ಹೆಂಡತಿ ಡಿಮ್ಯಾಂಡ್: "ಜಗಳವಾಡದ ಗಂಡನಿಂದ ಡೈವರ್ಸ್ ಕೊಡಿ ಪ್ಲೀಸ್"
ಲಕ್ನೋ, ಆಗಸ್ಟ್.23: "ನನ್ ಗಂಡ ದಿನವೂ ಕುಡಿದುಕೊಂಡು ಬಂದು ನನಗೆ ಹೊಡೀತಾರೆ. ನೆಟ್ಟಗೆ ಉದ್ಯೋಗ ಮಾಡೋದಿಲ್ಲ. ಮನೆಯಲ್ಲಿ ನನ್ ಸಹಾಯಕ್ಕೆ ಬರೋದೇ ಇಲ್ಲ. ಅಯ್ಯೋ ನಮ್ ಅತ್ತೆ ಕಾಟವನ್ನಂತೂ ನನ್ನಿಂದ ತಡೆಯೋದಕ್ಕೆ ಆಗೋದಿಲ್ಲ". ಹೀಗೆ ಮದುವೆಯಾದ ಹೆಣ್ಣು ಮಕ್ಕಳು ದೂರು ಹೇಳುವುದು ಕಾಮನ್.
ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಇದೆಲ್ಲಕ್ಕಿಂತಲೂ ಡಿಫರೆಂಟ್. ಇಲ್ಲಿ ಗಂಡನಿಂದ ವಿಚ್ಛೇಧನಕ್ಕೆ ಅರ್ಜಿ ಹಾಕಿರುವ ಪತ್ನಿಯು ನೀಡಿರುವ ಕಾರಣಗಳ ಪಟ್ಟಿಯನ್ನು ನೋಡುತ್ತಿದ್ದಂತೆ ಎಂಥವರೂ ಹುಬ್ಬೇರಿಸುತ್ತಾರೆ. ಅಚ್ಚರಿಯ ಜೊತೆಗೆ ವಿಚಿತ್ರ ಎನಿಸುವ ಡೈವರ್ಸ್ ಸ್ಟೋರಿ ಇಲ್ಲಿದೆ.
ಆಸ್ತಿ ವಿಚಾರಕ್ಕಾಗಿ ಗಂಡನ ಕಡೆಯವರಿಂದಲೇ ಕೊಲೆ; ಏಳು ಮಂದಿ ಬಂಧನ
ಕಳೆದ 18 ತಿಂಗಳ ಹಿಂದೆ ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟ ಪತ್ನಿ ಇದೀಗ ತನ್ನ ಪತಿಯಿಂದ ತನಗೆ ವಿಚ್ಛೇದನ ನೀಡುವಂತೆ ಶಾರಿಯಾ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪತಿಯು ತನ್ನ ಜೊತೆಗೆ ಜಗಳವಾಡುತ್ತಿಲ್ಲ. ಈ ಹಿನ್ನೆಲೆ ಇಂಥ ಪತಿಯ ಜೊತೆಗೆ ಜೀವನ ಸಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಕಾರಣವನ್ನು ಉಲ್ಲೇಖಿಸಿದ್ದಾರೆ. ಇದೇ ರೀತಿ ಪತ್ನಿಯು ಉಲ್ಲೇಖಿಸಿರುವ ಕಾರಣಗಳು ಒಂದಕ್ಕಿಂತ ಒಂದು ವಿಚಿತ್ರ, ವಿಭಿನ್ನ ಎನ್ನಿಸುತ್ತವೆ.
"ಜಗಳವಾಡದ ಗಂಡನ ಜೊತೆ ಜೀವನ ಮಾಡಲಾರೆ"
"ಮದುವೆಯಾಗಿ 18 ತಿಂಗಳುಗಳೇ ಕಳೆದು ಹೋಗಿವೆ. ಇಷ್ಟು ದಿನಗಳಲ್ಲಿ ನನ್ನ ಗಂಡ ನನ್ನ ಜೊತೆಗೆ ಒಮ್ಮೆಯೂ ಜಗಳವಾಡಿಲ್ಲ. ಸದಾ ಪ್ರೀತಿಯಿಂದ ನೋಡಿಕೊಳ್ಳುವ, ಜಗಳವಾಡದ ಗಂಡನೊಂದಿಗೆ ಜೀವನ ಸಾಗಿಸುವುದೇ ತುಂಬಾ ಬೇಸರ ಎನಿಸುತ್ತಿದೆ" ಹೀಗಾಗಿ ನನಗೆ ವಿಚ್ಛೇದನ ನೀಡುವಂತೆ ಪತ್ನಿಯು ತನ್ನ ಅರ್ಜಿಯಲ್ಲಿ ಮನವಿ ಸಲ್ಲಿಸಿದ್ದಾರೆ.
