುವ ದೆಹಲಿ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
'ಆಪರೇಷನ್ ದುರಾಚಾರಿ': ಮಹಿಳೆಯರನ್ನು ಚುಡಾಯಿಸುವವರಿಗೆ ಮಾರಿಹಬ್ಬ
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮಹಿಳೆಯು ಶುಕ್ರವಾರ ರಾತ್ರಿ ಬೈಸಲಿ ಬಪಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಬಸ್ ನಲ್ಲಿ ಕುಡಿಯಲು ಸಾಫ್ಟ್ ಡ್ರಿಂಕ್ ನ್ನು ನೀಡಲಾಗಿತ್ತು. ಅದನ್ನು ಸೇವಿಸದ ನಂತರ ಮಹಿಳೆಯ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯ ಮೇಲೆ ಬಸ್ ಚಾಲಕ ಮತ್ತು ನಿರ್ವಾಹಕನು ಅತ್ಯಾಚಾರ ನಡೆಸಿದ್ದಾರೆ. ನಂತರದಲ್ಲಿ ಮಹಿಳೆಯನ್ನು ಮೀರತ್ ನಲ್ಲಿರುವ ದೆಹಲಿ ರಸ್ತೆಯಲ್ಲಿ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಮಹಿಳೆಯಿಂದ ಮಾಹಿತಿ ಪಡೆದ ಪೊಲೀಸರು:
ಮೀರತ್ ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಸಂತ್ರಸ್ತ ಮಹಿಳೆಯಿಂದ ಪೊಲೀಸರು ಹೇಳಿಕೆ ಸಂಗ್ರಹಿಸಿದ್ದಾರೆ. ಮೀರತ್ ಎಸ್ಎಸ್ ಪಿ ಅಜಯ್ ಸಾಹಿನಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.