"ನನಗೆ ಅಡುಗೆ ಮಾಡುವುದರಲ್ಲೂ ಸಹಾಯ ಮಾಡುತ್ತಾರೆ"
"ನನ್ನ ಗಂಡ ನನ್ನೊಂದಿಗೆ ಯಾವಾಗಲೂ ಪ್ರೀತಿಯಿಂದಲೇ ನಡೆದುಕೊಳ್ಳುತ್ತಾರೆ. ನಾನು ಅಡುಗೆ ಮಾಡುತ್ತಿರುವ ಸಂದರ್ಭಗಳಲ್ಲಿ ಸ್ವತಃ ಅವರೇ ತಮಗೆ ಸಹಾಯ ಮಾಡುವುದಕ್ಕೆ ಬರುತ್ತಾರೆ. ಅದೆಷ್ಟೋ ಬಾರಿ ನನ್ನ ಗಂಡನೇ ಮನೆಯಲ್ಲಿ ಅಡುಗೆ ಮಾಡಿ ನೀಡಿರುವ ಉದಾಹರಣೆಗಳಿವೆ. ಈ ಪ್ರೀತಿಯೇ ನನ್ನನ್ನು ಉಸಿರುಗಟ್ಟುವಂತೆ ಮಾಡುತ್ತಿದೆ. ಹೀಗಾಗಿ ನಾನು ಅವರೊಂದು ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಪತ್ನಿ ದೂರಿದ್ದಾರೆ.
"ಎಲ್ಲ ತಪ್ಪುಗಳನ್ನು ಕ್ಷಮಿಸಿ, ಪ್ರೀತಿಸುವ ಪತಿರಾಯ ಬೇಕಾಗಿಲ್ಲ"
"18 ತಿಂಗಳ ಜೀವನದಲ್ಲಿ ಒಂದು ಬಾರಿಯೂ ನನ್ನ ಗಂಡ ನನ್ನ ಮೇಲೆ ಮುನಿಸಿಕೊಂಡಿಲ್ಲ. ಕೋಪದಿಂದ ಬೈದಿಲ್ಲ, ನಾನು ಬೇಸರಗೊಳ್ಳುವಂತೆ ನಡೆದುಕೊಂಡಿಲ್ಲ. ನಾನು ಅವರ ಜೊತೆಗೆ ಜಗಳವಾಡುವುದಕ್ಕೆ ಬಯಸುತ್ತೇನೆ. ಆದರೆ ಪ್ರತಿಬಾರಿ ನಾನು ತಪ್ಪು ಮಾಡಿದಾಗಲೂ ನನ್ನ ಗಂಡ ನನ್ನನ್ನು ಕ್ಷಮಿಸುತ್ತಾರೆ. ಇಂಥ ಗಂಡನ ಜೊತೆಗೆ ಯಾವುದೇ ಕಾರಣಕ್ಕೂ ಜೀವನ ನಡೆಸಲು ಆಗುವುದಿಲ್ಲ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಶರಿಯಾ ಕೋರ್ಟ್ ನಲ್ಲಿ ವಿಚ್ಛೇದನ ಅರ್ಜಿ ನಿರಾಕರಣೆ
ಮಹಿಳೆಯು ಸಲ್ಲಿಸಿದ ವಿಚ್ಧೇನದ ಅರ್ಜಿಯಲ್ಲಿರುವ ಕಾರಣಗಳನ್ನು ಕಂಡು ಸ್ವತಃ ಶರಿಯಾ ಕೋರ್ಟ್ ಪಾದ್ರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನೀಡುವುದಕ್ಕೆ ಸಾಧ್ಯವಿಲ್ಲ ಎಂದ ಶಾರಿಯಾ ಕೋರ್ಟ್, ಅರ್ಜಿ ವಿಚಾರಣೆ ನಡೆಸುವುದಕ್ಕೆ ನಿರಾಕರಿಸಿದೆ. ನಂತರದಲ್ಲಿ ಸ್ಥಳೀಯ ಪಂಚಾಯಿತಿಗೆ ಮೊರೆ ಸಲ್ಲಿಸಿದರೂ ಅರ್ಜಿಯನ್ನು ನಿರಾಕರಿಸಲಾಗಿದೆ. ಇನ್ನು, ಅರ್ಜಿ ವಿಚಾರಣೆ ಬಗ್ಗೆ ಪ್ರಶ್ನಿಸಿದಾಗ ತನ್ನ ಪತ್ನಿಗೆ ಉತ್ತಮ ಪತಿಯಾಗಿ ನಡೆದುಕೊಳ್ಳುವಲ್ಲಿ ಯಾವುದೇ ರೀತಿ ತಪ್ಪು ಮಾಡಿದ್ದೀನಿ ಎಂದು ನನಗೆ ಎನ್ನಿಸುತ್ತಿಲ್ಲ ಎಂದು ಪತಿ ಹೇಳಿಕೆ ನೀಡಿದ್ದಾರೆ.